ನನ್ನನ್ನು ಕೆಣಕಿದರೆ ಹುತ್ತದಲ್ಲಿರುವ ನಾಗರಹಾವನ್ನು ಕೆಣಕಿದಂತೆ, ಎಂಟಿಬಿ
Recommended Video
ಬೆಂಗಳೂರು, ಆಗಸ್ಟ್ 30: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವೀರಪ್ಪ ಮೊಯ್ಲಿ ಅವರ ಪರ ಪ್ರಚಾರ ನಡೆಸುವ ಸಂದರ್ಭದಲ್ಲಿ ಆಗ ಸಮ್ಮಿಶ್ರ ಸರ್ಕಾರದಲ್ಲಿ ವಸತಿ ಸಚಿವರಾಗಿದ್ದ ಎಂಟಿಬಿ ನಾಗರಾಜ್ ಅವರು ನಾಗಿಣಿ ನೃತ್ಯ ಮಾಡಿದ್ದು ನಿಮಗೆ ನೆನಪಿರಬೇಕು.
ತಮ್ಮ ಎರಡೂ ಕೈಗಳನ್ನು ತಲೆಯ ಮೇಲೆ ಹಾವಿನ ಹೆಡೆಯಂತೆ ಇರಿಸಿಕೊಂಡು 'ನಾಗಿನ್' ಸಿನಿಮಾದ 'ಮನ್ ಡೋಲೆ ತೇರಾ ತನ್ ಡೋಲೆ' ಎಂಬ ಹಾಡಿಗೆ ಎಂಟಿಬಿ ನಾಗರಾಜ್ ಅವರು ಹಾವಿನಂತೆ ನರ್ತಿಸಿದ್ದರು. ಎಂಟಿಬಿ ಅವರ ಈ ನಾಗನೃತ್ಯ ಭರ್ಜರಿ ಸುದ್ದಿಯಾಗಿತ್ತು. ಅವರ ನೃತ್ಯದ ವಿಡಿಯೋ ವೈರಲ್ ಆಗಿತ್ತು. ಈ ಮೂಲಕ ಎಂಟಿಬಿ ನಾಗರಾಜ್ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು.
ಎಂಟಿಬಿ ಅವರು ಅಂದು ಮಾಡಿದ ನಾಗಿಣಿ ನೃತ್ಯಕ್ಕೂ, ಶುಕ್ರವಾರ ಅವರು ನೀಡಿರುವ ಹೇಳಿಕೆಗೂ ನಂಟು ಕಾಣಿಸುತ್ತಿದೆ! ಏಕೆಂದರೆ ಎಂಟಿಬಿ ತಮ್ಮನ್ನು ನಾಗರಹಾವಿಗೆ ಹೋಲಿಸಿಕೊಂಡಿದ್ದಾರೆ. ಅವರ ಹೆಸರಿನಲ್ಲಿಯೂ ನಾಗರಾಜ ಇದೆ. ತಮ್ಮನ್ನು ಕೆಣಕಿದರೆ ಕಚ್ಚೋದು ಖಚಿತ ಎಂದು ತಮ್ಮ ಎದುರಾಳಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಕೆಣಕಿದರೆ ಕಚ್ಚೋದು ಗ್ಯಾರಂಟಿ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್ಗೆ ಸೆಡ್ಡು ಹೊಡೆದು ಬಳಿಕ ಅನರ್ಹತೆ ಎದುರಿಸುತ್ತಿರುವ ಎಂಟಿಬಿ ನಾಗರಾಜ್, ''ನನ್ನನ್ನು ಕೆಣಕಿದರೆ ಹುತ್ತದಲ್ಲಿರುವ ನಾಗರಹಾವನ್ನು ಕೆಣಕಿದಂತೆ. ಮಲಗಿರೋ ಹಾವನ್ನು ಕೆಣಕಿದರೆ ಕಚ್ಚುವುದು ಗ್ಯಾರಂಟಿ'' ಎಂದು ಹೇಳಿದರು. ಈ ಮೂಲಕ ತಮ್ಮ ವಿರುದ್ಧ ಆರೋಪಗಳನ್ನು ಮಾಡುತ್ತಿರುವವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.

