'ಬೇ........ ಅಧಿಕಾರಿಗಳಾ ಬೇಗ ರಸ್ತೆ ಸರಿ ಮಾಡ್ರೋ.. ': ಮಲ್ಲೇಶ್ವರಂನಲ್ಲಿ ಹೀಗೊಂದು ಪೋಸ್ಟ್
ಬೆಂಗಳೂರು ಜುಲೈ 16: 'ಬೇ........ ಅಧಿಕಾರಿಗಳಾ ಬೇಗ ರಸ್ತೆ ಸರಿ ಮಾಡ್ರೋ.. 'ಹೀಗೊಂದು ಪೋಸ್ಟರ್ ಅನ್ನು ಕರೆಂಟ್ ಕಂಬಕ್ಕೆ ಅಂಟಿಸಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಪೋಸ್ಟರ್ ಮಲೇಶ್ವರಂನಲ್ಲಿ ಹಾಕಲಾಗಿದೆ.
ಕಳೆದ ಕೆಲ ದಿನಗಳಿಂದ ಮಲ್ಲೇಶ್ವರಂನಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ಮುಖ್ಯ ರಸ್ತೆಗಳ ಸಂಪರ್ಕಕ್ಕೆ ಸಾಧ್ಯವಾಗದೆ ಇಲ್ಲಿನ ಜನ ಹೈರಾಣಾಗಿದ್ದಾರೆ. ಮಾತ್ರವಲ್ಲದೇ ಈ ಮಾರ್ಗವಾಗಿ ಚಲಿಸುವ ಜನರಿಗೆ ಪ್ರತಿದಿನ ಸಂಚರಿಸಲು ಸಾಧ್ಯವಾಗದೇ ಟ್ರಾಫಿಕ್ ಜಾಮ್ನಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೇಳಿಕೇಳಿ ಮಲ್ಲೇಶ್ವರಂ ಶಾಪಿಂಗ್ ಏರಿಯಾ. ಅಧಿಕ ಬಟ್ಟೆ ವ್ಯಾಪಾರ ಇನ್ನಿತರ ವಸ್ತುಗಳಿಗಾಗಿ ಫೇಮಸ್ ಆಗಿದೆ. ಮಾತ್ರವಲ್ಲದೆ ಪ್ರತಿಷ್ಠಿತ ಮಂತ್ರಿ ಮಾಲ್ ಕೂಡ ಇಲ್ಲೇ ಇದೆ. ಪ್ರತೀ ದಿನ ನೂರಾರು ಸಂಖ್ಯೆಯಲ್ಲಿ ಜನ ಇಲ್ಲಿಗೆ ಶಾಪಿಂಗ್ಗಾಗಿ ಸೇರುತ್ತಾರೆ. ಹೀಗಿರುವಾಗ ಇಲ್ಲಿನ ರಸ್ತೆ ಕಾಮಗಾರಿ ಜನರಿಗೆ ಕಿರಿಕಿರಿಯನ್ನುಂಟು ಮಾಡಿದೆ.
ಕರಾವಳಿಯಲ್ಲಿ ಕಡಲ ಅಬ್ಬರ: ನೋಡನೋಡುತ್ತಿದ್ದಂತೆಯೇ ಕಡಲ ಪಾಲಾದ ಮನೆ-ರಸ್ತೆ!
ಇನ್ನೂ ರಾಜ್ಯಕ್ಕೆ ಮುಂಗಾರು ಪ್ರವೇಶವಾದಾಗಿನಿಂದಲೂ ಇಲ್ಲಿನ ಪರಿಸ್ಥಿತಿಯಂತೂ ಹೇಳತೀರದ್ದಾಗಿದೆ. ಮಳೆ ಬಂದಾಗ ಜನ ಮನೆ ಬಿಟ್ಟು ಹೊರಬರುವುದೇ ಕಷ್ಟ. ಹೀಗಿರುವಾಗ ಕಾಮಗಾರಿ ಇರೋ ಕಡೆ ತೆರಳುವುದು ದೂರದ ಮಾತು. ಹೀಗಾಗಿ ಇದು ಸ್ಥಳೀಯ ವ್ಯಾಪಾರಿಗಳಿಗೂ ನಷ್ಟಕ್ಕೆ ತಳ್ಳಿದೆ.
