ಗಾಲಿ ರೆಡ್ಡಿ ಮಗಳ ಮದ್ವೆಗೆ ಪರಂ ಎಂಟ್ರಿ, ಪೊಲೀಸರು ಗರಂ
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಮಗಳ ಮದುವೆ ಅರಮನೆ ಮೈದಾನದಲ್ಲಿ ವೈಭವ, ಸಂಭ್ರಮ, ಸಡಗರ, ಅಚ್ಚರಿಯಿಂದ ಸಂಪನ್ನವಾಗಿದೆ. ಮದುವೆ ಮುಗಿಸಿಕೊಂಡು ಎಲ್ಲರೂ ಬಳ್ಳಾರಿಗೆ ತೆರಳಿದ್ದಾರೆ.
ಬೆಂಗಳೂರು, ನವೆಂಬರ್ 17: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಮಗಳ ಮದುವೆ ಅರಮನೆ ಮೈದಾನದಲ್ಲಿ ವೈಭವ, ಸಂಭ್ರಮ, ಸಡಗರ, ಅಚ್ಚರಿಯಿಂದ ಸಂಪನ್ನವಾಗಿದೆ. ಮದುವೆ ಮುಗಿಸಿಕೊಂಡು ಎಲ್ಲರೂ ಬಳ್ಳಾರಿಗೆ ತೆರಳಿದ್ದಾರೆ. ಈ ನಡುವೆ ಮದುವೆಗೆ ಇದ್ದಕ್ಕಿದ್ದಂತೆ ಆಗಮಿಸಿದ ಗೃಹಸಚಿವರ ಬಗ್ಗೆ ಬೆಂಗಳೂರು ಪೊಲೀಸರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿಯಿದೆ.
ಐಷಾರಾಮಿ, ಅದ್ದೂರಿ ಮದುವೆಗಳಿಗೆ ಕಡಿವಾಣ ಹಾಕಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳುತ್ತಾರೆ. ಆದರೆ, ಕಾಂಗ್ರೆಸ್ ನ ಹಿರಿಯ ನಾಯಕರು ಸುಮಾರು 500 ಕೋಟಿ ರು ಗೂ ಅಧಿಕ ವೆಚ್ಚದ ಐಭೋಗದ ಮದುವೆಯಲ್ಲಿ ಹಾಜರಾಗುತ್ತಾರೆ. [ಹೊಗಳಿಕೆ ಟೀಕೆ ಅಪಹಾಸ್ಯಕ್ಕೀಡಾದ ರೆಡ್ಡಿ ಮಗಳ ಮದುವೆ!]
ಐದಾರು ದಿನಗಳಿಂದ ಅರಮನೆ ಮೈದಾನದಲ್ಲಿ ವಿವಿಐಪಿಗಳಿಗೆ ಭದ್ರತೆ ಒದಗಿಸಿ ಹೌರಾಣಾಗಿದ್ದ ಬೆಂಗಳೂರು ಪೊಲೀಸ್ ಪಡೆಗೆ ಗೃಹ ಸಚಿವರ ಆಗಮನದ ಸುದ್ದಿ ಕೇಳಿ ವಿಚಲಿತರಾಗುತ್ತಾರೆ. [ಮದುವೆ ಚಿತ್ರಸಂಪುಟ]

ಕಾರಣ ಇಷ್ಟೆ, ಪರಮೇಶ್ವರ ಅವರು ಮದುವೆಗೆ ಬರುವುದು ಪೂರ್ವ ನಿಯೋಜಿತವಾಗಿರಲಿಲ್ಲ. ಇದ್ದಕ್ಕಿದ್ದಂತೆ ಬರುತ್ತಿದ್ದಾರೆ ಎಂದರೆ ಮದುವೆ ಮನೆಯಲ್ಲಿರುವ ವಿವಿಐಪಿಗಳ ಭದ್ರತೆ ಜತೆಗೆ ಗೃಹ ಸಚಿವರ ರಕ್ಷಣೆಯ ಹೊಣೆಯೂ ಪೊಲೀಸರಿಗೆ ತಲೆಬಿಸಿಯಾಗುತ್ತಿತ್ತು.
