ರಸ್ತೆ ಗುಂಡಿ; ಬಿಬಿಎಂಪಿ ಇಂಜಿನಿಯರ್ ಜೈಲಿಗಟ್ಟುವುದಾಗಿ ಎಚ್ಚರಿಕೆ
ಬೆಂಗಳೂರು, ಫೆಬ್ರವರಿ 07; ಬೆಂಗಳೂರು ನಗರದಲ್ಲಿನ ರಸ್ತೆ ಗುಂಡಿ ಮುಚ್ಚವ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಸೋಮವಾರವೂ ಬಿಬಿಎಂಪಿ ಇಂಜಿನಿಯರ್ಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
ಬೆಂಗಳೂರಿನ ರಸ್ತೆ ದುಸ್ಥಿತಿ ಸಂಬಂಧ 2015ರಲ್ಲಿ ಕೋರಮಂಗಲದ ವಿಜಯ್ ಮೆನನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ವಿಭಾಗೀಯಪೀಠ ಸೋಮವಾರ ವಿಚಾರಣೆ ನಡೆಸಿತು.
ನಿಮ್ಮ ನಿರ್ಲಕ್ಷ್ಯಕ್ಕೆ ಜನರು ಬಲಿಯಾಗಬೇಕೆ?, ಈಗಾಗಲೇ 9 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಎಷ್ಟು ಜನ ಸಾಯಬೇಕು?, ಜನರನ್ನು ಹೀಗೆ ಸಾಯಲು ಬಿಡುವುದಿಲ್ಲ. ಮೊದಲು ಇಂಜಿನಿಯರ್ಗಳನ್ನು ಜೈಲಿಗೆ ಕಳಿಸಿದರೆ ಎಲ್ಲಾ ಸರಿ ಹೋಗುತ್ತದೆ ಎಂದು ಖಡಕ್ ವಾರ್ನಿಂಗ್ ನೀಡಿದೆ.

ನ್ಯಾಯಾಲಯ ಕಳೆದ ಬಾರಿ ನೀಡಿದ್ದ ನಿರ್ದೇಶನದಂತೆ ಖುದ್ದು ವಿಚಾರಣೆಗೆ ಹಾಜರಾಗಿದ್ದ ಬಿಬಿಎಂಪಿ ಮುಖ್ಯ ಇಂಜಿನಿಯರ್ ಬಿ. ಎಸ್. ಪ್ರಹ್ಲಾದ್ರನ್ನು ಜೈಲಿಗೆ ಕಳುಹಿಸುವುದಾಗಿ ನ್ಯಾಯಾಲಯ ಗುಡುಗಿತು.
ರಸ್ತೆಗುಂಡಿ ಮುಚ್ಚುವ ಕಾಮಗಾರಿ ಕುರಿತು ಅವರು ನೀಡಿದ ವಿವರಣೆಯನ್ನು ಒಪ್ಪದ ನ್ಯಾಯಪೀಠ, "ಸ್ವಯಂಚಾಲಿತ ಗುಂಡಿ ಮುಚ್ಚುವ ಯಂತ್ರ ಏನಾಗಿದೆ?, ಅದರ ಗುತ್ತಿಗೆ ಏಕೆ ನವೀಕರಿಸಿಲ್ಲ. ಆ ಬಗ್ಗೆ ಏಕೆ ಗೊಂದಲಕಾರಿ ಹೇಳಿಕೆ ನೀಡುತ್ತಿದ್ದೀರಿ?" ಎಂದು ಪ್ರಶ್ನಿಸಿತು.
"ಜೊತೆಗೆ ನೀವು (ಪ್ರಹ್ಲಾದ್) ಕೋರ್ಟ್ ಮುಂದೆ ಸ್ಮಾರ್ಟ್ ಆಗಿ ವರ್ತಿಸುತ್ತಿದ್ದಾರೆ. ಕೋರ್ಟ್ ಮುಂದೆ ಏನು ಹೇಳುತ್ತಿದ್ದೀರಿ, ಇದು ಯಾವ ಕೋರ್ಟ್ ಎಂಬ ಬಗ್ಗೆ ಅರಿವಿರಲಿ. ನ್ಯಾಯಾಲಯದ ದಾರಿ ತಪ್ಪಿಸಲು ಯತ್ನಿಸುತ್ತಿದ್ದೀರೆ ಇಲ್ಲಿಂದಲೇ ನಿಮ್ಮನ್ನು ಜೈಲಿಗೆ ಕಳುಹಿಸುತ್ತೇವೆ'' ಎಂದು ಎಚ್ಚರಿಸಿತು.
