ಖಾಸಗಿ ವೈದ್ಯರ ಮುಷ್ಕರ: ಸರ್ಕಾರಿ ಆಸ್ಪತ್ರೆಗಳಲ್ಲಿ ಹೈ ಅಲರ್ಟ್
ಬೆಂಗಳೂರು, ಜು.28: ಕೇಂದ್ರ ಸರ್ಕಾರದ ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ ವಿರೋಧಿಸಿ ಭಾರತೀಯ ವೈದ್ಯ ಪರಿಷತ್ ಮುಷ್ಕರ ಆರಂಭಿಸಿದೆ.
ಮಣಿಪಾಲ್, ಮಲ್ಯ, ಫೋರ್ಟಿಸ್, ನಾರಾಯಣ ಹೆಲ್ತ್ ಸೇರಿದಂತೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಶನಿವಾರ ಹೊರ ರೋಗಿಗಳ ವಿಭಾಗದ ಸೇವೆ ಸಿಗುವುದಿಲ್ಲ. ಆದರೆ ನಗರದಲ್ಲಿರುವ ಎಲ್ಲ ಸರಕಾರಿ ಆಸ್ಪತ್ರೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿದ್ದು, ಎಲ್ಲ ಸೇವೆಗಳು ಸಿಗಲಿವೆ.
ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಮ್ಗಳಲ್ಲಿ ತುರ್ತು ಚಿಕಿತ್ಸೆ ಹಾಗೂ ಒಳರೋಗಿ ವಿಭಾಗಗಳು ಎಂದಿನಂತೆ ಕೆಲಸ ಮಾಡಲಿವೆ. ಆದರೆ ಒಪಿಡಿ ಬಂದ್ ಆಗುವುದರಿಂದ ರೋಗಿಗಳಿಗೆ ಚಿಕಿತ್ಸೆ ಸಿಗುವುದಿಲ್ಲ. ಖಾಸಗಿ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.

ಸರ್ಕಾರಿ ಆಸ್ಪತ್ರೆಗಳ ಎಲ್ಲ ವೈದ್ಯರು ಹಾಗೂ ಇತರ ಸಿಬ್ಬಂದಿ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು. ರಜೆಯಲ್ಲಿ ಇದ್ದವರೂ ಕೆಲಸಕ್ಕೆ ಬರಬೇಕು. ಸಾರ್ವಜನಿಕರಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಆಗದಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿರುವುದರಿಂದ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು.
ಬೆಳಗ್ಗೆ 6 ರಿಂದ ಸಂಜೆ 6 ವರೆಗೆ ವೈದ್ಯರ ಮುಷ್ಕರ ನಡೆಯುತ್ತದೆ. ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಮ್ಗಳು, ಕ್ಲಿನಿಕ್ಗಳು, ಖಾಸಗಿ ಆಂಬುಲೆನ್ಸ್, ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಮ್ ಪ್ರಯೋಗಾಲಯಗಳು ಸೇವೆಗಳು ದೊರೆಯುವುದಿಲ್ಲ.
108 ಆಂಬ್ಯುಲೆನ್ಸ್ ಸೇವೆ ಎಂದಿನಂತೆ ಇರಲಿದೆ,ಆರೋಗ್ಯ ಸಮಸ್ಯೆಗೆ 104 ಕರೆ ಮಾಡಿ ಮಾಹಿತಿ ಪಡೆಯಬಹುದು.












Click it and Unblock the Notifications