ರಾಜ್ಯ ಪೊಲೀಸ್ ಇಲಾಖೆಯ ಇತಿಹಾಸದಲ್ಲಿ ಅತಿಹೆಚ್ಚು ಮೌಲ್ಯದ ಗಾಂಜಾ ಜಪ್ತಿ
ಬೆಂಗಳೂರು, ಜುಲೈ 16: 'ಪುಷ್ಪ' ಸಿನಿಮಾ ಮಾದರಿಯಲ್ಲಿ ರಾಜಧಾನಿಗೆ ಗಾಂಜಾ ಪೂರೈಸುತ್ತಿದ್ದ ಅಂತಾರಾಜ್ಯ ಜಾಲ ಭೇದಿಸಿರುವ ಸಿಸಿಬಿ ಪೊಲೀಸರು ಭಾರೀ ಪ್ರಮಾಣದ ಗಾಂಜಾ ವಶಕ್ಕೆ ಪಡೆದಿದ್ದಾರೆ. ನಗರದ ಚಾಮರಾಜಪೇಟೆ ಪೊಲೀಸರಿಗೆ ಸಿಕ್ಕಿಬಿದ್ದ ಗಾಂಜಾ ಸುಳಿವು ಬೆಂಗಳೂರಿನಿಂದ ಆಂಧ್ರ ಪ್ರದೇಶವರೆಗೆ ವಿಸ್ತರಿಸಿದ್ದು, ಇತಿಹಾಸದಲ್ಲೇ ಅತ್ಯಧಿಕ ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.
ಮಾಧಕ ಜಾಲ ಬೇಧಿಸಿರುವ ರಾಜ್ಯದ ಪೊಲೀಸ್ ಇಲಾಖೆ ಇತಿಹಾಸದಲ್ಲೇ ಅತೀ ಹೆಚ್ಚು ಮೌಲ್ಯದ್ದು ಎನ್ನಲಾಗುತ್ತಿರುವ ಸುಮಾರು 12 ಕೋಟಿ ರೂ.ನ 1500 ಕೆ.ಜಿ. ಗಾಂಜಾ ವಶಪಡಿಸಿಕೊಂಡಿರುವ ಪೊಲೀಸರು 03 ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಸಲ್ಮಾನ್ ಪಾಷಾ (22), ಆಂಧ್ರಪ್ರದೇಶದ ಲಕ್ಷ್ಮೀ ಮೋಹನ್ ದಾಸ್ (23), ಹಾಗೂ ರಾಜಸ್ಥಾನದ ಚಂದ್ರಭಾನು ಬಿಷ್ಣೋಯಿ (24) ಎಂಬುವವರನ್ನು ಪೊಲೀಸರು ಪ್ರಕರಣದಲ್ಲಿ ಬಂಧಿಸಿದ್ದಾರೆ.
ಮೊದಲಿಗೆ ಚಾಮರಾಜಪೇಟೆ ಪೊಲೀಸರಿಗೆ ಬಂಧಿತ ಸಲ್ಮಾನ್ ಪಾಷಾ ಗಾಂಜಾ ಮಾರಾಟ ವೇಳೆ ಸಿಕ್ಕಿ ಬಿದ್ದಿದ್ದ. ಈತನ ನೀಡಿದ ಸುಳಿವಿನ ಮೇರೆಗೆ ಜಾಲ ಬೇಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ವಿಶಾಖಪಟ್ಟಣ ಗುಡ್ಡಗಾಡಿನಲ್ಲಿ ಗಾಂಜಾ ಅವ್ಯಾಹತ
ನೆರೆಯ ರಾಜ್ಯ ಆಂಧ್ರಪ್ರದೇಶದ ವಿಶಾಖಪಟ್ಟಣ ಗುಡ್ಡಗಾಡು ಪ್ರದೇಶಗಳಲ್ಲಿ ಸಾಕಷ್ಟು ಜನ ಗಾಂಜಾ ಬೆಳೆಯುತ್ತಾರೆ. ಆರೋಪಿಗಳಿಂದ ಅಲ್ಲಿಂದಲೇ ಗಾಂಜಾ ಖರೀದಿಸಿ ನಗರಕ್ಕೆ ಮಾರಾಟ ಮಾಡುತ್ತಿದ್ದರು ಎಂಬ ಅಂಶ ಗೊತ್ತಾಗಿದೆ.

