ಪೊಲೀಸ್ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ: ಆರೋಪಿ ಬಂಧನ
ಬೆಂಗಳೂರು, ನವೆಂಬರ್ 25: ರಾಜ್ಯಾದ್ಯಂತ ಭಾನುವಾರ ನಡೆಯಬೇಕಿದ್ದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದ್ದು, ಕ್ವಶ್ಚನ್ ಪೇಪರ್ ಕಿಂಗ್ ಶಿವಕುಮಾರಯ್ಯ ಅವರನ್ನು ಬಂಧಿಸಲಾಗಿದೆ.
ಹಾಗಾಗಿ ಭಾನುವಾರ ನಡೆಯಬೇಕಿದ್ದ ಲಿಖಿತ ಪರೀಕ್ಷೆಯನ್ನು ರಾಜ್ಯ ಪೊಲೀಸ್ ತರಬೇತಿ ಮತ್ತು ನೇಮಕಾತಿ ವಿಭಾಗದ ಎಡಿಜಿಪಿ ರದ್ದುಪಡಿಸಿದ್ದಾರೆ. ರಾಜ್ಯದಲ್ಲಿ ಪೊಲೀಸ್ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿ ಪರೀಕ್ಷೆಗೂ ಮುನ್ನವೇ ಆರೋಪಿಯನ್ನು ಬಂಧಿಸಿರುವ ಮೊದಲ ಪ್ರಕರಣ ಇದಾಗಿದೆ.
ಕಾನ್ ಸ್ಟೇಬಲ್ ಪ್ರಶ್ನೆ ಪತ್ರಿಕೆ ಸೋರಿಕೆ; ನ. 25ರ ಪರೀಕ್ಷೆ ಮುಂದೂಡಿಕೆ
ಮಡಿಕೇರಿ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕಲ್ಲಮಠ ಶ್ರೀ ನಂಜುಂಡೇಶ್ವರ ವಿದ್ಯಾಮಂದಿರದ ಮೇಲೆ ದಾಳಿ ನಡೆಸಿದ ಸಿಸಿಬಿ, ಈ ವೇಳೆ ಪ್ರಶ್ನೆ ಪತ್ರಿಕೆ ಸಮೇತ ಶಿವಕುಮಾರಯ್ಯ ಅವರನ್ನು ಬಂಧಿಸಿದ್ದಾರೆ.
ನವೆಂಬರ್ 25ರಂದು ನಡೆಯುವ ಪರೀಕ್ಷೆಗೆ ಸಂಬಂಧೊಟ್ಟಂತೆ ಶಿವಕುಮಾರ್ ತನ್ನ ಜಾಲದಲ್ಲಿರುವ ಏಜೆಂಟರ ಮೂಲಕ ರಾಜ್ಯದ ನಾನಾ ಭಾಗಗಳಲ್ಲಿರುವ ಪರೀಕ್ಷಾರ್ಥಿಗಳನ್ನು ಸಂಪರ್ಕಿಸುತ್ತಿದ್ದಾನೆ ಎನ್ನುವ ಮಾಹಿತಿ ಎಸಿಪಿ ಬಾಲರಾಜ್ಗೆ ಸಿಕ್ಕಿತ್ತು. ಒಂದು ವಾರದಿಂದ ಈ ಜಾಲದ ಬೆನ್ನು ಬಿದ್ದಿದ್ದರು.