ಬಕ್ರೀದ್; ಕುರಿ, ಮೇಕೆ ವ್ಯಾಪಾರ ಜೋರು, ದರ ದುಪ್ಪಟ್ಟು
ಬೆಂಗಳೂರು, ಜೂನ್ 26; ಬಕ್ರೀದ್ ಹಬ್ಬದ ಆಚರಣೆಯ ಸಿದ್ಧತೆಗಳು ನಡೆಯುತ್ತಿವೆ. ಜೂನ್ 29ರಂದು ಹಬ್ಬ ನಡೆಯಲಿದ್ದು, ವಿವಿಧ ಜಿಲ್ಲೆಗಳಿಂದ ಕುರಿ, ಮೇಕೆ ವ್ಯಾಪಾರಿಗಳು ಬೆಂಗಳೂರಿಗೆ ಬಂದಿದ್ದಾರೆ. ವ್ಯಾಪಾರವು ಜೋರಾಗಿಯೇ ಸಾಗಿದೆ. ದರಗಳು ಸಹ ದುಪ್ಪಟ್ಟು ಆಗಿದೆ.
ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಕುರಿ, ಮೇಕೆಗಳ ವ್ಯಾಪಾರ ಜೋರಾಗಿತ್ತು. ಅದರಲ್ಲೂ ನಾಟಿ ತಳಿಯ ಕುರಿ, ಮೇಕೆಗಳು ಭಾರೀ ದರದಕ್ಕೆ ಮಾರಾಟವಾದವು. ರಾಮನಗರ, ಬಾಗಲಕೋಟೆ, ತಮಿಳುನಾಡು ಸೇರಿದಂತೆ ವಿವಿಧ ಕಡೆಗಳಿಂದ ವ್ಯಾಪಾರಿಗಳು ಆಗಮಿಸಿದ್ದಾರೆ.

ಈ ಬಾರಿಯ ಹಬ್ಬದ ಸಂದರ್ಭದಲ್ಲಿ ಬಂಡೂರು, ಕಿರಿಗಾವು, ಮೌಳಿ, ಶಿರೋಹಿ ಸೇರಿದಂತೆ ವಿವಿಧ ತಳಿಗಳ ಕುರಿ, ಮೇಕೆ ಮತ್ತು ಟಗರಿಗೆ ಭಾರೀ ಬೇಡಿಕೆ ಬಂದಿದೆ. ಅಮೀನಗಡ ತಳಿಯ ಟಗರು 20 ಸಾವಿರದಿಂದ 1.20 ಲಕ್ಷ ರೂ. ತನಕ ಮಾರಾಟವಾಗಿವೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.
60 ಟಗರು ತಂದಿದ್ದಾರೆ; ಬಾಗಲಕೋಟೆಯ ಅಮೀನಗಡದಿಂದ 60 ಟಗರು ತಂದಿದ್ದೇನೆ ಎಂದು ವ್ಯಾಪಾರಿ ಮಲೀಕ್ ಹೇಳಿದರು. ಇವುಗಳಲ್ಲಿ 20 ಮಾರಾಟವಾಗಿವೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಬೆಲೆಗಳು ಜಾಸ್ತಿ ಆಗಿವೆ. ವ್ಯಾಪಾರವು ಕುಸಿದಿದೆ ಎಂದು ಅವರು ಹೇಳಿದರು. ಮಂಗಳವಾರದ ತನಕ ಮಾರಾಟ ಮಾಡುತ್ತೇವೆ ಎಂದು ತಿಳಿಸಿದರು.
ಬಂಡೂರು ಕುರಿಯ ದರ 15 ಸಾವಿರದಿಂದ ಇದೆ ಎಂದು ವ್ಯಾಪಾರಿಗಳು ಹೇಳಿದರು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈದ್ಗಾ ಮೈದಾನದಕ್ಕೆ ಈ ಬಾರಿ ಹೆಚ್ಚಿನ ವ್ಯಾಪಾರಿಗಳು ಆಗಮಿಸಿಲ್ಲ. ಬೆಂಗಳೂರು ನಗರದ ಬೇರೆ-ಬೇರೆ ಪ್ರದೇಶದಲ್ಲಿಯೂ ವ್ಯಾಪಾರ ಜೋರಾಗಿಯೇ ಸಾಗಿದೆ.
