ಡಿಸೆಂಬರ್ 31ರಿಂದ ಬೆಂಗಳೂರಿನಲ್ಲಿ ಕಸ ಸಂಗ್ರಹಣೆ ಬಂದ್
ಬೆಂಗಳೂರು, ಡಿಸೆಂಬರ್ 24; ಉದ್ಯಾನ ನಗರಿ ಬೆಂಗಳೂರಿನಲ್ಲಿ ಕಸ ಸಂಗ್ರಹಣೆ ಸ್ಥಗಿತಗೊಳಿಸಲಾಗುತ್ತದೆ ಎಂದು ಗುತ್ತಿಗೆದಾರರು ಎಚ್ಚರಿಕೆ ನೀಡಿದ್ದಾರೆ. ಬಿಲ್ ಪಾವತಿ ಮಾಡದ ಕಾರಣ ಡಿಸೆಂಬರ್ 31ರಿಂದ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.
2022ರ ಮೊದಲ ದಿನವೇ ಬೆಂಗಳೂರು ನಗರದ ಜನರಿಗೆ ಪ್ರತಿಭಟನೆಯ ಬಿಸಿ ತಟ್ಟಲಿದೆ. ಹಲವು ತಿಂಗಳಿನಿಂದ ಕಸ ವಿಲೇವಾರಿ ಮಾಡುವ ಗುತ್ತಿಗೆದಾರರ ಬಿಲ್ ಪಾವತಿಯಾಗಿಲ್ಲ. ಆದ್ದರಿಂದ ಕಸ ಸಂಗ್ರಹಣೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಕಸ ವಿಲೇವಾರಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಾಲ ಸುಬ್ರಮಣ್ಯ ಈ ಕುರಿತು ಮಾಹಿತಿ ನೀಡಿದರು, "ನಮ್ಮ ಬೇಡಿಕೆ ಈಡೇರುವ ತನಕ ಮುಷ್ಕರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದೇವೆ" ಎಂದು ಹೇಳಿದರು.

"ಡಿಸೆಂಬರ್ 31ರಂದು ಎಂಇಎಸ್ ನಿಷೇಧಕ್ಕೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್ಗೆ ನಮ್ಮ ಸಂಘದ ಬೆಂಬಲವಿದೆ. ನಾವು ಸಹ ಬಂದ್ನಲ್ಲಿ ಪಾಲ್ಗೊಂಡು ಕನ್ನಡ ನಾಡು, ನುಡಿಗಾಗಿ ಹೋರಾಟ ಮಾಡುತ್ತೇವೆ" ಎಂದು ಬಾಲ ಸುಬ್ರಮಣ್ಯ ತಿಳಿಸಿದರು.
"ನಗರದಲ್ಲಿ ಕಸ ವಿಲೇವಾರಿ ಮಾಡುವ ಎಲ್ಲಾ ಗುತ್ತಿಗೆದಾರರು ಡಿಸೆಂಬರ್ 31ರಿಂದ ಕಸ ಸಂಗ್ರಹಣೆ ಸ್ಥಗಿತಗೊಳಿಸಲಿದ್ದಾರೆ. ನಗರದ ಯಾವ ಪ್ರದೇಶದಿಂದಲೂ ಕಸ ತೆಗೆಯುವುದಿಲ್ಲ. ಕಸ ಸಾಗಣೆ ಮಾಡುವ ಲಾರಿಗಳ ಚಾಲಕರು ಸಹ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಗೆ ಕೈ ಜೋಡಿಸಲಿದ್ದಾರೆ" ಎಂದು ಬಾಲ ಸುಬ್ರಮಣ್ಯ ಮಾಹಿತಿ ನೀಡಿದರು.
ಹಲವು ತಿಂಗಳಿನಿಂದ ಬಿಲ್ ಬಾಕಿ; ಕಳೆದ ಹಲವು ತಿಂಗಳಿನಿಂದ ಬಿಬಿಎಂಪಿ ಕಸ ಸಂಗ್ರಹಣೆ ಮಾಡುವ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಿಲ್ಲ. ಬಿಲ್ ಪಾವತಿ ಮಾಡುವಂತೆ ಕೇಳಿದರೆ ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರರು ಆರೋಪಿಸಿದರು.
ಎರಡು ದಿನಗಳ ಕಾಲ ಕಸ ಎತ್ತದಿದ್ದರೆ ನಗರ ಯಾವ ಸ್ಥಿತಿಗೆ ತಲುಪುತ್ತದೆ ಎಂಬುದು ಅಧಿಕಾರಿಗಳಿಗೆ ತಿಳಿಯಬೇಕು. ಅದಕ್ಕಾಗಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ. ಯಾವುದೇ ಕಾರಣಕ್ಕೂ ಪ್ರತಿಭಟನೆ ವಾಪಸ್ ಪಡೆಯುವುದಿಲ್ಲ ಎಂದು ಗುತ್ತಿಗೆದಾರರು ಹೇಳಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿ ಮೇಯರ್, ಉಪ ಮೇಯರ್, ಜನಪ್ರತಿನಿಧಿಗಳಿಲ್ಲ. ಬಿಬಿಎಂಪಿ ಆಡಳಿತವನ್ನು ಅಧಿಕಾರಿಗಳೇ ನೋಡಿಕೊಳ್ಳುತ್ತಿದ್ದಾರೆ. ಆದರೆ ಸರಿಯಾದ ಸಮಯಕ್ಕೆ ಬಿಲ್ ಪಾವತಿಯಾಗುತ್ತಿಲ್ಲ.
ಕಳೆದ ವರ್ಷ ಸಹ ಕಸ ಸಂಗ್ರಹಣೆ ಮಾಡುವವರು ಎರಡು ದಿನಗಳ ಕಾಲ ಪ್ರತಿಭಟನೆ ಮಾಡಿದ್ದರು. ಆಗ ಕಸ ಸಂಗ್ರಹಣೆ ಮಾಡದೇ ನಗರದ ರಸ್ತೆ ರಸ್ತೆಗಳಲ್ಲಿ ಕಸದ ರಾಶಿ ಕಂಡು ಬಂದಿತ್ತು.












Click it and Unblock the Notifications