ರಾಜ್ಯದಲ್ಲಿ ಅ.21ರಿಂದ ಪ್ರಾಥಮಿಕ ಶಾಲೆ ಆರಂಭ; ಸೋಮವಾರ ಸಂಜೆ ನಿರ್ಧಾರ ಪ್ರಕಟ
ಬೆಂಗಳೂರು, ಅಕ್ಟೋಬರ್ 18: ಕೊರೊನಾ ವೈರಸ್ ಕಾರಣದಿಂದ ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದಿಂದ ನಿಲ್ಲಿಸಲಾಗಿದ್ದ ಪ್ರಾಥಮಿಕ ಶಾಲೆಗಳನ್ನು ಅಕ್ಟೋಬರ್ 21ರಿಂದ ಆರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾಹಿತಿ ನೀಡಿದ್ದಾರೆ.
"ಸೋಮವಾರ ಮಧ್ಯಾಹ್ನದ ಬಳಿಕ ಈ ಬಗ್ಗೆ ಅಧಿಕೃತ ನಿರ್ಧಾರ ಮಾಡಲಾಗುವುದು, ತಾಂತ್ರಿಕ ಸಲಹಾ ಸಮಿತಿ ಸಲಹೆ ಈಗಾಗಲೇ ವರದಿ ಕೊಟ್ಟಿದೆ. ಎಲ್ಲವನ್ನೂ ವಿಮರ್ಶೆ ಮಾಡಿ ಸೋಮವಾರ ಸಂಜೆಯೊಳಗೆ ನಿರ್ಧಾರ ಪ್ರಕಟ ಮಾಡಲಾಗುವುದು," ಎಂದಿದ್ದಾರೆ.
"ಅಲ್ಲದೇ ಈ ಬಾರಿ ಶಾಲೆಗಳನ್ನು ಆರಂಭಿಸಿದ ನಂತರ ಎರಡು ಹಂತ ಇರುವುದಿಲ್ಲ. ಒಂದೇ ಹಂತದಲ್ಲಿ 1ರಿಂದ 5 ತರಗತಿ ಆರಂಭ ಮಾಡಲಾಗುವುದು. ಆರಂಭದಲ್ಲಿ ಮಧ್ಯಾಹ್ನದವರೆಗೆ ಮಾತ್ರ ತರಗತಿ ನಡೆಸಲಾಗುವುದು, ಅದಾದ ಬಳಿಕ ಸ್ಥಿತಿಗತಿ ನೋಡಿಕೊಂಡು ಪೂರ್ಣಾವಧಿ ತರಗತಿಗಳನ್ನು ನಡೆಸಲಾಗುವುದು," ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.

"ಇನ್ನು ಪ್ರಾಥಮಿಕ ಶಾಲೆ ಆರಂಭದ ಬಗ್ಗೆ ಸಂಪೂರ್ಣ ಮಾರ್ಗಸೂಚಿಗಳನ್ನು ಇಂದು ಸಂಜೆಯೊಳಗೆ ಬಿಡುಗಡೆ ಮಾಡಲಾಗುತ್ತದೆ. ತಾಂತ್ರಿಕ ಸಲಹಾ ಸಮಿತಿ ಸಲಹೆ ಮೇರೆಗೆ ಶಾಲೆ ಆರಂಭ ಮಾಡುತ್ತಿದ್ದು, ತಜ್ಞರ ಸಲಹೆ ಪಡೆದೇ ಶಾಲೆ ಆರಂಭ ಮಾಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಾಗಾಗಿ ಅಕ್ಟೋಬರ್ 21ಕ್ಕೆ ಶಾಲೆ ಒಂದೇ ಹಂತದಲ್ಲಿ ಶಾಲೆ ಆರಂಭಿಸಲಾಗುತ್ತದೆ," ಎಂದರು.
ಶಾಲೆಯಲ್ಲೇ ಲಸಿಕೆ:
ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ವಿಚಾರವಾಗಿ ಮಾತನಾಡಿದ ಸಚಿವ ಬಿ.ಸಿ. ನಾಗೇಶ್, "ಮಕ್ಕಳಿಗೆ ಲಸಿಕೆ ಸಿಗುತ್ತಿರುವುದು ನಿಜಕ್ಕೂ ಸಿಹಿ ಸುದ್ದಿ. ಮಕ್ಕಳಿಗೆ ಲಸಿಕೆ ಬಂದರೆ ಬೇಗನೇ ಕೊಟ್ಟು ಮುಗಿಸುತ್ತೇವೆ. ಶಾಲೆಯಲ್ಲಿಯೇ ಮಕ್ಕಳಿಗೆ ಕೊರೊನಾ ಲಸಿಕೆ ಕೊಡುವ ಚಿಂತನೆ ಇದೆ," ಎಂದು ತಿಳಿಸಿದ್ದಾರೆ.
"ಹಾಗೆಯೇ ರಾಜ್ಯದಲ್ಲಿನ ಏಕೋಪಾಧ್ಯಾಯ ಶಾಲೆ ವಿಚಾರವಾಗಿ ಸಹ ಇಲಾಖೆ ಗಮನ ಹರಿಸುತ್ತದೆ. ಏಕೋಪಾದ್ಯಾಯ ಶಾಲೆಗಳಲ್ಲಿ ಮಕ್ಕಳ ಕೊರತೆಯೂ ಇದೆ. ಮೊದಲು ಮಕ್ಕಳ ಸಂಖ್ಯೆ ಹೆಚ್ಚಳ ಮಾಡಬೇಕು, ಆ ಬಳಿಕ ಶಿಕ್ಷಕರ ಸಂಖ್ಯೆ ಹೆಚ್ಚಳ ಮಾಡುತ್ತೇವೆ," ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಕಳೆದ 2020ರಲ್ಲಿ ಕೊರೊನಾ ವೈರಸ್ ಮೊದಲ ಅಲೆ ಆರಂಭವಾದ ನಂತರ ಸೋಂಕು ಹರಡುವ ಕಾರಣ ತರಗತಿಗಳನ್ನು ನಿಲ್ಲಿಸಲಾಗಿತ್ತು. ಮಕ್ಕಳಿಗೆ ಆನ್ಲೈನ್ ಕ್ಲಾಸ್ ಆರಂಭ ಮಾಡಿದ್ದಲ್ಲದೆ, ಪರೀಕ್ಷೆ ಇಲ್ಲದೆ ಮುಂದಿನ ತರಗತಿಗೆ ತೇರ್ಗಡೆ ಸಹ ಮಾಡಲಾಗಿತ್ತು. ಆದರೆ ಕೊರೊನಾ ಸೋಂಕು ಇಳಿದ ನಂತರ ಶಾಲೆಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿತ್ತು. ಆದರೆ ಸೋಂಕು ಸಂಪೂರ್ಣವಾಗಿ ಕಡಿಮೆಯಾಗದ ಹಾಗೂ ಮಕ್ಕಳಿಗೆ ಲಸಿಕೆ ಸಿಗದ ಕಾರಣ ಶಾಲೆಗಳನ್ನು ಆರಂಭ ಮಾಡಿರಲಿಲ್ಲ.
ಇದೀಗ ಮಕ್ಕಳಿಗೂ ಸಹ ಲಸಿಕೆ ನೀಡಲು ಅನುಮೋದನೆ ಸಿಕ್ಕಿದ್ದು, ಪೋಷಕರಿಗೂ ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆಚ್ಚು ಭಯಪಡುವ ಅವಶ್ಯಕತೆ ಇರುವುದಿಲ್ಲ. ಇನ್ನು ರಾಜ್ಯದಲ್ಲಿ ಈಗಾಗಲೇ ಪದವಿ, ಪಿಯುಸಿ ಕಾಲೇಜು ಸೇರಿದಂತೆ ಪ್ರೌಢ ಶಾಲೆಗಳನ್ನು ಆರಂಭ ಮಾಡಲಾಗಿದೆ.
ಆದರೆ, ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಇನ್ನೂ ಕಡಿಮೆಯಾಗಿಲ್ಲ. ಅಲ್ಲದೆ ದೇಶದಲ್ಲಿ ಕೋವಿಡ್ ಮೂರನೇ ಅಲೆ ಭೀತಿ ಇದೆ. ಅದು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಸದ್ಯ ಕೋವಿಡ್ ಪ್ರಕರಣಗಳು ನಿಯಂತ್ರಣದಲ್ಲಿದ್ದು, ರಾಜ್ಯದಲ್ಲಿ ವೈರಲ್ ಫ್ಲ್ಯೂ ಹೆಚ್ಚಿದ್ದು, ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ.












Click it and Unblock the Notifications