ರಸ್ತೆ ಗುಂಡಿ ಮುಚ್ಚಲು ಆಗ್ರಹಿಸಿ ಅ.21ಕ್ಕೆ ಕಾಂಗ್ರೆಸ್ ನಾಯಕರಿಂದ ಸಿಎಂ ಮನೆ ತನಕ ಮೆರವಣಿಗೆ
ಬೆಂಗಳೂರು, ಅಕ್ಟೋಬರ್ 19: ಬೆಂಗಳೂರಿನ ಎಲ್ಲ ರಸ್ತೆಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ನಗರದಲ್ಲಿ ಕಾಂಗ್ರೆಸ್ನಿಂದ ಅಕ್ಟೋಬರ್ 21ರಂದು ಪ್ರತಿಭಟನೆ ನಡೆಯಲಿದೆ. ಅಂದು ಬೆಳಗ್ಗೆ 11 ಗಂಟೆಗೆ ಆನಂದರಾವ್ ವೃತ್ತದಿಂದ ಮುಖ್ಯಮಂತ್ರಿಗಳ ಮನೆವರೆಗೆ ಬೆಂಗಳೂರಿನ ಶಾಸಕರು, ಮಾಜಿ ಮಹಾಪೌರರು ಹಾಗೂ ಪಾಲಿಕೆ ಸದಸ್ಯರು, ಕಾಂಗ್ರೆಸ್ ನಾಯಕರು ಮೆರವಣಿಗೆ ನಡೆಸಿ ಮನವಿ ಮಾಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಹೇಳಿದರು.
ಬುಧವಾರದಂದು ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ರಸ್ತೆಗಳು ಗುಂಡಿಮಯವಾಗಿವೆ. ಹೈಕೋರ್ಟ್ ಕೂಡ ಕಳೆದ ಒಂದೂವರೆ ವರ್ಷಗಳಿಂದ ರಸ್ತೆಗುಂಡಿಗಳ ವಿಚಾರವಾಗಿ ಚಾಟಿ ಬೀಸುತ್ತಲೇ ಇದೆ. ಆಯುಕ್ತರು, ಮುಖ್ಯ ಇಂಜಿನಿಯರ್ಗಳನ್ನು ಕರೆಸಿ ರಸ್ತೆ ಗುಂಡಿ ಮುಚ್ಚದಿದ್ದರೆ ಜೈಲಿಗೆ ಹಾಕುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಹೀಗಿದ್ದರು ರಸ್ತೆಗುಂಡಿಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ ಎಂದರು.
2008ರಿಂದ 2013ರವರೆಗಿನ ಬಿಜೆಪಿ ಸರ್ಕಾರ ಇದ್ದಾಗ, ನಂತರ ಬಂದ ಕಾಂಗ್ರೆಸ್ ವೇಳೆ ಪ್ರಮುಖ ರಸ್ತೆಗಳು ಗುಂಡಿಗಳಿಂದ ಕೂಡಿದ್ದವು. ಆಗ ಕಾಂಗ್ರೆಸ್ ಡಾಂಬರೀಕರಣ ಮಾಡಿತ್ತ. ಬಿಜೆಪಿ ಸರ್ಕಾರ ಎಂದಿಗೂ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡುವುದಿಲ್ಲ. ಅವರು ಕೇವಲ ಶಾಸಕರುಗಳಿಗೆ ಅನುದಾನ ನೀಡುವುದರ ಬಗ್ಗೆ ಗಮನಹರಿಸುತ್ತಾರೆ. ಅಲ್ಲದೇ ಬಿಜೆಪಿ ಪ್ರಮುಖ ರಸ್ತೆಗಳ ನಿರ್ವಹಣೆಗೆ ಇಟ್ಟಿದ್ದ 400 ಕೋಟಿ ರೂ. ಅನುದಾನ ಹಿಂಪಡೆದಿದ್ದಾರೆ.