ಬೆಂಗಳೂರು ಪೊಲೀಸರು ಈ ಹಿಂದೆ 1200 ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದರು. ಇದೀಗ ಅದಕ್ಕೂ ಹೆಚ್ಚು 1500 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ. ಇಷ್ಟು ಪ್ರಮಾಣದಲ್ಲಿ ಗಾಂಜಾದಲ್ಲಿ ಬಹುತೇಕ ಪಾಲು ಬೆಂಗಳೂರಿಗೆ ಸರಬರಾಜು ಆಗುತ್ತಿತ್ತು ಎನ್ನಲಾಗಿದೆ. ಈ ಸಂಬಂಧವೆ ಚೈನ್ ರೂಪದಲ್ಲಿ ಹಲವು ಪೆಡ್ಲರ್ಗಳು ಇದ್ದಾರೆಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿದರು.
ಪುಷ್ಪ ಸಿನಿಮಾ ಸ್ಟೈಲ್ನಲ್ಲಿ ಗಾಂಜಾ ಸಾಗಾಣೆ
ಕಳೆದ ವರ್ಷ ತೆರೆ ಕಂಡ ತೆಲುಗು ನಟ ಅಲ್ಲು ಅರ್ಜಿನ್ ಪುಷ್ಪ ಸಿನಿಮಾದಿಂದ ಆರೋಪಿಗಳು ಪ್ರೇರಣೆ ಪಡೆದಿರುವುದು ತಿಳಿದು ಬಂದಿದೆ. ಆ ಸಿನಿಮಾದಲ್ಲಿ ರಕ್ತ ಚಂದನವನ್ನು ಲಾರಿಗಳಲ್ಲಿ ಗುಟ್ಟಾಗಿ ಸಾಗಿಸಲಾಗುತ್ತದೆ. ಅದೇ ರೀತಿ ಇಲ್ಲಿ ಪೊಲೀಸ್ ಇಲಾಖೆಗೆ ಚೂರು ಸುಳಿವು ಸಿಗದಂತೆ ಪ್ಲಾನ್ ಮಾಡಿದ್ದರು.
ಗಾಂಜಾ ಸಾಗಿಸಲೆಂದೇ ಗೂಡ್ಸ್ ವಾಹನಗಳ ವಿನ್ಯಾಸ ಬದಲಾಯಿಸಿದ್ದರು. ವಾಹನದ ಚಸ್ಸಿ ಕೆಳಗೆ ಒಂದು ಅಡಿಯಷ್ಟು ಕಪಾಟು ರೀತಿಯಲ್ಲಿ ನಿರ್ಮಿಸಿದ್ದಾರೆ. ಅಲ್ಲಿ ಗಾಂಜಾ ವನ್ನು ತುಂಬಿಸಿಟ್ಟಿದ್ದಾರೆ. ಮಾರ್ಗ ಮಧ್ಯೆ ಪೊಲೀಸರು ಅನುಮಾನ ಬಂದ ತಪಾಸಣೆ ಮಾಡಿದರೂ ಗುಟ್ಟಾಗಿ ಇಟ್ಟ ಗಾಂಜಾ ಸಿಗದಂತೆ ಮಾಡುವುದು ಇವರ ಪ್ಲಾನ್ ಆಗಿರುತ್ತದೆ. ಮುಖ್ಯವಾಗಿ ವಿನ್ಯಾಸ ಬದಲಿಸಿದ ಈ ವಾಹನಕ್ಕೆ ಅಸಲಿ ನಂಬರ್ ಪ್ಲೇಟ್ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಂಜಾ-ಡ್ರಗ್ಸ್ ನಂತರ ಮಾದಕ ವಸ್ತುಗಳ ಜಾಲ ವಿಸ್ತರಿಸದಂತೆ, ಅವುಗಳ ತಡೆಗೆ ಅಕ್ಕಪಕ್ಕದ ರಾಜ್ಯದ ಪೊಲೀಸರ ಜೊತೆಗೆ ಸೂಕ್ತ ಸಭೆ ಮಾಡಿ ಸಮನ್ವಯ ಸಾಧಿಸಿ ಕಾರ್ಯ ನಿರ್ವಹಿಸುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ತಿಳಿಸಿದ್ದಾರೆ ಎಂದು ವರದಿ ಆಗಿದೆ.












Click it and Unblock the Notifications