ದೀನ ದಲಿತರ ಉದ್ಧಾರಕ್ಕಾಗಿ ಪ್ರಜಾ ಪರಿವರ್ತನ ಪಾರ್ಟಿ
ಬೆಂಗಳೂರು, ಅಕ್ಟೋಬರ್ 04: ದೀನ ದಲಿತರು, ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಶ್ರೇಯೋಭಿವೃದ್ಧಿಗಾಗಿ ರಾಜ್ಯದಲ್ಲಿ ಹೊಸ ಪಕ್ಷ ಪ್ರಜಾಪರಿವರ್ತನ ಪಾರ್ಟಿ ಉದಯವಾಗಲಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ರಾಜಕೀಯಕ್ಕೊಂದು ಹೊಸ ದಿಕ್ಕು ಕೊಡುವ ಈ ಹೊಸ ಪಕ್ಷದ ಉದ್ಘಾಟನೆ ಅಕ್ಟೋಬರ್ 9 ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಅಕ್ಟೋಬರ್ 9 ರ ಸೋಮವಾರದಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಜಾ ಪರಿವರ್ತನ ಪಾರ್ಟಿ ಉದ್ಘಾಟನೆಯಾಗಲಿದೆ. ಅಲ್ಲದೇ, ಇದೇ ಸಂದರ್ಭದಲ್ಲಿ ಪ್ರಜಾ ಪರಿವರ್ತನ ಪಾರ್ಟಿಗೆ ಸದಸ್ಯತ್ವ ಅಭಿಯಾನಕ್ಕೂ ಚಾಲನೆ ದೊರೆಯಲಿದೆ. ಇದರೊಂದಿಗೆ ಮಿಸ್ಡ್ ಕಾಲ್ ಕೊಡುವ ಮೂಲಕ ಸದಸ್ಯತ್ವ ನೋಂದಣಿ ಅಭಿಯಾನಕ್ಕೂ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಹೊಸ ಪಕ್ಷದ ರೂಪುರೇಶೆ ಬಗ್ಗೆ ಮಾಹಿತಿ ನೀಡಿದ ಪಕ್ಷದ ರಾಜ್ಯಾಧ್ಯಕ್ಷ ಬಿ ಗೋಪಾಲ್ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದಿದ್ದರೂ ಶ್ರೀಮಂತರು ಮತ್ತು ಬಡವರ ನಡುವೆ ಸಮಾನತೆ ಬರುವ ಬದಲು ಅಂತರ ಹೆಚ್ಚಾಗುತ್ತಿದೆ. ರೈತರು ಮತ್ತು ಕಾರ್ಮಿಕರ ಸ್ಥಿತಿ ಸಂಕಷ್ಟಕ್ಕೆ ಸಿಲುಕಿದೆ, ಕೆಳಸ್ತರದ ಜನರ ಜೀವನ ಮಟ್ಟ ದುಸ್ತರ ಮತ್ತು ಬರ್ಬರವಾಗಿದೆ.
ಧಾರ್ಮಿಕ ಅಲ್ಪಸಂಖ್ಯಾತರ ಬುದಕಂತೂ ಶೋಚನೀಯ ಪರಿಸ್ಥಿತಿಗೆ ತಲುಪಿದೆ. ಸ್ತ್ರೀಯರಿಗೆ ರಕ್ಷಣೆ ಇಲ್ಲದೇ, ಅವರನ್ನು ಶೋಷಣೆಗೆ ತಳ್ಳಲ್ಪಡುತ್ತಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಪಕ್ಷಗಳು ಇಂತಹ ಸಮಯದಾಯಗಳ ಬಗ್ಗೆ ಮೊಸಳೆ ಕಣ್ಣೀರು ಹಾಕಿ ಅವರ ಪರವಾಗಿದ್ದೇವೆ ಎಂದು ಬಿಂಬಿಸಿ ಮತಗಳನ್ನು ಪಡೆದು ಅಧಿಕಾರಕ್ಕೆ ಬರುತ್ತಿವೆ.
