ಬೆಂಗಳೂರು; ರಸ್ತೆ ಗುಂಡಿ ಮುಚ್ಚಲು ಮತ್ತೊಂದು ಗಡುವು ಕೊಟ್ಟ ಸಚಿವರು
ಬೆಂಗಳೂರು, ಅಕ್ಟೋಬರ್ 01; ಕಂದಾಯ ಸಚಿವರು ನೀಡಿದ್ದ ಗಡುವು ಪೂರ್ಣಗೊಂಡರೂ ಬೆಂಗಳೂರು ನಗರದ ರಸ್ತೆಗಳು ಮಾತ್ರ ಗುಂಡಿ ಮುಕ್ತವಾಗಿಲ್ಲ. ಹಲವು ರಸ್ತೆಗಳಲ್ಲಿ ಗುಂಡಿಗಳು ಬಾಯ್ದೆರೆದು ಕುಳಿತಿದ್ದು, ಅಪಘಾತಕ್ಕೆ ಆಹ್ವಾನ ನೀಡುತ್ತಿವೆ.
ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕಂದಾಯ ಸಚಿವ ಆರ್. ಅಶೋಕ ಮತ್ತೆ ಹೊಸ ಗಡುವು ಕೊಟ್ಟಿದ್ದಾರೆ. "10 ದಿನದಲ್ಲಿ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ" ಎಂದು ಸಚಿವರು ಹೇಳಿದ್ದಾರೆ.
"ಬಿಬಿಎಂಪಿ ವ್ಯಾಪ್ತಿಯಲ್ಲಿ 13,874 ಕಿ. ಮೀ. ರಸ್ತೆ ಇದೆ. ಈ ಪೈಕಿ 1,344 ಕಿ. ಮೀ. ರಸ್ತೆಯಲ್ಲಿ ವಾಹನ ಸಂಚಾರ ನಡೆಸುತ್ತದೆ. 295 ಕಿ. ಮೀ. ರಸ್ತೆ ಸುಸ್ಥಿತಿಯಲ್ಲಿದೆ. 449 ಕಿ. ಮೀ. ರಸ್ತೆ ಹಾಳಾಗಿದೆ. 246 ಕಿ. ಮೀ. ರಸ್ತೆಯಲ್ಲಿ ಗುಂಡಿ ಮುಚ್ಚಲಾಗಿದೆ" ಎಂದು ಸಚಿವರು ವಿವರಣೆ ನೀಡಿದ್ದಾರೆ.

"ನಾನೇ ಹಲವು ಕಡೆ ಭೇಟಿ ನೀಡಿದ್ದೇನೆ. ಈಗಾಗಲೇ ರಸ್ತೆ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ. ಕಾಮಗಾರಿಗೆ ಪ್ಲ್ಯಾಂಟ್ನಿಂದ 16 ಲೋಡ್ ಜೆಲ್ಲಿ ಅಗತ್ಯವಿದೆ. ಆದರೆ ಮಳೆ ಕಾರಣ ಜೆಲ್ಲೆ ನೆನೆದಿದ್ದು, 12 ಲೋಡ್ ಸಹ ಸಿಗುತ್ತಿಲ್ಲ. ಇದರಿಂದ ಗುಂಡಿ ಮುಚ್ಚಲು ಸಾಧ್ಯವಾಗಿಲ್ಲ" ಎಂದರು.
ಸೆಪ್ಟೆಂಬರ್ 6ರಂದು ಬಿಬಿಎಂಪಿ ಅಧಿಕಾರಿಗಳು 1138 ರಸ್ತೆ ಗುಂಡಿಗಳಿವೆ ಎಂದು ಮಾಹಿತಿ ನೀಡಿದ್ದರು. ನಂತರ ಸೆಪ್ಟೆಂಬರ್ 21ರಂದು ಎಲ್ಲಾ ಗುಂಡಿ ಮುಚ್ಚಿದ್ದು, 194 ಗುಂಡಿಗಳು ಮಾತ್ರ ಬಾಕಿ ಇದೆ ಎಂದು ಹೇಳಿದ್ದರು. ಆಗಲೇ ಸೆಪ್ಟೆಂಬರ್ 30ರೊಳಗೆ ಎಲ್ಲಾ ಗುಂಡಿಗಳನ್ನು ಮುಚ್ಚುವಂತೆ ಗಡುವು ಕೊಡಲಾಗಿತ್ತು.
ಬಿಬಿಎಂಪಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ವೈಖರಿ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿದೆ. ರಸ್ತೆಗಳ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳು ಕಾಳಜಿ ತೋರಿಸುತ್ತಿಲ್ಲ ಎಂದು ಅರ್ಜಿಗಳ ವಿಚಾರಣೆ ಸಮಯದಲ್ಲಿ ಎಚ್ಚರಿಕೆಯನ್ನು ನೀಡಿದೆ.