ಬಿಬಿಎಂಪಿಗೆ ಅನುದಾನ ಬಿಡುಗಡೆ ಆಗಿಲ್ಲ
ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್ ಗಳಿಗೆ 2020-21ರಲ್ಲಿ ಸರ್ಕಾರದಿಂದ ಒಂದು ಪೈಸೆ ಅನುದಾನ ಲಭ್ಯವಾಗಿಲ್ಲ. ನಂತರ 2021-22ರಲ್ಲೂ ಬಿಡಿಗಾಸು ಅನುದಾನ ನೀಡಿಲ್ಲ. ಈ ವರ್ಷ ಬಜೆಟ್ನಲ್ಲಿ ಹೊಸ ವಾರ್ಡ್ಗೆ 6 ಕೋಟಿ, ಹಳೇ ವಾರ್ಡ್ಗಳಿಗೆ 4 ಕೋಟಿ ರೂ. ಘೋಷಿಸಿದ್ದಾರೆ. ಇದು ಕೇವಲ ಕಾಗದ ಮೇಲೆಯೇ ಇದ್ದು, ಅನುದಾನ ಬಿಡುಗಡೆ ಇನ್ನು ಆಗಿಲ್ಲ. ಇಂಜಿನಿಯರ್ಗಳಿಗೆ ಟೆಂಡರ್ ಕರೆಯಲು ಸರ್ಕಾರ ಇನ್ನೂ ಅನುಮತಿ ನೀಡಿಲ್ಲ ಎಂದು ದೂರಿದರು.
ರಸ್ತೆ ಗುಂಡಿ ಮುಚ್ಚಲು ಕಳೆದ ಮೂರು ವರ್ಷಗಳಿಂದ ಪಾಲಿಕೆ ಕೇವಲ 40 ಕೋಟಿ ಬಿಡುಗಡೆ ಮಾಡಿದೆ. ಕಳೆದ ಮೂರು ವರ್ಷಗಳಿಂದ ವಾರ್ಡ್ ಗಳಿಗೆ ಪಾಲಿಕೆಯಿಂದ ನಯಾ ಪೈಸೆ ಹಣ ಸಿಕ್ಕಿಲ್ಲ. ಬೆಂಗಳೂರು ಅಭಿವೃದ್ಧಿ ಇಲಾಖೆ ಜವಾಬ್ದಾರಿ ಮುಖ್ಯಮಂತ್ರಿಗಳ ಬಳಿ ಇದೆ. ಅವರ ಬೆಂಬಲಕ್ಕೆ 7 ಸಚಿವರಿದ್ದಾರೆ. ಬಿಡಿಎ ಮುಖ್ಯಸ್ಥರೂ, ಮುಖ್ಯ ಸಚೇತಕರು ಬೆಂಗಳೂರಿನ ಶಾಸಕರೇ ಆಗಿದ್ದಾರೆ. ಆದರೂ ಬೆಂಗಳೂರಿನ ರಸ್ತೆಗಳಲ್ಲಿ ಲಕ್ಷಗಟ್ಟಲೆ ಗುಂಡಿ ಬಿದ್ದಿವೆ. ಈ ಹಿಂದಿನ ಸರ್ಕಾರದ ಅವಧಿಯಲ್ಲೂ ಮಳೆ ಬಿದ್ದು, ರಸ್ತೆ ಗುಂಡಿ ಬೀಳುತ್ತಿದ್ದವು. ತಕ್ಷಣ ಅವುಗಳನ್ನು ಮುಚ್ಚುವ ಕೆಲಸ ಆಗುತ್ತಿತ್ತು ಎಂದರು.

