ವಲಸೆ ಕಾರ್ಮಿಕರ ಮನೆಗಳಿಗೆ ಬೆಂಕಿ ಇಟ್ಟ ದುಷ್ಕರ್ಮಿಗಳನ್ನು ಬಂಧಿಸಿ: ಪೃಥ್ವಿ ರೆಡ್ಡಿ
ಬೆಂಗಳೂರು, ಮೇ 27: ಬೆಂಗಳೂರಿನಲ್ಲಿ ವಲಸೆ ಕಾರ್ಮಿಕರ ಮನೆಗಳಿಗೆ ಬೆಂಕಿ ಹಚ್ಚಿ ನಾಶ ಮಾಡುತ್ತಿರುವ ದುಷ್ಕೃತ್ಯಗಳು ಲಾಕ್ ಡೌನ್ ಆರಂಭವಾದ ದಿನಗಳಿಂದ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಆದರೆ, ಕಾನೂನಿನ ಭಯವಿಲ್ಲದೆ ಈ ಅಮಾನವೀಯ ಕೃತ್ಯಗಳು ಮತ್ತೆ ಮತ್ತೆ ನಡೆಯುತ್ತಿವೆ ಎಂದು ಆಮ್ ಆದ್ಮಿ ಪಕ್ಷ ಅಸಮಾಧಾನ ಹೊರ ಹಾಕಿದೆ.
ಮತ್ತೊಮ್ಮೆ ಬೆಂಗಳೂರಿನ ಕಾಚರಕಹಳ್ಳಿಯಲ್ಲಿರುವ ವಲಸೆ ಕಾರ್ಮಿಕರ ಮನೆಗಳು ಹಾಗೂ ಜೋಪಡಿಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಅಲ್ಲಿ ಬದುಕುತ್ತಿದ್ದ ಉತ್ತರ ಕರ್ನಾಟಕ ಭಾಗದ ನೂರಾರು ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹಿಂತಿರುಗಿದ್ದರು. ಮತ್ತೆ ತಮ್ಮ ಮನೆಗಳಿಗೆ ಬಂದಾಗ ಅವರ ಮನೆಗಳು, ಜೋಪಡಿಗಳು ಸಂಪೂರ್ಣ ಕರಕಲಾಗಿದೆ.
ಅವರು ಕೇವಲ ಮನೆಗಳನ್ನು ಮಾತ್ರ ಕಳೆದುಕೊಂಡಿಲ್ಲ, ಅವರ ಬಟ್ಟೆ ಬರೆ, ಮಕ್ಕಳ ಪುಸ್ತಕಗಳು ಮತ್ತು ಶಾಲಾ ದಾಖಲೆ, ಅಂಕ ಪ್ರಮಾಣ ಪತ್ರಗಳನ್ನೂ ಕಳೆದುಕೊಂಡಿದ್ದಾರೆ. ಅವರಲ್ಲಿ ಹತ್ತನೇ ತರಗತಿಯ ಪರೀಕ್ಷೆಗೆ ಸಿದ್ಧಗೊಳ್ಳುತ್ತಿದ ವಿದ್ಯಾರ್ಥಿಗಳು ಇದ್ದು ತಮ್ಮ ದಾಖಲೆ ಪತ್ರಗಳನ್ನು ಕಳೆದುಕೊಂಡು ಕಂಗೆಟ್ಟಿದ್ದಾರೆ. ನಿನ್ನೆ ಸರ್ವಜ್ಞನಗರದ ಆಮ್ ಆದ್ಮಿ ಪಕ್ಷದ ತಂಡ ಸ್ಥಳ ಭೇಟಿ ನೀಡಿ ಸಂತ್ರಸ್ತರ ಅಗತ್ಯತೆಗಳ ಬಗ್ಗೆ ಸಮೀಕ್ಷೆ ನಡೆಸಿತ್ತು.

ಮನೆಗಳನ್ನು ಕಳೆದುಕೊಂಡು ಅಕ್ಷರಶಃ ನಿರ್ಗತಿಕರಾಗಿದ್ದ ಸಂತ್ರಸ್ತರ ನೆರವಿಗೆ ಕೂಗಿಗೆ ಓಗೊಟ್ಟು ತಾನ್ಯಾ ಜೈರಾಜ್ ಅವರು ಒಂದು ಟ್ರಕ್ಕಿನ ತುಂಬಾ ಆಹಾರವನ್ನು ತೆಗೆದುಕೊಂಡು ಸ್ಥಳಕ್ಕೆ ಧಾವಿಸಿದರು. ಅವರು ತಮ್ಮ ಸ್ನೇಹಿತರ ಜೊತೆಗೂಡಿ ನೂರಕ್ಕೂ ಅಧಿಕ ಅಕ್ಕಿ, ಬೇಳೆ, ಎಣ್ಣೆ ಇತ್ಯಾದಿಗಳನ್ನು ಒಳಗೊಂಡಿದ್ದ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ಹಂಚಿದರು.
ಇಂದು ಆಮ್ ಆದ್ಮಿ ಪಕ್ಷದ ಕರ್ನಾಟಕ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿ ಮನೆಗಳು ಧ್ವಂಶಗೊಂಡಿದ್ದ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ತಕ್ಷಣ ತನಿಖೆ ನಡೆಸಿ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿದರು. ಮತ್ತು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಜೊತೆಗೂಡಿ ಪರಿಹಾರ ಸಾಮಗ್ರಿಗಳನ್ನು ಹಂಚಿದರು.












Click it and Unblock the Notifications