ರಾಜಕಾಲುವೆಯಲ್ಲಿ ಪೊಲೀಸರಿಂದ ಮತ್ತೆ ಮಹಜರು, ಆರೋಪಿ ಸಹಿತ ಶೋಧಕಾರ್ಯ
ಬೆಂಗಳೂರು, ಜೂನ್ 17: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ದರ್ಶನ್ ಬಂಧನ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ತನಿಖೆ ಕೈಗೆತ್ತಿಕೊಂಡಿರುವ ಅನ್ನಪೂಣೇಶ್ವರಿ ಠಾಣೆ ಪೊಲೀಸರು ಪ್ರತಿಯೊಂದು ಸಾಕ್ಷ್ಯ ಕಲೆ ಹಾಕುತ್ತಿದ್ದಾರೆ. ಇದೀಗ ಇದುವರೆಗೂ ಪತ್ತೆ ಆಗದ ಮೃತ ರೇಣುಕಾಸ್ವಾಮಿ ಮೊಬೈಲ್ಗಾಗಿ ರಾಜಕಾಲುವೆಯಲ್ಲಿ ಮಹಜರು ಮಾಡಲಾಗುತ್ತಿದೆ.
ಹೌದು, ದರ್ಶನ್ ಗ್ಯಾಂಗ್ ನಿಂದ ಹತ್ಯೆಗೀಡಾದ ರೇಣುಕಾಸ್ವಾಮಿ ಸ್ವಾಮಿಯನ್ನು ಕೊಲೆ ಮಾಡಿ ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯ ಸತ್ವ ಅಪಾರ್ಟ್ಮೆಂಟ್ ಬಳಿಕ ಇರುವ ರಾಜಕಾಲುವೆಗೆ ಆರೋಪಿಗಳು ಬೀಸಾಕಿದ್ದರು. ನಾಯಿಗಳು ಶವವನ್ನು ಎಳೆದಾಡಿದ ಬಳಿಕ ಮೃತ ದೇಹ ಪತ್ತೆಯಾಗಿತ್ತು.

ಆರೋಪಿಗಳು ಶವದ ಜೊತೆಗೆ ರೇಣುಕಾಸ್ವಾಮಿ ಮೊಬೈಲ್ ಸೇರಿದಂತೆ ಮೂವರ ಮೊಬೈಲ್ ಸಹ ಅಲ್ಲಿಯೇ ಬಿಸಾಡಿದ್ದರು. ಇದೀಗ ಆ ಮೊಬೈಲ್ ಇದುವರೆಗೆ ಸಿಕ್ಕಿಲ್ಲ. ಹೀಗಾಗಿ ಸೋಮವಾರ ಪೊಲೀಸರು ಅಗತ್ಯ ಸಿಬ್ಬಂದಿ ಮತ್ತು ಆರೋಪಿಗಳ ಸಮೇತರಾಗಿ ಮೊಬೈಲ್ ಎಸೆದ ರಾಜಕಾಲುವೆ ಒಳಗೆ ಹಾಗೂ ಸುತ್ತಮುತ್ತ ಮಹಜರು ನಡೆಸುತ್ತಿದ್ದಾರೆ.
ಹತ್ಯೆ ಪ್ರಕರಣ ತನಿಖೆ ತೀವ್ರಗೊಳಿಸಿರುವ ಪೊಲೀಸರು
ರೇಣುಕಾಸ್ವಾಮಿ ಮೊಬೈಲ್ ಸಿಕ್ಕರೆ ಅದರಿಂದ ಇನ್ನಷ್ಟು ಸಾಕ್ಷ್ಯಗಳು ಸಿಗುವ ಸಾಧ್ಯತೆ ಇದೆ. ಈ ದರ್ಶನ್ ಗ್ಯಾಂಗ್ ಎಷ್ಟು ಭಾರಿ ಕರೆ ಮಾಡಿದ್ದರು, ಯಾರೆಲ್ಲ ಮೊಬೈಲ್ಗಳನ್ನು ಬಿಸಾಡಲಾಗಿತ್ತು ಇನ್ನಿತರ ಎಲ್ಲ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.

ಸದ್ಯ ಹತ್ಯೆ ಬಳಿಕ ದರ್ಶನ್ ಸೇರಿದಂತೆ 18 ಜನರನ್ನು ಬಂಧಿಸಲಾಗಿದೆ. ದರ್ಶನ್ ಪರ ವಕೀಲರು ವಾದಿಸದಂತೆ ಪೊಲೀಸರು ನ್ಯಾಯಾಲಯದ ಗಮನಕ್ಕೆ ತರದೇ ಹತ್ತು ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಇನ್ನೂ ಹಲವು ಸಾಕ್ಷ್ಯಾಧಾರ ವಶಕ್ಕೆ ಪಡೆಯಬೇಕಿದೆ. ಹಿಗಾಗಿಯೇ ಡಿ ಗ್ಯಾಂಗ್ ಅನ್ನು ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಮೊಬೈಲ್ಗಾಗಿ ರಾಜಕಾಲುವೆಗೆ ಇಳಿದು ಸಿಬ್ಬಂದಿ, ಶೋಧ
ಅದರ ಮುಂದುವರಿದ ಭಾಗವಾಗಿ ಇಂದು ಮೃತದೇಹ ಎಸೆದಿದ್ದ ಜಾಗದಲ್ಲಿ, ರಾಜಕಾಲುವೆ ಒಳಗೆ ಮಹಜರು ನಡೆಸಲಾಗುತ್ತಿದೆ. ಸಿಬ್ಬಂದಿ ಹ್ಯಾಂಡ್ ಗ್ಲೌಸ್ ಹಾಕಿಕೊಂಡು ರಾಜಕಾಲುವೆಗೆ ಇಳಿದಿದ್ದಾರೆ. ಕೊಳಚೆ ನೀರಿನಲ್ಲಿ ಮೊಬೈಲ್ ಗಳಿಗಾಗಿ ತಡಕಾಡುತ್ತಿದ್ದಾರೆ.
ರಾಜ ಕಾಲುವೆಯಲ್ಲಿ ಎಸಿಪಿ ಚಂದನ್ ಕುಮಾರ್ ನೇತೃತ್ವದಲ್ಲಿ ಪರಿಶೀಲನೆ ನಡೆಯುತ್ತಿದೆ. ಪೊಲೀಸರು ಈ ವೇಳೆ ಆರೋಪಿ ಪ್ರದೂಷ್ ನನ್ನು ಕರೆತಂದು ಮೊಬೈಲ್ ಹುಡುಕಾಟಕ್ಕೆ ಮುಂದುವರಿಸಿದ್ದಾರೆ. ಆತನನ್ನು ಮೊಬೈಲ್ ಎಸೆದ ಸ್ಥಳ ಬಗ್ಗೆ ವಿಚಾರಿಸಿ ಅಲ್ಲೆಲ್ಲ ಮಹಜರು ನಡೆಸಿದ್ದಾರೆ.












Click it and Unblock the Notifications