ಪಿಎಸ್ಐ ನೇಮಕ ಹಗರಣ; ಹನ್ನೆರಡು ಆರೋಪಿಗಳಿಗೆ ಕೊನೆಗೂ ಸಿಕ್ಕಿತು ಜಾಮೀನು
ಬೆಂಗಳೂರು, ನ.18 ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಹನ್ನೆರಡು ಆರೋಪಿಗಳಿಗೆ ನಗರದ ಇಪ್ಪತ್ತಮೂರನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಜಾಮೀನು ಮಂಜೂರು ಮಾಡಿದೆ. ಹಾಗಾಗಿ ಕಳೆದ ಆರೇಳು ತಿಂಗಳಿಂದ ಜೈಲಿನಲ್ಲಿ ಕೊಳೆಯುತ್ತಿದ್ದವರಿಗೆ ಕೊನೆಗೂ ಬಿಡುಗಡೆಯ ಭಾಗ್ಯ ದೊರಕಿದೆ.
ಪ್ರಕರಣದಲ್ಲಿ ಮೊದಲ ಆರೋಪಿ ಎಸ್.ಜಾಗೃತ್ ಸೇರಿ ಹತ್ತು ಮಂದಿ ಅರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ನ್ಯಾಯಾಧೀಶ ಕೆ.ಲಕ್ಷ್ಮೇನಾರಾಯಣ್ ಭಟ್ ಅವರು ಪುರಸ್ಕರಿದ್ದಾರೆ. ಇಬ್ಬರು ಖಾಸಗಿ ವ್ಯಕ್ತಿಗಳಿಗೂ ಜಾಮೀನು ಸಿಕ್ಕಿದೆ, ಆದರೆ ಇನ್ನಿಬ್ಬರು ಸರ್ಕಾರಿ ಸಿಬ್ಬಂದಿಗಳಾದ ಆರೋಪಿಗಳಿಗೆ ಜಾಮೀನು ಸಿಕ್ಕಿಲ್ಲ.
ಜಾಮೀನು ಮುಂಜರಾಗಿರುವ ಆರೋಪಿಗಳೆಂದರೆ, ಜಾಗೃತ್ (ಆರೋಪಿ ಸಂಖ್ಯೆ ಎ-1), ಸೋಮನಾಥ್(ಎ3), ರಘುವೀರ್(ಎ4)ಮಮತೇಶ್ ಗೌಡ (ಎ10), ನಾರಾಯಣ ಸಿಎಂ (ಎ12), ಮಧು ಆರ್ (ಎ14), ದಿಲೀಪ್ ಕುಮಾರ್ ಸಿಕೆ (ಎ16) ರಚನಾ ಹಣಮಂತ(ಎ17), ಪ್ರವೀಣ್ ಕುಮಾರ್ (ಎ19) ಮತ್ತು ರಾಘವೇಂದ್ರ (ಎ22), ಜಾಮೀನು ದೊರೆತಿರುವವರೆಲ್ಲರೂ ಪಿಎಸ್ಐ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳಾಗಿದ್ದಾರೆ.
ಅವರ ಜತೆಗೆ ಮಧ್ಯವರ್ತಿಗಳೆನ್ನಲಾದ ಖಾಸಗಿ ವ್ಯಕ್ತಿ ಕೇಶವಮೂರ್ತಿ (ಎ22) ಮತ್ತು ಶರತ್ ಕುಮಾರ(ಎ27)ಗಳಿಗೂ ಜಾಮೀನು ಸಿಕ್ಕಿದೆ. ಆದರೆ ಸರ್ಕಾರಿ ಅಧಿಕಾರಿಗಳಾದ ಆರ್. ಮಂಜುನಾಥ್( ಎ.30 ಪೊಲೀಸ್ ಇಲಾಖೆ ಶಾಖಾಧಿಕಾರಿ) ಹರೀಶ್(ಎ 34 ಬ್ಯಾಡರಹಳ್ಳಿ ಪೊಲೀಸ್ ಸಬ್ ಇನ್ಸಪೆಕ್ಟರ್)ಗೆ ಜಾಮೀನು ಸಿಕ್ಕಿಲ್ಲ.