ಕಾಮಗಾರಿಗಾಗಿ ರಸ್ತೆಯನ್ನು ಅಗೆಯಲಾಗಿದ್ದು ಮಳೆಯಿಂದಾಗಿ ನೀರು ತುಂಬಿ ರಸ್ತೆಗಳು ಕೆಸರಿನ ಗದ್ದೆಯಂತಾಗಿದೆ. ಹೀಗಾಗಿ ಜನ ಸಂಚಾರಕ್ಕೆ ತೀವ್ರ ಅಡೆಚಣೆ ಉಂಟಾಗಿದೆ. ಕೊರೊನಾ ಕಾರಣದಿಂದ ಎರಡು ವರ್ಷಗಳ ಬಳಿಕ ಅಂಗಡಿ ಮುಗ್ಗಟ್ಟುಗಳನ್ನು ಸಂಪೂರ್ಣವಾಗಿ ತೆರೆಯಲಾಗಿದೆ. ಆದರೆ ಈ ಕಾಮಗಾರಿಯಿಂದ ಜನ ಕಾಮಗಾರಿ ಇರುವ ಕಡೆಗೆ ಸಂಚರಿಸಲು ಹಿಂದೇಟಾಕುತ್ತಿದ್ದಾರೆ. ಹೀಗಾಗಿ ಇಲ್ಲಿನ ವ್ಯಾಪಾರ ಕೊರೊನಾ ನಂತರವೂ ನಷ್ಟಕ್ಕೆ ಗುರಿಯಾಗಿದೆ. ಜೊತೆಗೆ ಜನ ಕೂಡ ಬದಲಿ ಮಾರ್ಗದ ಮೊರೆ ಹೋಗಿದ್ದಾರೆ. ಆದರೆ ಇದೇ ಮಾರ್ಗವಾಗಿ ಅಂಗಡಿ, ಮನೆ, ಕಚೇರಿಗಳಿಗೆ ಚಲಿಸಲೇಬೇಕಾದ ಜನರು ಮಾತ್ರ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಆಮೆಗತಿಯಲ್ಲಿ ಸಾಗಿದ ಕಾಮಗಾರಿ ಅದೆಷ್ಟು ಕಿರಿಕಿರಿಯನ್ನುಂಟು ಮಾಡಿದೆ ಅನ್ನೋದಕ್ಕೆ ವಿದ್ಯುತ್ ಕಂಬಕ್ಕೆ ಅಂಟಿಸಿದ ಈ ಪೋಸ್ಟರ್ ಸಾಕ್ಷಿ. ಆದರೆ ಇಂತಹ ಶಬ್ದದ ಮೂಲಕ ಪೋಸ್ಟರ್ ಅಂಟಿಸಿರುವುದು ಮುಜುಗರವನ್ನುಂಟು ಮಾಡಿದೆ. ಆದರೇನೇ ಆಗಲಿ ಕೆಲ ಬಾರಿ ನಮ್ಮಲ್ಲಿ ಅಧಿಕಾರಿಗಳಿಗೆ ಮಳೆಗಾಲದಲ್ಲಿ ರಸ್ತೆ ಕಾಮಗಾರಿ ಮಾಡಿಸಬೇಕು ಅನ್ಸುತ್ತೆ. ಆದರೆ ಚರಂಡಿ ಕ್ಲೀನ್ ಮಾಡಬೇಕು ಅನ್ಸೋದಿಲ್ಲ. ಚರಂಡಿ ಕ್ಲೀನ್ ಮಾಡಬೇಕು ಅನಿಸಿದಾಗ ಅದನ್ನು ಮುಚ್ಚಬೇಕು ಅಂತ ಅನಿಸೋದಿಲ್ಲ. ಇದು ನಮ್ಮ ವ್ಯವಸ್ಥೆ. ಏನೇ ಆಗಲಿ ಇಂತಹ ಕೆಟ್ಟ ಪದಗಳ ಪೋಸ್ಟರ್ ಸಂದೇಶ ಸಮಂಜಸವಲ್ಲ.