ಸದ್ದಿಲ್ಲದೇ ಸಡಿಲವಾಗುತ್ತಿವೆ ಸಿಲಿಕಾನ್ ಸಿಟಿ ನಿರ್ಬಂಧಗಳು !
ಬೆಂಗಳೂರು, ಮೇ. 17: ಮಾಧ್ಯಮಗಳ ಸುದ್ದಿ ಅಬ್ಬರ ಹಾಗೂ ಪೊಲೀಸರ ಲಾಠಿ ಏಟು ಕೊಟ್ಟು ಜಾರಿ ಮಾಡಿದ್ದ "ಪೊಲೀಸರು ಕಟ್ಟು ನಿಟ್ಟಿನ ಲಾಕ್ ಡೌನ್ ನಿರ್ಬಂಧಗಳು" ಒಂದೆಡೆ ಸದ್ದಿಲ್ಲದೇ ಸಡಿಲವಾಗುತ್ತಿವೆ. ಪೊಲೀಸರ ಲಾಠಿ ಏಟಿನ ಗಾಯಗಳು ಮಾಸಿವೆಯಾದರೂ, ಪೊಲೀಸರ ವಿರುದ್ಧ ದಾಖಲಾಗಿರುವ ಕೇಸುಗಳು ಮಾತ್ರ ಖುಲಾಸೆಯಾಗಿಲ್ಲ !
ಲಾಠಿ ಏಟಿನ ಕಠಿಣ ನಿಯಮ ಜಾರಿ:
ರಾಜ್ಯದಲ್ಲಿ ಕಠಿಣ ಲಾಕ್ ಡೌನ್ ನಿಯಮ ಘೋಷಣೆ ಮಾಡುತ್ತಿದ್ದಂತೆ ಸುದ್ದಿ ಮಾಧ್ಯಮದ ಕ್ಯಾಮರಾ ಕಣ್ಣು ಎಚ್ಚರಗೊಂಡಿದ್ದವು. ಒಂದು ದಿನ ಮೊದಲೇ ಪೊಲೀಸರು ರಸ್ತೆಗೆ ಇಳಿದಿದ್ದರು. ಬ್ಯಾರಿ ಕೇಡ್ ಹಾಕಿ ರಸ್ತೆಗಳನ್ನು ಬಂದ್ ಮಾಡಿದ್ದರು. ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದವರಿಗೆ ಲಾಠಿ ಏಟು ಕೊಟ್ಟ ಪೊಲೀಸರು ರಾಜ್ಯದೆಲ್ಲಡೆ ಸುದ್ದಿಯಾಗಿದ್ದರು. ಲಾಠಿ ಗುನ್ನಾ ಕೊಟ್ಟು ಪೊಲೀಸರ ಪ್ರಶಂಸೆ ಕೂಡಲೇ ಮತ್ತಷ್ಟು ಪೊಲೀಸರು ಲಾಠಿ ಹಿಡಿದು ಬೀದಿಗೆ ಇಳಿದು ನಿಯಮ ಉಲ್ಲಂಘನೆ ಹೆಸರಿನಲ್ಲಿ ಲಾಠಿ ಲಾತ ನೀಡಿದರು. ಲಾಕ್ ಡೌನ್ ನಿಯಮ ಉಲ್ಲಂಘನೆ ಹೆಸರಿನಲ್ಲಿ ಕೇಸು ಹಾಕಿಸಿ ದಂಡದ ಹೆಸರಿನಲ್ಲಿ ವಸೂಲಿಗೆ ನಿಂತಿದ್ದರು.
ಮಾನವ ಹಕ್ಕುಗಳ ಉಲ್ಲಂಘನೆ
ಮಾಧ್ಯಮಗಳ ಅಬ್ಬರದ ಸುದ್ದಿಗೆ ಸಂತಸಗೊಂಡು ಪೊಲೀಸರು ಸಿಕ್ಕ ಸಿಕ್ಕಲ್ಲಿ ಲಾಠಿ ಪ್ರಯೋಗಿಸಿದರು. ಬದುಕಿನ ಅನಿವಾರ್ಯತೆಯಿಂದ ಹೊರಗೆ ಬಂದವರಿಗೆ ಮೊದಲು ಲಾಠಿ ಏಟು ಕೊಟ್ಟು ಆಮೇಲೆ ಅಹವಾಲು ಕೇಳುವಂತೆ ನಡೆದುಕೊಂಡರು. ಕೋಲಾರದಲ್ಲಿ ಮಂಗಳಮುಖಿಯನ್ನು ಜುಟ್ಟು ಹಿಡಿದು ಪೊಲೀಸ್ ಸಬ್ಇನ್ಸ್ಪೆಕ್ಟರ್ ಎಳೆದೊಯ್ದರು. ಮೈಸೂರಿನಲ್ಲಿ ರೈತನೊಬ್ಬ ಪೊಲೀಸರ ಏಟು ಸಹಿಸಲಾಗದೇ ರಸ್ತೆಯಲ್ಲಿಯೇ ಉರುಳಾಡಿದ್ದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಯಿತು. ಬೆಂಗಳೂರಿನಲ್ಲಿ ಪೊಲೀಸರ ಲಾಠಿ ಏಟು ತಾಳಲಾರದೇ ಓಡೋಡಿ ಬಿದ್ದ ಪ್ರಕರಣಗಳು ವರದಿಯಾದವು.
ಕಾನೂನು ಕೈಗೆ ತೆಗೆದೆಕೊಂಡು ಪೊಲೀಸರು ತೋರಿದ ವರ್ತನೆ ವಿರುದ್ಧ ನ್ಯಾಯಾಂಗ ವ್ಯವಸ್ಥೆ ತಿರುಗಿ ಬಿತ್ತು. ಮಾನವ ಹಕ್ಕು ಆಯೋಗದ ಸದಸ್ಯ ಆರ್.ಕೆ. ದತ್ತಾ ಅವರು ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಳ್ಳುವ ಎಚ್ಚರಿಕೆ ನೀಡಿದರು. ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಆಯಿತು. ಸಾರ್ವಜನಿಕರು ಸಾಮಾಜಿಕ ಜಾಲ ತಾಣದಲ್ಲಿ ಟೀಕೆ ಮಾಡಲು ಶುರುವಾದರು. ಅಂತೂ ಪೊಲೀಸರ ದೌರ್ಜನ್ಯ ವಿರುದ್ಧ ಜನ ಸಾಮಾನ್ಯರ ಆಕ್ರೋಶ ವ್ಯಕ್ತವಾಯಿತು. ಜನರ ಮೇಲೆ ಕೈ ಎತ್ತಬೇಡಿ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಆದೇಶ ಮಾಡಿದರು.
ಗಾಯ ವಾಸಿ ಆದ್ರೂ ಕೇಸು ಖುಲಾಸೆಯಿಲ್ಲ
ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಆದೇಶ ಮಾಡುತ್ತಿದ್ದಂತೆ ಸಾರ್ವಜನಿಕರ ಮೇಲೆ ಲಾಠಿ ಪ್ರಯೋಗ ನಿಂತು ಹೋಗಿದೆ. ಪೊಲೀಸರ ಲಾಠಿ ಏಟುಗಳ ಗಾಯಗಳು ವಾಸಿಯಾಗಿವೆ. ಆದರೆ, ಪೊಲೀಸರು ಲಾಠಿ ಏಟಿನ ಸಂಬಂಧ ಮಾನವ ಹಕ್ಕು ಆಯೋಗ , ಹೈಕೋರ್ಟ್ ಗೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೇಸುಗಳು ಮಾತ್ರ ಇನ್ನೂ ಖುಲಾಸೆಯಾಗಲ್ಲ. ಅನಾವಶ್ಯಕವಾಗಿ ನಾಗರಿಕರ ಮೇಲೆ ತೋರಿದ ದರ್ಪದ ಮೇಲಿನ ವಿಚಾರಣೆ ಪೊಲೀಸರು ಮುಂದಿನ ದಿನಗಳಲ್ಲಿ ಎದುರಿಸುವಂತಾಗಿದೆ. ಸಾರ್ವಜಿಕ ಟೀಕೆ, ಹೈಕೋರ್ಟ್ ಅರ್ಜಿ, ಪೊಲೀಸ್ ಮಹಾ ನಿರ್ದೇಶಕರ ಆದೇಶದ ಹಿನ್ನೆಲೆಯಲ್ಲಿ ಪೊಲೀಸರು ಕೂಡ ಆರಂಭದಲ್ಲಿ ತೋರಿದ್ದ ಉತ್ಸುಕತೆ ಈಗ ಕಳೆದುಕೊಂಡಿದ್ದಾರೆ. ಜನರು ಕೂಡ ಬದುಕಿನ ಅನಿವಾರ್ಯತೆಗೆ ಬಿದ್ದು ನಾನಾ ಕಾರಣ ನೀಡಿ ಬೀದಿಗೆ ಬರುತ್ತಿದ್ದಾರೆ.
8 ನೇ ದಿನ ವಸ್ತುಸ್ಥಿತಿ
ನಗರದ ಹೃದಯ ಭಾಗದಲ್ಲಿರುವ ಕೆ.ಆರ್. ಮಾರ್ಕೆಟ್ ನಲ್ಲಿ ಬೆಳಗ್ಗೆ ಎಂದಿನಂತೆ ಜನ ಸಂದಣಿ ಜಾಸ್ತಿಯಾಗಿತ್ತು. ಹತ್ತುಗಂಟೆಯಾಗುತ್ತಿದ್ದಂತೆ ಜನ ಕಾಣೆಯಾದರು. ಆದರೆ, ಕೆ.ಆರ್. ಮಾರ್ಕೆಟ್ ಗೆ ಹೊಂದಿಕೊಂಡಿರುವ ಅವೆನ್ಯೂ ರಸ್ತೆಯಲ್ಲಿ ಜನ ಸಂದಣಿ ಜಾಸ್ತಿಯಾಗಿತ್ತು. ಸಿಟಿ ಮಾರ್ಕೆಟ್ ಬಳಿ ತರಕಾರಿ, ಸೊಪ್ಪು, ಹಣ್ಣು ಮಾರಾಟ ವ್ಯವಸ್ಥೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪೊಲೀಸರು ಹೇಳುತ್ತಿದ್ದರು. ಜೀವನದ ಅವಶ್ಕಕತೆಗೆ ಬಿದ್ದಿರುವ ಜನರು ಇದೀಗ ಮನೆ ಬಿಟ್ಟು ಹೋಗುತ್ತಿದ್ದಾರೆ.
Recommended Video
ಸಾಕಷ್ಟು ನಿಯಮಗಳು ಸಡಿಲವಾದಂತೆ ಕಾಣುತ್ತಿತ್ತು
ಮೊದಲನೇ ದಿನಕ್ಕೆ ಹೋಲಿಸಿದರೆ ಎಂಟನೇ ದಿನ ರಾಜಧಾನಿ ಬೆಂಗಳೂರಿನಲ್ಲಿ ಸಾಕಷ್ಟು ನಿಯಮಗಳು ಸಡಿಲವಾದಂತೆ ಕಾಣುತ್ತಿತ್ತು. ಇನ್ನು ರಸ್ತೆಗಳಲ್ಲಿ ಅನಾವಶ್ಯಕವಾಗಿ ಓಡಾಡುವ ವಾಹನಗಳನ್ನು ತಪಾಸಣೆ ಮಾಡಲು ಹಾಕಿರುವ ಚೆಕ್ ಪಾಯಿಂಟ್ಗಳಲ್ಲಿ ಪೊಲೀಸರು ಉತ್ಸುಕತೆಯಿಂದ ಕೆಲಸ ನಿರ್ವಹಿಸುತ್ತಿಲ್ಲ. ವಾಹನ ಸವಾರರು ಅವರ ಪಾಡಿಗೆ ಅವರು ಹೋಗುತ್ತಿದ್ದಾರೆ. ಪೊಲೀಸರು ಮೊದಲಿನಂತೆ ಮುತುವರ್ಜಿ ವಹಿಸಿ ಅವರನ್ನು ತಡೆದು ನಿಲ್ಲಿಸುತ್ತಿಲ್ಲ. ಇದು ರಾಜಧಾನಿ ಮಾತ್ರವಲ್ಲ ರಾಜ್ಯದಲ್ಲೂ ಕೂಡ ಇದೇ ಸ್ಥಿತಿ ಮುಂದುವರೆದಿದೆ. ಇನ್ನು ದಂಡ, ಮಾಮೂಲಿ ಚೆಕ್ ಪಾಯಿಂಟ್ ತಪಾಸಣೆಗೆ ಬ್ರೇಕ್ ಬಿದ್ದಿದೆ.