ಆರೋಪಿಗಳು ಒಂದು ಶ್ಯೂರಿಟಿ ಮತ್ತು 5 ಲಕ್ಷ ಮೊತ್ತದ ಬಾಂಡ್ ಸಲ್ಲಿಸಬೇಕು ಮತ್ತು ನ್ಯಾಯಾಲಯದಲ್ಲಿ 50 ಸಾವಿರ ರೂ. ಠೇವಣಿ ಇಡಬೇಕು. ಪಾಸ್ಪೋರ್ಟ್ ಸಲ್ಲಿಸಬೇಕು, ಒಂದು ವೇಳೆ ಪಾಸ್ಪೋರ್ಟ್ ಇಲ್ಲದಿದ್ದರೆ ನ್ಯಾಯಾಲಯಕ್ಕೆ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂದು ನ್ಯಾಯಾಲಯ ಷರತ್ತುಗಳನ್ನು ವಿಧಿಸಿದೆ.
545 ಪಿಎಸ್ಐ ಹುದ್ದೆಗಳ ನೇಮಕ ಅಕ್ರಮ ಹಗರಣದಲ್ಲಿ ಪಾಲ್ಗೊಂಡ ಆರೋಪ ಸಂಬಂಧ ತಾತ್ಕಾಲಿಕ ಆಯ್ಕೆಯ ಪಟ್ಟಿ ನಾಲ್ಕನೇ ಸ್ಥಾನಗಳಿಸಿದ್ದ ಜಾಗೃತ್ ಮತ್ತು ಮಹಿಳಾ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದ್ದ ರಚನಾ ಅವರನ್ನು ಸಿಐಡಿ ಪೊಲೀಸರು 2022ರ ಜು.3ರಂದು ಬಂಧಿಸಿದ್ದರು. ಆನಂತರ ಇತರೆ ಆರೋಪಿಗಳನ್ನೂ ಸಹ ಬಂಧಿಸಿದ್ದರು.
ಅವರ ವಿರುದ್ಧ ಕ್ರಿಮಿನಲ್ ಪಿತೂರಿ, ವಂಚನೆ, ನಕಲು ಮತ್ತು ವಂಚನೆಗೆ ವಿದ್ಯುನ್ಮಾನ ಸಾಧನ ಬಳಕೆ ಮಾಡಿರುವುದು ಸೇರಿದಂತೆ ಇನ್ನಿತರ ಆರೋಪಗಳಿವೆ. ಪೊಲೀಸರು ತನಿಖೆ ನಡೆಸಿ ಈಗಾಗಲೇ ವಿಚಾರಣಾ ನ್ಯಾಯಾಲಯದಲ್ಲಿ ಆರೋಪಪಟ್ಟಿಯನ್ನು ಸಲ್ಲಿಸಲಾಗಿದೆ. ಆರೋಪಿಗಳು ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್, ಆರೋಪಿಗಳ ಜಾಮೀನು ಕುರಿತು ವಿಚಾರಣಾ ನ್ಯಾಯಾಲಯವೇ ತೀರ್ಮಾನಿಸಬೇಕು ಎಂದು ಆದೇಶ ನೀಡಿತ್ತು.
ಪ್ರಕರಣದ ಹಿನ್ನೆಲೆ:
ಪಿಎಸ್ ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ. ಆ ಪ್ರಕರಣದಲ್ಲಿ ಅಮೃತ್ ಪಾಲ್ ಅವರು ಏಳನೇ ಆರೋಪಿಗಳಾಗಿದ್ದಾರೆ. ಇನ್ನೂ ಇದೇ ಪ್ರಕರಣ ಕುರಿತು ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ಗೆ ಸಂಬಂಧಿಸಿದಂತೆ 2022ರ ಜು.4ರಂದು ಬಂಧಿತರಾಗಿದ್ದ ಪೌಲ್ ಅವರು ಜು.14ರವರೆಗೆ ಪೊಲೀಸ್ ವಶದಲ್ಲಿದ್ದರು. ಆ ನಂತರ ಅವರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿತ್ತು. ಈ ಪ್ರಕರಣದಲ್ಲಿ 24ನೇ ಆರೋಪಿಯಾಗಿರುವ ಪೌಲ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಎಸಿಎಂಎಂ ಮತ್ತು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿವೆ. ಹಾಗಾಗಿ ಅವರು ಜೈಲಿನಲ್ಲಿಯೇ ಕೊಳೆಯುವಂತಾಗಿದೆ.












Click it and Unblock the Notifications