ಆದರೆ, ಅಧಿಕಾರಕ್ಕೆ ಅಂಟಿಕೊಳ್ಳುತ್ತಿದ್ದಂತೆಯೇ ಈ ವರ್ಗದ ಜನರನ್ನು ಮರೆತು ಶೋಷಣೆ ಮಾಡುತ್ತಿವೆ. ಇಂತಹ ತುಳಿತಕ್ಕೆ ಒಳಗಾದ ವರ್ಗಗಳ ಹಿತ ಕಾಪಾಡಲು ನಮ್ಮ ದೇಶಕ್ಕೆ ಪ್ರಸ್ತುತ ಒಂದು ಪರ್ಯಾಯ ರಾಜಕೀಯ ಪಕ್ಷದ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈ ವರ್ಗಗಳ ಹಿತ ಕಾಯುವ ಧ್ಯೇಯೋದ್ದೇಶ ಇಟ್ಟುಕೊಂಡು ಪ್ರಜಾ ಪರಿವರ್ತನ ಪಾರ್ಟಿಯನ್ನು ಆರಂಭಿಸುತ್ತಿರುವುದಾಗಿ'' ತಿಳಿಸಿದರು.
ಪ್ರಜಾ ಪರಿವರ್ತನ ಪಾರ್ಟಿ ಒಂದು ರಾಜಕೀಯ ಪಕ್ಷವಾಗಿ ಹೊರಹೊಮ್ಮಲಿದೆ. ಆದರೆ, ಇದರ ಮೂಲ ಉದ್ದೇಶ ರಾಜಕೀಯದ ಅಧಿಕಾರದ ಜೊತೆಗೆ ಜನಾಂದೋಲನ ರೂಪಿಸುವುದಾಗಿದೆ.
ಈ ಜನಾಂದೋಲನದಲ್ಲಿ ಪ್ರಮುಖವಾಗಿ ಐದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ. ವೈಯಕ್ತಿಕ ಮಾನಸಿಕ ಪರಿವರ್ತನೆ, ಪರಿವರ್ತನೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಹೆಚ್ಚು ಮಾಡುವುದು, ಸೂಕ್ತ ಅಡಳಿತ ನೀತಿಗಳನ್ನು ರೂಪಿಸಿ ಆರ್ಥಿಕ ಪರಿವರ್ತನೆ ತರುವುದು, ಸಮಾನ ಅವಕಾಶಗಳನ್ನು ನೀಡುವ ಮೂಲಕ ಶೈಕ್ಷಣಿಕ ಪರಿವರ್ತನೆ ತರುವುದು ಮತ್ತು ಮತದಾರರನ್ನು ಜಾಗೃತರನ್ನಾಗಿ ಮಾಡುವ ಮೂಲಕ ರಾಜಕೀಯವಾಗಿ ಪರಿವರ್ತನೆ ತರುವುದಾಗಿದೆ ಎಂದು ಹೇಳಿದರು.
ಈ ಎಲ್ಲಾ ಅಂಶಗಳಿಗಿಂತ ಪ್ರಮುಖವಾಗಿ, ಸಮಾಜಕ್ಕೆ ಕಂಟಕವಾಗಿ ಪರಿಣಮಿಸಿರುವ ಮದ್ಯಪಾನ ನಿಷೇಧ ಮಾಡುವುದು, ರಾಜಕೀಯದಲ್ಲಿ ಸ್ತ್ರೀಯರಿಗೆ ಶೇ. 33 ರಷ್ಟು ಮೀಸಲಾತಿಯನ್ನು ಕಡ್ಡಾಯ ಮಾಡುವುದು, ಇತರೆ ಹಿಂದುಳಿದ ವರ್ಗಗಳಿಗೆ ಸೂಕ್ತ ಮೀಸಲಾತಿ ಕಲ್ಪಿಸುವುದು, ಭೂ ರಹಿತ ರೈತ ಕಾರ್ಮಿಕರಿಗೆ ಭೂಮಿ ನೀಡುವುದು, ವಸತಿಹೀನರಿಗೆ ವಸತಿ ಸೌಲಭ್ಯ ಕಲ್ಪಿಸುವುದು, ರೈತರ ಬೆಳೆಗಳಿಗೆ ಸೂಕ್ತ ವೈಜ್ಞಾನಿಕ ಬೆಲೆ ನಿಗದಿ ಮಾಡುವುದು ಸೇರಿದಂತೆ ವಿವಿಧ ಸಮಾಜ ಸುಧಾರಣೆಯ ಕಾರ್ಯಕ್ರಮಗಳನ್ನು ರೂಪಿಸುವುದು ನಮ್ಮ ಪಕ್ಷ ಧ್ಯೇಯೋದ್ದೇಶವಾಗಿದೆ ಎಂದು ಗೋಪಾಲ್ ವಿವರಿಸಿದರು.












Click it and Unblock the Notifications