ಕಠಿಣ ಕ್ರಮದಿಂದ ಮಾತ್ರ ಬುದ್ಧಿ; ರಸ್ತೆ ಗುಂಡಿಗಳನ್ನು ಮುಚ್ಚುವ ಸಂಬಂಧ ಹೈಕೋರ್ಟ್ ಆದೇಶಗಳನ್ನು ಕಿಂಚಿತ್ತೂ ಪಾಲಿಸದೆ ಬರೀ ಕಾರಣಗಳನ್ನು ಹೇಳುತ್ತಿದ್ದೀರಿ. ರಸ್ತೆಗಳೆಲ್ಲ ಗುಂಡಿಮಯವಾಗಿವೆ, ರಸ್ತೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ನೀವು ತೋರುತ್ತಿರುವ ನಿರ್ಲಕ್ಷ್ಯಕ್ಕೆ ಜನ ಬಲಿಯಾಗಬೇಕೆ? ಎಂದು ನ್ಯಾಯಪೀಠ ಕೇಳಿತು.
"ಮುಖ್ಯ ಇಂಜಿನಿಯರ್ಗೆ ತಕ್ಷಣವೇ ನ್ಯಾಯಾಂಗ ಆದೇಶ ಹೊರಡಿಸುವ ಮೂಲಕ ನಿಮ್ಮನ್ನು ಸೇವೆಯಿಂದ ಅಮಾನತುಪಡಿಸಿ ಜೈಲಿಗೆ ಕಳುಹಿಸುತ್ತೇವೆ. ಇಲ್ಲವಾದರೆ ಕ್ರಿಮಿನಲ್ ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಅಮಾನತು ಮಾಡಿ, ಎಐಫ್ಆರ್ ದಾಖಲಿಸಲು ಸರಕಾರಕ್ಕೆ ನಿರ್ದೇಶಿಸುತ್ತೇವೆ. ಅಂತಹ ಕಠಿಣ ಕ್ರಮ ಕೈಗೊಂಡರೆ ಮಾತ್ರ ನಿಮಗೆ ಬುದ್ದಿ ಬರುತ್ತದೆ'' ಎಂದು ಕೋರ್ಟ್ ಹೇಳಿತು.
ಕೊನೆಗೆ ಪಾಲಿಕೆ ಪರ ವಕೀಲರು, ಹಿರಿಯ ಅಧಿಕಾರಿಗಳ ಜತೆ ತಾವೇ ಖುದ್ದು ಚರ್ಚಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ನ್ಯಾಯಪೀಠ, "ನಿಮ್ಮ ಮೇಲೆ ಭರವಸೆ ಇಟ್ಟು ಇನ್ನೂ ಒಂದು ವಾರ ಕಾಲಾವಕಾಶ ನೀಡುತ್ತೇವೆ. ಆದರೆ, ಮುಂದಿನ ವಿಚಾರಣೆ ವೇಳೆ ಯಾವುದೇ ಕಾರಣ ನೀಡಬಾರದು. ರಸ್ತೆ ಗುಂಡಿಗಳನ್ನು ಯಾರು, ಹೇಗೆ ಮುಚ್ಚುತ್ತಾರೆ? ಎನ್ನುವುದು ನಮಗೆ ಮುಖ್ಯವಲ್ಲ. ಗುಂಡಿ ಮುಚ್ಚಲು ಯಾವ ತಂತ್ರಜ್ಞಾನ ಅನುಸರಿಸಲಾಗುತ್ತಿದೆ ಎಂಬ ಬಗ್ಗೆ ಕ್ರಿಯಾ ಯೋಜನೆ ಸಲ್ಲಿಸಬೇಕು" ಎಂದು ಸೂಚಿಸಿ ವಿಚಾರಣೆಯನ್ನು ಫೆಬ್ರವರಿ 15ಕ್ಕೆ ಮುಂದೂಡಿತು.












Click it and Unblock the Notifications