ಗೌರಿ ಲಂಕೇಶ್ ಹತ್ಯೆಯ ಹಿಂದೆ ಪ್ರಗ್ಯಾ ಕೈವಾಡವಿಲ್ಲ : ಎಸ್ಐಟಿ ಸ್ಪಷ್ಟನೆ
ಬೆಂಗಳೂರು, ಮೇ 09 : ಗೌರಿ ಲಂಕೇಶ್ ಹತ್ಯೆಯ ಹಿಂದೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರ ಯಾವುದೇ ಕೈವಾಡವಿರುವುದನ್ನು, ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ ನಿರಾಕರಿಸಿದೆ. ಪ್ರಗ್ಯಾ ಅವರ ಕೈವಾಡವಿರುವ ಬಗ್ಗೆ ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು.
2017ರ ಸೆಪ್ಟೆಂಬರ್ 5ರಂದು ಸಂಜೆ 8 ಗಂಟೆಯ ಸುಮಾರಿಗೆ ರಾಜರಾಜೇಶ್ವರಿ ನಗರದಲ್ಲಿರುವ ನಿವಾಸದೆದಿರು ಪತ್ರಕರ್ತೆ ಗೌರಿ ಲಂಕೇಶ್ ಅವರು ಹತ್ಯೆಗೀಡಾಗಿದ್ದರು. ಈ ಕೊಲೆಯ ಹಿಂದೆ ಪ್ರಗ್ಯಾ ಸಿಂಗ್ ಠಾಕೂರ್ ಅವರ ಕೈವಾಡವಿದೆ ಎಂದು ಗುರುವಾರ ಆಂಗ್ಲ ದೈನಿಕವೊಂದು ವರದಿ ಮಾಡಿತ್ತು.
ಗೌರಿ ಲಂಕೇಶ್ ಹತ್ಯೆ : ಆರೋಪಿಗಳಿಗೆ ಪ್ರಚೋದನೆ ನೀಡಿದ್ದೇನು?
ಈಗಾಗಲೆ ತನಿಖೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿರುವ, ಹಲವಾರು ಆರೋಪಿಗಳನ್ನು ಬಂಧಿಸಿರುವ ವಿಶೇಷ ತನಿಖಾ ದಳ, ಕೂಡಲೆ ಅಧಿಕೃತ ಹೇಳಿಕೆಯನ್ನು ಹೊರಡಿಸಿದ್ದು, ಈ ಪ್ರಕರಣದಲ್ಲಿ ಪ್ರಗ್ಯಾ ಸಿಂಗ್ ಅವರ ಕೈವಾಡವಿಲ್ಲ ಮತ್ತು ಚಾರ್ಜ್ ಶೀಟ್ ನಲ್ಲಿಯೂ ಅವರ ಹೆಸರು ಪ್ರಸ್ತಾಪವಾಗಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ.
"ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದ ಪ್ರಗ್ಯಾ ಸಿಂಗ್ ಠಾಕೂರ್ ಅವರ ಹೆಸರು ಚಾರ್ಜ್ ಶೀಟ್ ನಲ್ಲಿ ಪ್ರಸ್ತಾಪವಾಗಿಲ್ಲ ಮತ್ತು ಅವರ ವಿರುದ್ಧ ಯಾವುದೇ ಸಾಕ್ಷ್ಯವನ್ನೂ ನೀಡಲಾಗಿಲ್ಲ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮುಂದೆ ಯಾವುದೇ ದಾಖಲೆಯನ್ನೂ ಹಾಜರುಪಡಿಸಿಲ್ಲ" ಎಂದು ವಿಶೇಷ ತನಿಖಾ ದಳ ಹೇಳಿಕೆ ನೀಡಿದೆ.
ಗೌರಿ ಲಂಕೇಶ್ ಹತ್ಯೆಯಾದ ನಂತರ ಕುಂಟುತ್ತ ಸಾಗಿತ್ತ ತನಿಖೆ, ನಂತರ ತ್ವರಿತಗೊಂಡು, ಈಗಾಗಲೆ 16 ಆರೋಪಿಗಳನ್ನು ಬಂಧಿಸಲಾಗಿದೆ. ಇಬ್ಬರು ಆರೋಪಿಗಳನ್ನು ಪೊಲೀಸರು ಹುಡುಕುತ್ತಿದ್ದಾರೆ. ಈ ಹತ್ಯೆಯ ಹಿಂದೆ ಬಲಪಂಥೀಯ ತತ್ತ್ವದಲ್ಲಿ ನಂಬಿಕೆಯುಳ್ಳ ಸಂಸ್ಥೆಯ ಸದಸ್ಯರ ಕೈವಾಡವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಗೌರಿ ಹತ್ಯೆ ಆರೋಪಿಗಳು ಯಾರ್ಯಾರು? ಕೊಲೆಯಲ್ಲಿ ಅವರ ಪಾತ್ರ ಏನು?
ಈ ಪ್ರಕರಣದ ಜೊತೆಯೇ, 2015ರ ಆಗಸ್ಟ್ ನಲ್ಲಿ ಬರ್ಬರವಾಗಿ ಹತ್ಯೆಗೀಡಾದ ಖ್ಯಾತ ಸಂಶೋಧಕ ಡಾ. ಎಂಎಂ ಕಲಬುರ್ಗಿ ಅವರ ಪ್ರಕರಣವನ್ನೂ ತನಿಖೆ ಮಾಡಬೇಕೆಂದು ಸರ್ವೋಚ್ಚ ನ್ಯಾಯಾಲಯ ವಿಶೇಷ ತನಿಖಾ ತಂಡಕ್ಕೆ ಆದೇಶ ನೀಡಿದೆ. ಇಲ್ಲಿಯವರೆಗೆ ಇವರಿಬ್ಬರನ್ನು ಹತ್ಯೆ ಮಾಡಿದವರು ಯಾರು ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ.