ಕಿರುಕುಳದ ಬಗ್ಗೆ ಹೇಳಿಕೆ ಕೊಟ್ಟ ಪಿಎಸ್ಐ ರೂಪಾ ತಂಬದ
ಬೆಂಗಳೂರು, ಜುಲೈ 23 : ಆತ್ಮಹತ್ಯೆಗೆ ಯತ್ನಿಸಿದ್ದ ಬೆಂಗಳೂರಿನ ವಿಜಯನಗರ ಠಾಣೆ ಪಿಎಸ್ಐ ರೂಪಾ ತಂಬದ ಅವರು ಅಧಿಕಾರಿಗಳ ಮುಂದೆ ಹೇಳಿಕೆ ಕೊಟ್ಟಿದ್ದಾರೆ. 'ಇನ್ಸ್ಪೆಕ್ಟರ್ ಸಂಜೀವ್ ಗೌಡ ಅವರು ಕರ್ತವ್ಯವ ವಿಚಾರದಲ್ಲಿ ತೊಂದರೆ ಕೊಡುತ್ತಿದ್ದರು' ಎಂದು ರೂಪಾ ಹೇಳಿದ್ದಾರೆ.
ಜುಲೈ 19ರಂದು ಆತ್ಮಹತ್ಯೆಗೆ ಯತ್ನಿಸಿದ ಪಿಎಸ್ಐ ರೂಪಾ ಅವರು ರಾಜಾಜಿನಗರದ ಸುಗುಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಮಲ್ಲೇಶ್ವರಂ ಉಪವಿಭಾಗದ ಎಸಿಪಿ ಅರುಣ್ ನಾಯಕ್ ಅವರು ಆಸ್ಪತ್ರೆಗೆ ಭೇಟಿ ನೀಡಿ ರೂಪಾ ಅವರಿಂದ ಹೇಳಿಕೆ ಪಡೆದುಕೊಂಡಿದ್ದಾರೆ.[ರೂಪಾ ಹೇಳಿಕೆ ಇಲ್ಲದ ವರದಿ ಮೇಘರಿಕ್ ಕೈಗೆ!]

'ಇನ್ಸ್ಪೆಕ್ಟರ್ ಸಂಜೀವ್ ಗೌಡ ಅವರು ತೊಂದರೆ ಕೊಡುತ್ತಿದ್ದರು. ಮೊಬೈಲ್ ನಾಪತ್ತೆ ವಿಚಾರದಲ್ಲಿ ಆರೋಪಿಗಳು ಮತ್ತು ಠಾಣೆಯ ಸಿಬ್ಬಂದಿಗಳ ಮುಂದೆಯೇ ಬೈಯ್ದಿದ್ದರು. ಇದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದೆ' ಎಂದು ರೂಪಾ ಅವರು ಹೇಳಿಕೆ ಕೊಟ್ಟಿದ್ದಾರೆ.[ರೂಪಾ ಆತ್ಮಹತ್ಯೆ ಯತ್ನ, ವರದಿ ಕೇಳಿದ ಪರಮೇಶ್ವರ]
'ಅಮಾನತು ಶಿಕ್ಷೆ ಮುಗಿಸಿ ವಾಪಸ್ ಬಂದ ಬಳಿಕ ವಿನಾ ಕಾರಣ ಎಲ್ಲರ ಮೇಲೂ ಸಂಜೀವ್ ಗೌಡ ಅವರು ಕೂಗಾಡುತ್ತಿದ್ದರು. ನನ್ನನ್ನು ಕಂಡರೆ ಅವರಿಗೆ ಆಗುತ್ತಿರಲಿಲ್ಲ. ಅವಧಿ ಮೀರಿ ಕೆಲಸ ಮಾಡಿದರೂ, ನನ್ನ ತಪ್ಪು ಇಲ್ಲದಿದ್ದರೂ ನಿಂದಿಸುತ್ತಿದ್ದರು' ಎಂದು ರೂಪಾ ಹೇಳಿದ್ದಾರೆ.[ಕರ್ನಾಟಕದ ಪೊಲೀಸರು ಸಮೂಹಸನ್ನಿಗೊಳಗಾಗಿದ್ದಾರಾ?]
'ಜೂನ್ 16ರಂದು ದಾಖಲಾಗಿದ್ದ ಪೋಕ್ಸೊ ಪ್ರಕರಣವನ್ನು ನಾನೇ ತನಿಖೆ ಮಾಡಿದ್ದೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆತನಿಂದ ಜಪ್ತಿ ಮಾಡಿದ ಮೊಬೈಲ್ ಠಾಣೆಯಲ್ಲೇ ಇತ್ತು. ಠಾಣೆಗೆ ಬಂದಿದ್ದ ಸಂಜೀವ್ ಗೌಡ ಅವರು ಸರಿಯಾಗಿ ತನಿಖೆ ಮಾಡಿಲ್ಲ ಎಂದು ನಿಂದಿಸಿದ್ದರು' ಎಂದು ರೂಪಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ಜಾಮೀನಿನ ಮೇಲೆ ಹೊರಬಂದ ಆರೋಪಿ ಠಾಣೆಗೆ ಬಂದು ಮೊಬೈಲ್ ನೀಡುವಂತೆ ಕೇಳಿದ್ದ. ಇನ್ಸ್ಪೆಕ್ಟರ್ ಅನುಮತಿ ಪಡೆದು ಅದನ್ನು ತೆಗೆದುಕೊಂಡು ಹೋಗುವಂತೆ ಹೇಳಿದ್ದೆ. ಆದರೆ, ನಾನು ಕರ್ತವ್ಯ ಲೋಪ ಮಾಡಿದ್ದೇನೆ ಎಂದು ಅವರು ಡೈರಿಯಲ್ಲಿ ಬರೆದಿದ್ದರು' ಎಂದು ರೂಪಾ ಹೇಳಿದ್ದಾರೆ.
ವರ್ಗಾವಣೆ ಬಯಸಿದ್ದರು : ಸಂಜೀವ್ ಗೌಡ ಅವರ ಕಿರುಕುಳದಿಂದಾಗಿ ರೂಪಾ ಅವರು ಬೇರೆ ಠಾಣೆಗೆ ವರ್ಗಾವಣೆ ಕೇಳಿದ್ದರು. 'ಬೇರೆ ಠಾಣೆಗೆ ವರ್ಗಾವಣೆ ಕೋರಿ ಎರಡು ವಾರಗಳ ಹಿಂದೆ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದೆ' ಎಂದು ರೂಪಾ ಹೇಳಿಕೆ ಕೊಟ್ಟಿದ್ದಾರೆ.












Click it and Unblock the Notifications