ನೃಪತುಂಗ ಪ್ರಶಸ್ತಿಗೆ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಆಯ್ಕೆ
ಬೆಂಗಳೂರು, ಡಿಸೆಂಬರ್ 14 : ಖ್ಯಾತ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಅವರು 2018ನೇ ಸಾಲಿನ 'ನೃಪತುಂಗ ಸಾಹಿತ್ಯ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕೊಡಮಾಡುವ ಪ್ರಶಸ್ತಿ ಇದಾಗಿದೆ. ಬಿಎಂಟಿಸಿಯು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಒಂದೂವರೆ ಕೋಟಿ ರೂ ಗಳ ದತ್ತಿನಿಧಿಯನ್ನು ಸ್ಥಾಪಿಸಿ ಅದರಿಂದ ಬರುವ ಬಡ್ಡಿ ಹಣದಲ್ಲಿ ಏಳು ಲಕ್ಷ ಎರೂ. ಮೊತ್ತದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೃಪತುಂಗ ಪ್ರಶಸ್ತಿ ಸ್ಥಾಪಿಸಿದೆ.
ಕನ್ನಡ ಸಾರಸ್ವತ ಪ್ರಪಂಚದ ಶ್ರೇಷ್ಠ ಲೇಖಕರಿಗೆ ಈ ಪ್ರಶಸ್ತಿಯನ್ನು 2008 ರಿಂದ ನೀಡುತ್ತಾ ಬಂದಿದೆ. ಕನ್ನಡ ಸಾಹಿತ್ಯ ಪ್ರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಆಯ್ಕೆ ಸಮಿತಿಯು ಎಸ್. ಎಲ್. ಭೈರಪ್ಪ ಅವರನ್ನು ಆಯ್ಕೆ ಮಾಡಿದೆ.
ಕವಿ ಬಿ.ಆರ್. ಲಕ್ಮಣರಾವ್, ವಿದ್ವಾಂಸರಾದ ವೀರಣ್ಣ ರಾಜೂರ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಡಾ. ಎ.ಎನ್. ಪ್ರಕಾಶ್ ಗೌಡ, ಕಾರ್ಮಿಕ ಕಲ್ಯಾಣ ಇಲಾಖೆಯ ಅಧಿಕಾರಿ ವಿಜಯಕುಮಾರ್ ಕ.ರಾ.ರ.ಸಾ.ಸಂಸ್ಥೆಯ ಕೇಂದ್ರ ಕನ್ನಡ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷರಾದ ವ.ಚ. ಚನ್ನೇಗೌಡ ಅವರುಗಳಿದ್ದ ಸಮಿತಿ ಆಯ್ಕೆ ಮಾಡಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 'ಮಯ್ಯೂರ ವರ್ಮ ಸಾಹಿತ್ಯ ಪ್ರಶಸ್ತಿ': ನೃಪತುಂಗ ಸಾಹಿತ್ಯ ಪ್ರಶಸ್ತಿ ಜತೆಗೆ, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಧನೆ ಮಾಡಿರುವ 45 ವರ್ಷದೊಳಗಿನ ಸಾಹಿತಿಗಳಿಗೆ ಪ್ರಶಸ್ತಿ ನೀಡಲು ಮಯ್ಯೂರವರ್ಮ ಸಾಹಿತ್ಯ ಪ್ರಶಸ್ತಿ ನೀಡಲಾಗುತ್ತಿದೆ.
ಆಯ್ಕೆ ಸಮಿತಿಯು ರಾಮಲಿಂಗೇಶ್ವರ, ಡಾ. ಸಿ. ನಂದಿನಿ, ಶಾಂತಿ ಕೆ.ಅಪ್ಪಣ್ಣ ಇವರನ್ನು ಸರ್ವಾನುಮತದಿಂದ 2018 ನೇ ಸಾಲಿನ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ವ.ಚ. ಚನ್ನೇಗೌಡ ತಿಳಿಸಿದ್ದಾರೆ.