ರಾಜ್ಯೋತ್ಸವ ಆಚರಿಸಿದ ನೌಕರನ ವಜಾ: ಐಟಿಸಿ ವಿರುದ್ಧ ಬೃಹತ್ ಪ್ರತಿಭಟನೆ
ಬೆಂಗಳೂರು, ಅಕ್ಟೋಬರ್ 17: ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿದರೆಂಬ ಕಾರಣಕ್ಕೆ ಉದ್ಯೋಗಿಯೊಬ್ಬನನ್ನು ಕೆಲಸದಿಂದ ವಜಾ ಮಾಡಿದ ಐಟಿಸಿ ಇನ್ಫೋಟೆಕ್ ವಿರುದ್ಧ ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ವಾಟಾಳ್ ನಾಗರಾಜ್, ಸಾ.ರಾ.ಗೋವಿಂದ್, ಕನ್ನಡ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಸೇರಿ ಹಲವು ಕನ್ನಡಪರ ಹೋರಾಟಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬಾಣಸವಾಡಿಯಲ್ಲಿರುವ ಐಟಿಸಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಟೆಕಿ ನವೀನ್ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿದ್ದರು. ಇದರಿಂದ ಅವರನ್ನು ಸಂಸ್ಥೆಯಿಂದ ತೆಗೆದು ಹಾಕಲಾಗಿತ್ತು.

ಬೈಕ್ ರ್ಯಾಲಿ ಮೂಲಕ ಇಂದು ಬಾಣಸವಾಡಿಯ ಐಟಿಸಿ ಇನ್ಫೋಟೆಕ್ಗೆ ಬಂದ ಕನ್ನಡಪರ ಹೋರಾಟಗಾರರು, ನವೀನ್ನನ್ನು ಕೂಡಲೇ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆಗೆ ಅವಕಾಶ ಕೊಡಬೇಕು ಎಂದು ಪ್ರತಿಭಟಿಸಿದರು.
ಕನ್ನಡಪರ ಹೋರಾಟಗಾರರ ಪ್ರತಿಭಟನೆ ಬಗ್ಗೆ ಮುಂಚೆಯೇ ತಿಳಿದಿದ್ದ ಐಟಿಸಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ಭದ್ರತೆಗೆ ಕರೆಸಿಕೊಂಡಿತ್ತು. ಪ್ರತಿಭಟನೆ ವಿಕೋಪಕ್ಕೆ ತಿರುಗಿ ಪ್ರತಿಭಟನಾಕಾರರು ಸಂಸ್ಥೆಯ ಮೇಲೆ ಮುತ್ತಿಗೆಗೆ ಯತ್ನಿಸಿದಾಗ ಕೆಲವರನ್ನು ಪೊಲೀಸರು ತಡೆದರು.
ಪ್ರತಿಭಟನೆ ಹೆಚ್ಚಿನ ವಿಕೋಪಕ್ಕೆ ತಿರುಗಿ ಪ್ರತಿಭಟನಾಕಾರರು ರಸ್ತೆಯ ಮಧ್ಯೆಯೇ ಧರಣಿ ಕೂತು ಘೋಷಣೆಗಳನ್ನು ಕೂಗಿದರು. ಆಗ ಸಂಸ್ಥೆಯ ಮ್ಯಾನೇಜರ್ ಪ್ರತಿಭಟನಾಕಾರರೊಂದಿಗೆ ಮಾತನಾಡಿದರು.
ಐಟಿಸಿ ಇನ್ಫೋಟೆಕ್ ಸಂಸ್ಥೆಯು ಪೊಲೀಸರನ್ನು ದುರ್ಬಳಕೆ ಮಾಡಿಕೊಂಡಿದೆ ಎಂದೂ ಸಹ ಕನ್ನಡಪರ ಹೋರಾಟಗಾರರು ಆರೋಪಿಸಿದರು.












Click it and Unblock the Notifications