ಕೇವಲ ಬಿಜೆಪಿ ಶಾಕಸರಿಗೆ ಅಧಿಕ ಅನುದಾನ
ಮುಖ್ಯಮಂತ್ರಿಗಳ ಜೊತೆಗೆ ಕೆಲವು ಭಾರಿ ನಗರದ ಸಮಸ್ಯೆ, ರಸ್ತೆ ಗುಂಡಿ ಬಗ್ಗೆ ಮಾತನಾಡಿದ್ದೇನೆ. ಬೆಂಗಳೂರು ಅಭಿವೃದ್ಧಿ ಎಂದು ಮಾತನಾಡುತ್ತಾರೆ. ಕೇವಲ 15 ಬಿಜೆಪಿ ಶಾಸಕರ ಕ್ಷೇತ್ರ ಅಭಿವೃದ್ಧಿ ಆದರೆ ಬೆಂಗಳೂರಿನ ಅಭಿವೃದ್ಧಿಯೇ? ಎಲ್ಲ 28 ಕ್ಷೇತ್ರ ಅಭಿವೃದ್ಧಿ ಆದರೆ ಮಾತ್ರ ಬೆಂಗಳೂರು ಅಭಿವೃದ್ಧಿ ಆಗುತ್ತದೆ. ಕೇವಲ ಬಿಜೆಪಿ ಶಾಸಕರಿಗೆ ಅನುದಾನ ನೀಡಿದರೆ, ಉಳಿದವರಿಗೆ ಅನುದಾನ ನೀಡದಿದ್ದರೆ, ಎಲ್ಲ ಕಡೆ ರಸ್ತೆ ಗುಂಡಿ ಬೀಳುತ್ತದೆ. ಹೀಗಾಗಿ ಅನುದಾನ ವಿಚಾರದಲ್ಲಿ ತಾರತಮ್ಯ ಮಾಡಬೇಡಿ ಎಂದು ಹೇಳಿದರು.
ಕಾಂಗ್ರೆಸ್ 12 ಶಾಸಕರುಗಳಿಗೆ 1,938 ಕೋಟಿ ನೀಡಿದರೆ, ಜೆಡಿಎಸ್ ಶಾಸಕರಿಗೆ 162 ಕೋಟಿ, ಬಿಜೆಪಿ 15 ಶಾಸಕರಿಗೆ 8,774 ಕೋಟಿ ರೂ. ಅನುದಾನ ನೀಡಲಾಗಿದೆ. ಬಿಜೆಪಿಯವರಿಗೆ ಇತರರಿಗಿಂತಲೂ ನಾಲ್ಕೂವರೆ ಪಟ್ಟು ಅಧಿಕ ಅನುದಾನ ನೀಡಲಾಗಿದೆ. ಬೆಂಗಳೂರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಖ್ಯಾತಿ ತರುತ್ತಿದ್ದಾರೆ. ಮೊನ್ನೆ ರಸ್ತೆ ಗುಂಡಿಗೆ ಮಹಿಳೆ ಬಲಿಯಾಗಿದ್ದು, ಈವರೆಗೂ ಒಟ್ಟು 16 ಮಂದಿ ರಸ್ತೆ ಗುಂಡಿಗೆ ಬಲಿಯಾಗಿದ್ದಾರೆ ಎಂದು ರಾಮಲಿಂಗಾ ರೆಡ್ಡಿ ವಿವರಿಸಿದರು.

ರಸ್ತೆ ನಿರ್ವಹಣೆಗೆ ನೀಡಲಾದ 20 ಕೋಟಿ ಏನಾಯ್ತು?
ಬೆಂಗಳೂರಿನಲ್ಲಿ 11,900 ಕಿ,ಮೀ ರಸ್ತೆಗಳಿದ್ದು, ಅವುಗಳ ಮೂಲಸೌಕರ್ಯಕ್ಕೆ 5 ವರ್ಷಕ್ಕೆಂದು 20,060 ಕೋಟಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಕಾಂಗ್ರೆಸ್ ಮಾಡಿದ್ದ 120 ಕಿ.ಮೀ ಕಾಂಕ್ರೀಟ್ ರಸ್ತೆಗಳಲ್ಲಿ ಯಾವುದೇ ಗುಂಡಿ ಬಿದ್ದಿಲ್ಲ. ಹೀಗಿದ್ದರೂ ಅಂದು ಬಿಜೆಪಿ ಭ್ರಷ್ಟಾಚಾರದ ಆರೋಪ ಮಾಡಿತ್ತು. ಇದೀಗ ನಿಮಗೆ ಅಧಿಕಾರ ನಡೆಸಲು ಆಗದಿದ್ದರೆ ಅಧಿಕಾರ ಬಿಟ್ಟು ಹೋಗಿ. ನಮ್ಮ ಕಾಲದಲ್ಲಿ ಹೈಕೋರ್ಟ್ನಿಂದ ಈ ರೀತಿ ಛೀಮಾರಿ ಹಾಕಿಸಿಕೊಂಡಿರಲಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾತನಾಡಲಿಲ್ಲ ಏಕೆ?. ಭ್ರಷ್ಟಾಚಾರ ನಡೆದಿದ್ದರೆ ನೀವು ಅಧಿಕಾರಕ್ಕೆ ಬಂದು 3 ವರ್ಷ ಆಗಿದೆ ತನಿಖೆ ಮಾಡಿಸಿಲ್ಲ ಏಕೆ?. ನಿಮಗೆ ಮಾತನಾಡುವ ನೈತಿಕತೆ ಇಲ್ಲ ಎಂದರು. ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದು ಸಂತಸದ ವಿಚಾರ. ಸ್ವಾತಂತ್ರ್ಯ ನಂತರ ಎಐಸಿಸಿ ಅಧ್ಯಕ್ಷರಾಗಿ ರಾಜ್ಯದಿಂದ ಆಯ್ಕೆಯಾಗುತ್ತಿರುವ ಇವರು ಎರಡನೇಯವರು. ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸಧೃಡವಾಗಿ ನಿಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯಿಂದ ಬೆಂಗಳೂರಿಗೆ ಗಾರ್ಬೇಜ್ ಸಿಟಿ ಹೆಸರು
ವಿಧಾನ ಪರಿಷತ್ ಸದಸ್ಯ ಪಿ.ಆರ್ ರಮೇಶ್ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಬೆಂಗಳೂರನ್ನು ಗಾರ್ಬೇಜ್ ಸಿಟಿ ಎಂದು ಗುರುತಿಸಲಾಗುತ್ತಿದೆ. ಬೆಂಗಳೂರು ಪ್ರವಾಹ ನಗರವಾಗುತ್ತಿದೆ. ಕಾಂಗ್ರೆಸ್ 70 ವರ್ಷಗಳ ಕಾಲ ಬೆಂಗಳೂರಿಗೆ ತಂದಿದ್ದ ಬ್ರ್ಯಾಂಡ್ ಅನ್ನು ಈಗ ಬಿಜೆಪಿ ಹಾಳು ಮಾಡಿದೆ ಎಂದು ಆಪಾದಿಸಿದರು.
ಅಮೃತ್ ಯೋಜನೆ, ನಗರೋತ್ಥಾನ ಯೋಜನೆ ಎಂದು ವಿವಿಧ ಯೋಜನೆಗಳಡಿ 2022ರ ವೇಳೆಗೆ ಬೆಂಗಳೂರಿನ ಅಭಿವೃದ್ಧಿಗೆ 18 ಸಾವಿರ ಕೋಟಿ ಖರ್ಚು ಮಾಡುವುದಾಗಿ ತಿಳಿಸಿದ್ದರು. ಆ ಹಣ ಈಗ ಎಲ್ಲಿ ಹೋಗಿದೆ, ಯಾವುದಕ್ಕೆ ವಿನಿಯೋಗಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಯಾವ ಕೆಲಸ ಆಗಿದೆ? ಎಂದು ಅವರು ಲೆಕ್ಕ ಕೇಳಿದರು.
ಅಮೃತ್ ಯೋಜನೆ, ನಗರೋತ್ಥಾನ ಯೋಜನೆ ಎಂದು ವಿವಿಧ ಯೋಜನೆಗಳಡಿ 2022ರ ವೇಳೆಗೆ ಬೆಂಗಳೂರಿನ ಅಭಿವೃದ್ಧಿಗೆ 18 ಸಾವಿರ ಕೋಟಿ ಖರ್ಚು ಮಾಡುವುದಾಗಿ ತಿಳಿಸಿದ್ದರು. ಆ ಹಣ ಈಗ ಎಲ್ಲಿ ಹೋಗಿದೆ, ಯಾವುದಕ್ಕೆ ವಿನಿಯೋಗಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಯಾವ ಕೆಲಸ ಆಗಿದೆ? ಎಂದು ಅವರು ಲೆಕ್ಕ ಕೇಳಿದರು.












Click it and Unblock the Notifications