ಈದ್ಗಾ ಮೈದಾನದಲ್ಲಿ ಮಂಗಳವಾರದ ತನಕ ವ್ಯಾಪಾರಿಗಳು ವ್ಯಾಪಾರ ಮಾಡಲು ಬಯಸಿದ್ದರು. ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಬಕ್ರೀದ್ ಹಬ್ಬದ ಪ್ರಾರ್ಥನೆಗಾಗಿ ಮೈದಾನ ಸ್ವಚ್ಛಗೊಳಿಸಬೇಕು ಎಂದು ಭಾನುವಾರವೇ ವ್ಯಾಪಾರಿಗಳನ್ನು ವಾಪಸ್ ಕಳಿಸುತ್ತಿದ್ದಾರೆ.
ಹಬ್ಬಕ್ಕೆ ಮೂರು ದಿನ ಬಾಕಿ ಇದೆ ಮೈದಾನದಿಂದ ಕಳಿಸಿದರೆ ಕುರಿಗಳನ್ನು ತೆಗೆದುಕೊಂಡು ಎಲ್ಲಿ ಹೋಗಬೇಕು?. ಮಂಗಳವಾರದ ತನಕ ವ್ಯಾಪಾರ ಮಾಡಲು ಅವಕಾಶ ನೀಡಬೇಕು ಎಂದು ರಾಮನಗರದ ವ್ಯಾಪಾರಿಗಳು ಹೇಳಿದರು.
ಬಕ್ರೀದ್ ಹಬ್ಬದ ಸಮಯದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುವುದನ್ನು ತಡೆಗಟ್ಟಲು ಪೊಲೀಸರು ಕ್ರಮಗಳನ್ನು ಕೈಗೊಂಡಿದ್ದಾರೆ. ಹಬ್ಬದ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಪೊಲೀಸರಿಗೆ ಈಗಾಗಲೇ ಸೂಚನೆ ನೀಡಲಾಗಿದೆ.
ಜಿಲ್ಲೆಗಳಲ್ಲಿ ಸಹ ಜಾನುವಾರುಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಇಲಾಖೆ ಚೆಕ್ಪೋಸ್ಟ್ ನಿರ್ಮಾಣ ಮಾಡಿಕೊಂಡು ಕಾರ್ಯ ನಿರ್ವಹಣೆ ಮಾಡುತ್ತಿದೆ.
ಮದ್ಯ ಮಾರಾಟ ನಿಷೇಧ; ಜೂನ್ 29 ರಂದು ಧಾರವಾಡ ಜಿಲ್ಲಾಯಾದ್ಯಂತ ಬಕ್ರೀದ್ ಹಬ್ಬದ ಆಚರಣೆ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಧಾರವಾಡ ಗ್ರಾಮೀಣ ಜಿಲ್ಲೆಯಾದ್ಯಂತ ಜೂನ್ 28ರ ರಾತ್ರಿ 11:59 ರಿಂದ ಜೂನ್ 30ರ ಬೆಳಗ್ಗೆ 6 ಗಂಟೆಯ ತನಕ ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿ ಹೊರತುಪಡಿಸಿ ಧಾರವಾಡ ಜಿಲ್ಲೆಯಾದ್ಯಂತ ಮದ್ಯಾಪಾನ, ಮದ್ಯ ಮಾರಾಟ ಮತ್ತು ಮದ್ಯ ಸಾಗಾಣಿಕೆಯನ್ನು ನಿಷೇಧಿಸಲಾಗಿದೆ.
ಧಾರವಾಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಗುರುದತ್ತ ಹೆಗಡೆ ಈ ಕುರಿತು ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 21 (2) ರನ್ವಯ ಅವಶ್ಯಕತೆ ಕಂಡುಬಂದಲ್ಲಿ ಶಾಂತಿಪಾಲನೆಗಾಗಿ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ಮದ್ಯ ಮಾರಾಟ, ಸಾಗಣೆ, ತಯಾರಿಕೆಗೆ ನಿಷೇಧವಿದ್ದು, ಅಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ.
ಧಾರವಾಡ ಜಿಲ್ಲೆಯ ಅಬಕಾರಿ ಇಲಾಖೆಯ ಉಪ ಆಯುಕ್ತರು ಮತ್ತು ಆರಕ್ಷಕ ಅಧೀಕ್ಷಕರು ಹಾಗೂ ಹೆಚ್ಚುವರಿ ಆರಕ್ಷಕ ಅಧೀಕ್ಷಕರು ತಮ್ಮ ವ್ಯಾಪ್ತಿಯಲ್ಲಿ ಈ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ಕ್ರಮವಹಿಸಬೇಕೆಂದು ಸೂಚನೆ ಕೊಡಲಾಗಿದೆ.












Click it and Unblock the Notifications