ಸಿಎಂ ಸಿದ್ದರಾಮಯ್ಯ ವಿಡಿಯೋ ವೈರಲ್: ಉಚ್ಚಾಟಿಸುವಂತೆ ಡಿಕೆಶಿಗೆ ಆರ್.ಅಶೋಕ್ ಸವಾಲು
ಬೆಂಗಳೂರು, ಏಪ್ರಿಲ್ 30: 'ಉತ್ತರನ ಪೌರುಷ ಒಲೆಯ ಮುಂದೆ' ಎನ್ನುವ ಹಾಗೆ ನಿಮ್ಮ ಪ್ರತಾಪ ಬರೀ ಮಾಧ್ಯಮಗಳ ಮುಂದೆ ಡೈಲಾಗ್ ಹೊಡೆಯೋದಕ್ಕೆ ಮಾತ್ರ ಸೀಮಿತವಾ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಪ್ರಶ್ನೆ ಮಾಡಿದ್ದಾರೆ. ಬಿಜೆಪಿ ನಾಯಕರಿಗೆ ರಾಜ್ಯದಲ್ಲಿ ಒಂದೂ ಕಾರ್ಯಕ್ರಮ ನಡೆಸಿಕೊಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದ ಉಪಮುಖ್ಯಮಂತ್ರಿಗಳಿಗೆ ಆರ್.ಅಶೋಕ್ ಸವಾಲೆಸೆದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿ ಮೇಲೆ ಕೈ ಮಾಡಲು ಮುಂದಾಗಿದ್ದ ವಿಚಾರ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಕುರಿತು ಡಿಕೆ ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿರುವ ಆರ್.ಅಶೋಕ್ ಅವರು ಸವಾಲು ಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಹಳೇಯ ಪ್ರತಿಭಟನೆ ಕುರಿತು ಮಾತನಾಡಿದ್ದಾರೆ. ಸಿಎಂ ವಿರುದ್ಧ ಕ್ರಮ ಕೈಗೊಳ್ಳಲು ಆಗುತ್ತಾ? ಎಂದು ಕಿರಿ ಕಾರಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಕಪ್ಪು ಬಾವುಟ ತೋರಿಸಿದ್ದ ಸಿದ್ದರಾಮಯ್ಯನವರನ್ನ ಪಕ್ಷದಿಂದ ಉಚ್ಛಾಟನೆ ಮಾಡೋ ಧಮ್ ಇದೆಯಾ ಡಿಕೆ ಶಿವಕುಮಾರ್ ಅವರೇ? "ಉತ್ತರನ ಪೌರುಷ ಒಲೆಯ ಮುಂದೆ" ಎನ್ನುವಂತೆ ಮಾಧ್ಯಮಗಳ ಮುಂದೆ ಮಾತ್ರ ಸೀಮಿತರಾಗಿದ್ದೀರಾ? ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ಬಿಜೆಪಿಗೆ ಒಂದೇ ಒಂದು ಸಭೆ ಮಾಡಲೂ ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದೀರಿ. ನಿಮಗೆ ನಿಜವಾಗಿಯೂ ತಾಕತ್ತಿದ್ದರೆ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರಿಗೆ ಕಪ್ಪು ಬಾವುಟ ತೋರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಪಕ್ಷದಿಂದ ಉಚ್ಛಾಟನೆ ಮಾಡಿ ನೋಡೋಣ ಎಂದರು.
ನಿಮ್ಮ ಕಾಂಗ್ರೆಸ್ ಪಕ್ಷದ ಸರ್ವೋಚ್ಚ ನಾಯಕಿ ಪ್ರಧಾನಿ ಆಗಿದ್ದಾಗ ಕಪ್ಪು ಬಾವುಟ ತೋರಿಸಿದ್ದ ವ್ಯಕ್ತಿಯನ್ನು ಪಕ್ಷಕ್ಕೆ ಕರೆದುಕೊಂಡು ಬಂದು ಎರಡೆರಡು ಬಾರಿ ಮುಖ್ಯಮಂತ್ರಿ ಮಾಡಿದ್ದೀರಿ. ಅವರ ಋಣದಲ್ಲಿ ಅಧಿಕಾರ ಅನುಭವಿಸುತ್ತಿರುವ ನೀವು ಕರ್ನಾಟಕ ಬಿಜೆಪಿ ಕಾರ್ಯಕ್ರಮಗಳಿಗೆ ತಡೆ ಮಾಡುವ, ಪ್ರತಿಭಟನೆಗೆ ಧಮ್ಕಿ ಹಾಕುವ ಯಾವ ನೈತಿಕತೆ ಇದೆ? ಎಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಅವರು ಪೊಲೀಸ್ ಅಧಿಕಾರಿ ಮೇಲೆ ಕೈ ಮಾಡಲು ಮುಂದಾದ ವೇಳೆ ಸಿಎಂ ವೇದಿಕೆ ಮೇಲಿದ್ದರು. ಪ್ರತಿಭಟನಾ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ವೇಳೆ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಶಾಲು ಹಾಕಿಕೊಂಡು ಬಂದು ತೊಂದರೆ ನೀಡಿದ್ದಾರೆ. ಕಪ್ಪು ಭಾವುಟ ಪ್ರದರ್ಶಿಸಿದ್ದಾರೆ ಎಂಬ ಆರೋಪ ಇದೆ. ಈ ಘಟನೆ ಬಳಿಕ ಡಿಕೆ ಶಿವಕುಮಾರ್ ಅವರು ನಿಮ್ಮ ಕಾರ್ಯಕರ್ತರಿಗೆ ಬುದ್ಧಿ ಹೇಳಿ ಸರಿ ಮಾಡಿ. ಇಲ್ಲವಾದರೆ ನಿಮ್ಮಗಳ ಕಾರ್ಯಕ್ರಮ ನಡೆಸಲು ಬಿಡುವುದಿಲ್ಲ ಎಂದಿದ್ದರು.
ಇದರ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಹಳೇಯ ವಿಡಿಯೋ ವೈರಲ್ ಆಗಿದೆ. ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಸಿಎಂ, ತಾವು ಪ್ರತಿಭಟನೆ ಮಾಡಿದ್ದನ್ನು ಸ್ಮರಿಸಿದ್ದಾರೆ. ''1971 ಮೈಸೂರಲ್ಲಿ ಇಂದಿರಾ ಗಾಂಧಿ ಅವರ ಸಾರ್ವಜನಿಕ ಸಭೆ ಆಯೋಜನೆಗೊಂಡಿತ್ತು. ನಾನು ಮತ್ತು ಏಳೆಂಟು ಸ್ನೇಹಿತರು ಕೂಡಿಕೊಂಡು ಇಂದಿರಾಗಾಂಧಿ ಅವರಿಗೆ ಕಪ್ಪು ಭಾವುಟ ಹಿಡಿಯಲು ಪ್ರತಿಭಟನೆ ಮಾಡಲು ನಿರ್ಧರಿಸಿವೆ. ಕಾರ್ಯಕ್ರಮದ ಮಾರನೇ ದಿನ ಯಾರು ಬಾರದೇ ನಾನು ಮತ್ತು ಸ್ನೇಹಿತ ಇಬ್ಬರೇ ಉಳಿದೆವೆಉ. ಬೆಳಗ್ಗೆ ರಸ್ತೆಗೆ ಹೋಗಿ ಪ್ರತಿಭಟನೆ ಮಾಡಿದೆವು. ಆಗ ಪೊಲೀಸರ ಎಳೆದುಕೊಂಡು ಸರಿಯಾಗಿ ಹೊಡೆದು ಕಳುಹಿಸಿದರು'' ಎಂದು ತಿಳಿಸಿದ್ದಾರೆ.
ಅಂದು ಸಿಎಂ ಮಾಡಿದ್ದು ಅದನ್ನೆ, ಇಂದು ಬಿಜೆಪಿ ಮೇಲಿನ ಆರೋಪವು ಇದೆ ಆಗಿದೆ. ಹಾಗಾದರೆ ಕಪ್ಪು ಭಾವುಟ ತೋರಿಸಿದ ಸಿಎಂ ಅವರನ್ನು ಸ್ಥಾನದಿಂದ ಇಳಿಸಿ ಉಚ್ಚಾಟನೆ ಮಾಡುವ ಧಮ್ ಇದಿಯಾ ಎಂದು ವಿಪಕ್ಷ ನಾಯಕರು ಡಿಸಿಎಂಗೆ ಪ್ರಶ್ನಿಸಿದ್ದಾರೆ.












Click it and Unblock the Notifications