ಹೀಗಾಗಿ, ಗೃಹ ಸಚಿವರು ಮದುವೆ ಮನೆಗೆ ಬಂದಿದ್ದು ಕಂಡು ಅಚ್ಚರಿ ಪಟ್ಟವರಲ್ಲಿ ಪೊಲೀಸರೇ ಮೊದಲಿಗರು. ದಿಢೀರ್ ಎಂದು ಮದುವೆ ಮನೆಗೆ ಎಂಟ್ರಿ ಕೊಟ್ಟಿದ್ದರಿಂದ ಕೆಲ ಕಾಲ ಪೊಲೀಸರಲ್ಲಿ ಗೊಂದಲ ಮೂಡಿದ್ದು ಸಹಜ.[ ಗಾಲಿ ರೆಡ್ಡಿ ಮಗಳ ಮದುವೆಯಲ್ಲಿ ಕಂಡ ಮುಖಗಳು]
ಒಂದು ಕಡೆ ಅರಮನೆ ಮೈದಾನದ ಸುತ್ತಾ ಮುತ್ತಾ ಟ್ರಾಫಿಕ್ ನಿಯಂತ್ರಣ, ಮದುವೆ ಮನೆಯಲ್ಲಿ ಜನಗಳ ನಿಯಂತ್ರಣ, ವಿಐಪಿಗಳ ಭದ್ರತೆ ಜತೆಗೆ ಕಾರ್ಯ ನಿರ್ವಹಣೆ ಬಗ್ಗೆ ಗೃಹ ಸಚಿವರು ಏನು ಹೇಳುತ್ತಾರೆ ಎಂಬ ದಿಗಿಲು, ಒಟ್ಟಾರೆ ಪೊಲೀಸರ ಸ್ಥಿತಿ ಅಯೋಮಯವಾಗಿತ್ತು.
'ನಾನಿಲ್ಲಿ ಕೇವಲ ಆಹ್ವಾನಿತ ಅತಿಥಿಯಾಗಿ ಮದುವೆ ಮನೆಗೆ ಬಂದಿದ್ದೇನೆ. ರಾಜ್ಯದ ಗೃಹ ಸಚಿವನಾಗಿ ಅಲ್ಲ ' ಎಂದು ಜಿ ಪರಮೇಶ್ವರ ಅವರು ಹೇಳಿದರೂ, ಪೊಲೀಸರೇ ತಮ್ಮ ಬಾಸ್ ಕಾಯುವುದು ದೊಡ್ಡ ಕೆಲಸವಾಗಿತ್ತು. ಅಗತ್ಯ ಸಿಬ್ಬಂದಿಗಳ ನಿಯೋಜನೆ ತ್ವರಿತಗತಿಯಲ್ಲಿ ಮಾಡಿಕೊಳ್ಳುವುದು ಕಷ್ಟವಾಗಿದ್ದರಿಂದ ಸ್ವಲ್ಪಮಟ್ಟಿಗೆ ಹೆಣಗಾಡಬೇಕಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ದುಂದು ವೆಚ್ಚದ ಮದುವೆಗೆ ಗೃಹ ಸಚಿವರು ಭೇಟಿ ನೀಡಿದ್ದು ಭ್ರಷ್ಟರ ವಿರುದ್ಧ ತನಿಖೆ ನಡೆಸುವ ವಿಶೇಷ ತನಿಖಾ ತಂಡಕ್ಕೂ ಮುಜುಗರ ತಂದಿದೆ. ಇದರಿಂದ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ಇಲಾಖೆ ಮೂಲಗಳು ಹೇಳಿವೆ. ಒಟ್ಟಾರೆ, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸೇರಿದಂತೆ ಮಾಜಿ, ಹಾಲಿ ಶಾಸಕ, ಸಚಿವರನ್ನು ಸೇರಿದಂತೆ ಜನಪ್ರತಿನಿಧಿಗಳ ದಂಡು ಮದುವೆ ಮನೆಯ ವೈಭೋಗವನ್ನು ಕಣ್ತುಂಬಿಕೊಂಡಿದ್ದಾರೆ.












Click it and Unblock the Notifications