Director's Day : ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಗೆ ಚಿತ್ರಮಂಡಳಿ ನೀಡಿದ ಅರ್ಹ ಗೌರವ
ಬೆಂಗಳೂರು, ಡಿ. 01: ಭಾರತೀಯ ಸಿನಿರಂಗದಲ್ಲಿ ತಮ್ಮದೇ ಛಾಪು ಉಳಿಸಿಹೋಗಿರುವ, ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್. ಅವರ ಜನ್ಮದಿನವಾದ ಡಿಸೆಂಬರ್ ಒಂದನ್ನು ಇನ್ನು ಮುಂದೆ ನಿರ್ದೇಶಕರ ದಿನವಾಗಿ ಆಚರಿಸಲಾಗುತ್ತದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಘೋಷಿಸಿದೆ.
ಗುರುವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪುಟ್ಟಣ್ಣ ಕಣಗಾಲ್ ಜಯಂತಿಯನ್ನು ಆಚರಣೆ ಮಾಡಿತು. ಇದೇ ವೇಳೆ ಪುಟ್ಟಣ್ಣ ಕಣಗಾಲ್ ಜನ್ಮದಿನವನ್ನು 'ನಿರ್ದೇಶಕರ ದಿನ' ಎಂದು ಆಚರಿಸಲು ವಾಣಿಜ್ಯ ಮಂಡಳಿ ನಿರ್ಧರಿಸಿರೋದಾಗಿ ಘೋಷಿಸಲಾಯಿತು.
ದಾವಣಗೆರೆಯಲ್ಲಿ ತ್ರಿಬಲ್ ರೈಡಿಂಗ್ ಸಿನಿಮಾ ತಂಡದಿಂದ ವಿಜಯಯಾತ್ರೆ ಸಂಭ್ರಮ
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ ಹರೀಶ್ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ತೆಲುಗು ಚಿತ್ರರಂಗದಲ್ಲೂ 'ನಿರ್ದೇಶಕರ ದಿನ' ಎಂದಿದೆ. ನಮ್ಮಲ್ಲೂ ಪ್ರತಿ ವರ್ಷ ಡಿಸೆಂಬರ್ 1ರ ಪುಟ್ಟಣ್ಣ ಕಣಗಾಲ್ ಜನ್ಮದಿನವನ್ನು 'ನಿರ್ದೇಶಕರ ದಿನ'ವನ್ನಾಗಿ ಆಚರಣೆ ಮಾಡೋಣ ಎಂದು ಪದಾಧಿಕಾರಿಗಳೆಲ್ಲರೂ ಸೇರಿ ಚರ್ಚೆ ಮಾಡಿ ನಿರ್ಧಾರ ಮಾಡಿಕೊಂಡಿದ್ದೇವೆ" ಎಂದು ತಿಳಿಸಿದರು.
ಪ್ರತಿ ವರ್ಷ ಡಿಸೆಂಬರ್ 1 ರಂದು ನಿರ್ದೇಶಕರ ದಿನ
ಈಗಿನವರ ಜೊತೆಗೆ ಮುಂದಿನ ಪೀಳಿಗೆಗೂ ಪುಟ್ಟಣ್ಣ ಕಣಗಾಲ್ ಸಿನಿಮಾಗಳ ಬಗ್ಗೆ, ನಿರ್ದೇಶನದ ಬಗ್ಗೆ ತಿಳಿಸಿಕೊಡುವಂತಹ ಕೆಲಸ ಇದರಿಂದಾಗಬೇಕು. ಆ ದೃಷ್ಟಿಯಿಂದ ಅವರ ಜನ್ಮದಿನವಾದ ಡಿಸೆಂಬರ್ 1ನ್ನು 'ನಿರ್ದೇಶಕರ ದಿನ'ವನ್ನಾಗಿ ಆಚರಣೆ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಚಿನ್ನೇಗೌಡ ಮಾತನಾಡಿ ಇತ್ತೀಚೆಗೆ ವಾಣಿಜ್ಯ ಮಂಡಳಿ ಕೆಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬರುತ್ತಿದೆ. ಈ ತರಹದ ಬೆಳವಣಿಗೆ ಆಗಬೇಕು. ಪುಟ್ಟಣ್ಣ ಕಣಗಾಲ್ ಜಯಂತಿಯನ್ನು ನಿರ್ದೇಶಕರ ದಿನ ಎಂದು ಆಚರಣೆ ಮಾಡಲು ನಿರ್ಧಾರ ಮಾಡಿದ್ದು ಬಹಳ ಒಳ್ಳೆಯ ಕೆಲಸ ಎಂದಿದ್ದಾರೆ.
ವಾಣಿಜ್ಯ ಮಂಡಳಿ ಇಟ್ಟಿರುವ ಈ ಹೆಜ್ಜೆ ಅಭಿನಂದನಾರ್ಹ
ಪುಟ್ಟಣ್ಣ ಕಣಗಾಲ್ ಜಯಂತಿಯನ್ನು ನಿರ್ದೇಶಕರ ದಿನ ಎಂದು ಘೋಷಿಸಿರುವುದು ಉತ್ತಮ ಬೆಳವಣಿಗೆ. ಈ ಮೂಲಕ ಚಿತ್ರರಂಗದಲ್ಲಿ ಏನಾಗಿತ್ತು, ಚಿತ್ರರಂಗದಲ್ಲಿ ಯಾರ್ಯಾರು ಇದ್ದರು ಎಂಬುದು ಮುಂದಿನ ಪೀಳಿಗೆಗೆ ತಿಳಿಯಬೇಕು. ಈ ನಿಟ್ಟಿನಲ್ಲಿ ವಾಣಿಜ್ಯ ಮಂಡಳಿ ಇಟ್ಟಿರುವ ಈ ಹೆಜ್ಜೆ ಅಭಿನಂದನಾರ್ಹ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಚಿನ್ನೇಗೌಡ ತಿಳಿಸಿದ್ದಾರೆ.