ಬೆಂಗಳೂರು ನಗರದಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದ ಕೆಲವು ಅಪಘಾತಗಳಲ್ಲಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ನಡೆದ ಅಪಘಾತಗಳು ಸೇರಿವೆ. ಕೆಲವು ಜನರು ಅಪಘಾತದಲ್ಲಿ ಪ್ರಾಣವನ್ನು ಸಹ ಕಳೆದುಕೊಂಡಿದ್ದಾರೆ.
ಕಾಮಾಕ್ಷಿಪಾಳ್ಯ ಸಂಚಾರಿ ವಿಭಾಗದ ವ್ಯಾಪ್ತಿಯ ಮಂಗನಹಳ್ಳಿ ಮುಖ್ಯ ರಸ್ತೆಯಲ್ಲಿ ಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನ ಅಪಘಾತ ನಡೆದಿತ್ತು. ಸವಾರ ಖುರ್ಷಿದ್ ಅದ್ಮದ್ (45) ಮೃತಪಟ್ಟಿದ್ದರು.
ಈಗ ಸಚಿವ ಆರ್. ಅಶೋಕ ನಗರದ ಪ್ರಮುಖ ರಸ್ತೆಗಳ ಗುಂಡಿಗಳನ್ನು ಮುಚ್ಚಲು 10 ದಿನದ ಗಡುವು ಕೊಟ್ಟಿದ್ದಾರೆ. ಒಳ ರಸ್ತೆಗಳನ್ನು ಸ್ಥಳೀಯ ಗುತ್ತಿಗೆದಾರರು 25 ದಿನದಲ್ಲಿ ಮುಚ್ಚಬೇಕು ಎಂದು ಸೂಚನೆ ಕೊಟ್ಟಿದ್ದಾರೆ. ಇದನ್ನು ಅಧಿಕಾರಿಗಳು ಪಾಲನೆ ಮಾಡಲಿದ್ದಾರೆಯೇ? ಕಾದು ನೋಡಬೇಕಿದೆ.
ಶಿಥಿಲ ಕಟ್ಟಡಗಳ ತೆರವು; ಕಂದಾಯ ಸಚಿವ ಆರ್. ಅಶೋಕ ಬೆಂಗಳೂರು ನಗರದ ಶಿಥಿಲ ಕಟ್ಟಡಗಳ ತೆರವು ಬಗ್ಗೆ ಸಹ ಮಾತನಾಡಿದ್ದಾರೆ. "2019ರಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ನಗರದಲ್ಲಿ 185 ಶಿಥಿಲ ಕಟ್ಟಡಗಳು ಇವೆ. 175 ಕಟ್ಟಡಗಳನ್ನು ಇನ್ನೂ ಒಡೆಯಬೇಕಿದೆ" ಎಂದು ಸಚಿವರು ಹೇಳಿದ್ದಾರೆ.
"ಶಿಥಿಲ ಕಟ್ಟಡಗಳನ್ನು ತೆರವುಗೊಳಿಸಲು ಒಂದು ವಾರದ ಗಡುವು ನೀಡಲಾಗಿದೆ. ಕಟ್ಟಡವನ್ನು ತೆರವು ಮಾಡಲು ಸಹಕಾರ ನೀಡದಿದ್ದರೆ ಮೊದಲು ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗುತ್ತದೆ. ಬಳಿಕ ಪೊಲೀಸರ ಭದ್ರತೆಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ" ಎಂದು ಸಚಿವರು ಎಚ್ಚರಿಕೆ ಕೊಟ್ಟರು.
"ಹೊಸದಾಗಿ ಸಮೀಕ್ಷೆ ನಡೆಸಿ ಶಿಥಿಲ ಕಟ್ಟಡಗಳನ್ನು ಗುರುತಿಸಲು 15 ದಿನ ಅವಕಾಶ ನೀಡಲಾಗಿದೆ. ಮಾಲೀಕರು ಕಟ್ಟಡ ತೆರವುಗೊಳಿಸದಿದ್ದರೆ ಪಾಲಿಕೆಯೇ ತೆರವು ಮಾಡುತ್ತದೆ. ಅದರ ಖರ್ಚನ್ನು ಮಾಲೀಕರ ಆಸ್ತಿ ತೆರಿಗೆಗೆ ಸೇರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ" ಎಂದು ಆರ್. ಅಶೋಕ ತಿಳಿಸಿದರು.












Click it and Unblock the Notifications