ಹೆದರುವುದು ದೇವರು, ಮತದಾರರಿಗೆ ಮಾತ್ರ
''ನಾನು ಐಟಿ ಅಧಿಕಾರಿಗಳಿಗೆ, ಮಾಧ್ಯಮಕ್ಕೆ ಭಯಬಿದ್ದು ರಾಜೀನಾಮೆ ನೀಡಿದೆ ಎನ್ನುತ್ತಿದ್ದಾರೆ. ನಾನು ಯಾರಿಗೂ ಭಯ ಬೀಳುವ ವ್ಯಕ್ತಿಯಲ್ಲ. ನಾನು ದೇವರು ಮತ್ತು ಮತದಾರರಿಗೆ ಮಾತ್ರ ಹೆದರುವುದು'' ಎಂದು ಹೊಸಕೋಟೆಯಲ್ಲಿ ಶುಕ್ರವಾರ ಮಾತನಾಡಿದ ಎಂಟಿಬಿ ನಾಗರಾಜ್ ಹೇಳಿದರು.

ನನ್ನ ವಿರುದ್ಧ ದಾಖಲೆ ಇದ್ದರೆ ಬಹಿರಂಗ ಮಾಡಿ
''5 ರಿಂದ 10 ಬಾರಿ ಸಚಿವರಾಗಿ ಲೂಟಿ ಹೊಡೆದಿರುವವರ ದಾಖಲೆಗಳು ನನ್ನ ಬಳಿ ಇವೆ. ಅಧಿಕಾರವಿದ್ದಾಗ ಎಷ್ಟು ಆಸ್ತಿ ಮಾಡಿದ್ದೀರಿ ಎಂಬ ದಾಖಲೆಗಳೂ ಇವೆ. ಹಾಗೆಯೇ ನನ್ನ ವಿರುದ್ಧ ದಾಖಲೆಗಳಿದ್ದರೆ ಮಾಧ್ಯಮಗಳ ಮುಂದೆ ತೆಗೆದುಕೊಂಡು ಬನ್ನಿ. ಇಲ್ಲದಿದ್ದರೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮುಂದೆಯಾದರೂ ತನ್ನಿ'' ಎಂದು ತಮ್ಮ ವಿರುದ್ಧ ಆರೋಪ ಮಾಡುತ್ತಿರುವವರಿಗೆ ಸವಾಲು ಹಾಕಿದರು.

ನಾನು ಅವರ ಕಥೆ ತೆಗೆದರೆ...
''ಕೆಲವು ದೊಡ್ಡ ದೊಡ್ಡ ನಾಯಕರು, 30 ಕೋಟಿ ರೂ. ತೆಗೆದುಕೊಂಡು ಬಿಜೆಪಿಗೆ ಹೋದ, ಮಗನನ್ನು ಉದ್ಧಾರ ಮಾಡಲು ಹೋದ ಎಂದು ನನ್ನ ವಿರುದ್ಧ ಆರೋಪಿಸುತ್ತಾರೆ. ಆದರೆ ನಾನೇನಾದರೂ ಆ ದೊಡ್ಡ ನಾಯಕರ ವಿಷಯ ತೆಗೆದರೆ ಅವರ ಕಥೆ ಮುಗಿಯುತ್ತದೆ. ಯಾವ ಪುರುಷಾರ್ಥಕ್ಕೆ ನಾನು ಸುಳ್ಳು ಹೇಳಲಿ? ರಾಜಕೀಯದಿಂದ ನನಗೆ ಬೇಸರ ಆಗಿದೆ. ಕಳಪೆ, ಕಲ್ಮಶ, ಸುಳ್ಳು ರಾಜಕೀಯದಿಂದ ಸಾಕಷ್ಟು ಬೇಸೆತ್ತಿದ್ದೇನೆ'' ಎಂದು ಹೇಳಿದರು.












Click it and Unblock the Notifications