ಇದರ ಜೊತೆಗೆ ಪುಟ್ಟಣ್ಣ ಕಣಗಾಲ್ ಅವರೊಂದಿಗಿನ ಹಳೆಯ ದಿನಗಳನ್ನು ಚಿನ್ನೇಗೌಡ ಅವರು ಇದೇ ಸಮಯದಲ್ಲಿ ಹಂಚಿಕೊಂಡಿದ್ದಾರೆ.
ನಿರ್ದೇಶಕರಿಗೆ ಗೌರವ ತಂದು ಕೊಡುವ ಕೆಲಸವನ್ನು ಮಾಡುತ್ತೇವೆ
ನಿರ್ದೇಶಕರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎನ್. ಆರ್. ನಂಜುಡೇಗೌಡ ಮಾತನಾಡಿ ಪುಟ್ಟಣ್ಣ ಕಣಗಲ್ ಜನ್ಮದಿನವನ್ನು ನಿರ್ದೇಶಕರ ದಿನವನ್ನಾಗಿ ಆಚರಣೆ ಮಾಡಬೇಕು ಎಂದು ಘೋಷಣೆ ಆಗಿದ್ದು ಬಹಳ ಖುಷಿಯ ಸಂಗತಿ ಎಂದು ವಾಣಿಜ್ಯ ಮಂಡಳಿಯ ನಿರ್ಧಾರಕ್ಕೆ ಧನ್ಯವಾದ ತಿಳಿಸಿದ್ದಾರೆ.
"ನಿರ್ದೇಶಕರ ಸಂಘದ ಅಧ್ಯಕ್ಷನಾಗಿ ಈಗ ತಾನೇ ನಮ್ಮ ಕೆಲಸ ಆರಂಭಿಸಿದ್ದೇವೆ. ನಮ್ಮೆಲ್ಲರನ್ನು ಕರೆದು ಸನ್ಮಾನ ಮಾಡಿದ್ದು ತುಂಬಾ ಖುಷಿಯ ಸಂಗತಿ. ನಾವು ಮಾಡಬೇಕಾದ ಕೆಲಸ ತುಂಬಾ ಇದೆ ಅನ್ನೋ ಜವಾಬ್ದಾರಿಯನ್ನು ಈ ಸನ್ಮಾನ ನೀಡಿದೆ. ಮುಂದಿನ ದಿನಗಳಲ್ಲಿ ನಿರ್ದೇಶಕರಿಗೆ ಗೌರವ ತಂದು ಕೊಡುವ ಕೆಲಸವನ್ನು ನಮ್ಮ ಸಂಘ ಮಾಡಲಿದೆ. ಹಲವು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ" ಎಂದಿದ್ದಾರೆ.
ಸಿನಿಮಾ ಪ್ರಚಾರ ಮಾಡಲು ಬಂದು ದಂತಕಥೆಯಾದ ಪುಟ್ಟಣ ಕಣಗಾಲ್!
ಪುಟ್ಟಣ್ಣ ಕಣಗಾಲ್ ಎಂದು ಜನಪ್ರಿಯರಾಗಿರುವ ಶುಭ್ರವೇಷ್ಟಿ ರಾಮಸ್ವಾಮಿ ಸೀತಾರಾಮ ಶರ್ಮಾ ಅವರು ಹಿಂದಿನ ಮೈಸೂರು ಸಾಮ್ರಾಜ್ಯದ ಕಣಗಲ್ ಎಂಬ ಹಳ್ಳಿಯಲ್ಲಿ ರಾಮಸ್ವಾಮಯ್ಯ ಮತ್ತು ಸುಬ್ಬಮ್ಮ ದಂಪತಿಗೆ 1933 ರ ಡಿಸೆಂಬರ್ 1 ರಂದು ಜನಿಸಿದರು. ಜೀವನ ನಿರ್ವಹಣೆಗೆ ಅನೇಕ ಕಷ್ಟದ ಕೆಲಸಗಳನ್ನು ಮಾಡಿದ್ದ ಅವರು, ನಂತರ ಕನ್ನಡ ಸಿನಿ ರಂಗದಲ್ಲಿ ಅತ್ಯಂತ ಪ್ರಭಾವಿ ಚಲನಚಿತ್ರ ನಿರ್ದೇಶಕರಾಗಿ ಗುರುತಿಸಿಕೊಂಡವರು.
ಸಿನಿಮಾ ಪ್ರಚಾರದ ಕೆಲಸಕ್ಕೆ ಬಂದ ಅವರನ್ನು ರಂಗಭೂಮಿ ಕೈ ಬೀಸಿ ಕರೆಯಿತು ಅಲ್ಲಿಂದ ಚಿತ್ರರಂಗದ ಸೆಳೆತ ಆರಂಭವಾಯಿತು. ಬಿ.ಆರ್. ಪಂತುಲು ಅವರ ಸಹಾಯಕ ನಿರ್ದೇಶಕರಾಗಿ ಮೊದಲ ಚಿತ್ರ ರತ್ನಗಿರಿ ರಹಸ್ಯ (1957)ದಲ್ಲಿ ಕೆಲಸ ಪ್ರಾರಂಭಿಸಿದರು.