ಬೆಂಗಳೂರಿನಲ್ಲಿ ಕುಡಿದು ವಾಹನ ಚಾಲನೆ ಮಾಡಿದರೆ ಲೈಸನ್ಸ್ ರದ್ದು

ಬೆಂಗಳೂರು, ಸೆ. 20: ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡಿದರೆ ಚಾಲನಾ ಪರವಾನಗಿ ಅಮಾನತು ಆಗಲಿದೆ ಹುಷಾರ್ ! ಇನ್ನು ರಸ್ತೆಗಳಲ್ಲಿ ಬೇಕಾಬಿಟ್ಟಿ ವ್ಹೀಲಿಂಗ್ ಮಾಡಿ ಜನರಲ್ಲಿ ಭೀತಿ ಹುಟ್ಟಿಸಿದರೆ ಜೈಲಿಗೆ ಹೋಗಬೇಕಾದೀತು! ಕೋವಿಡ್ ಹಿನ್ನೆಲೆಯಲ್ಲಿ "ಡ್ರಿಂಕ್ ಅಂಡ್ ಡ್ರೈವ್ " ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ಸಂಚಾರ ಪೊಲೀಸರು ಇದೀಗ ಬೆಂಗಳೂರು ರಸ್ತೆಗೆ ಇಳಿದಿದ್ದಾರೆ. ಕುಡಿದು ವಾಹನ ಚಾಲನೆ ಮಾಡಿದರೆ ಚಾಲನ ಪರವಾನಗಿ ಅಮಾನತು ಮಾಡಲಾಗುತ್ತಿದೆ. ಜತೆಗೆ ಸಾವಿರಾರು ರೂಪಾಯಿ ದಂಡವನ್ನು ವಿಧಿಸುತ್ತಿದ್ದಾರೆ. ಅಪಾಯಕಾರಿ ವ್ಹೀಲಿಂಗ್ ಮಾಡುವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ ಜೈಲಿಗೆ ಕಳುಹಿಸಲಾಗುತ್ತಿದೆ.

ಅಪಘಾತಗಳು ಕಲಿಸಿದ ಪಾಠ: ಕೋರಮಂಗಲದ ಕಲ್ಯಾಣ ಮಂಟಪದ ಬಳಿ ತಮಿಳುನಾಡಿನ ಶಾಸಕ ಪುತ್ರನೊಬ್ಬನ ಅಡಿ ಕಾರು ಅಪಘಾತ ಪ್ರಕರಣದಲ್ಲಿ ಏಳು ಮಂದಿ ಸಾವಿಗೀಡಾಗಿದ್ದರು. ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಬಳಿ ಸಂಭವಿಸಿದ ಕಾರು ಅಪಘಾತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಬೆಂಗಳೂರಿನಲ್ಲಿ ಇತ್ತೀಚೆಗೆ ಸಂಭವಿಸಿದ ಅಪಘಾತಗಳಿಗೆ ಮದ್ಯ ಸೇವನೆ ಅಥವಾ ಮಾದಕ ವಸ್ತು ಸೇವನೆ ಮಾಡಿ ಅಪಾಯಕಾರಿ ಚಾಲನೆ ಮಾಡಿರುವುದು ಕಾರಣ ಎಂಬುದು ಗೊತ್ತಾಗುತ್ತಿದ್ದಂತೆ ಸಂಚಾರ ವಿಭಾಗದ ಪೊಲೀಸರನ್ನು ರಾತ್ರಿ ಕಾರ್ಯಾಚರಣೆಗೆ ಇಳಿಸಲಾಗಿದೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬರುವ 44 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಡ್ರಿಂಕ್ ಅಂಡ್ ಡ್ರೈವ್ ಹಾಗೂ ವ್ಹೀಲಿಂಗ್ ವಿರುದ್ಧ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಕಳೆದ ಎರಡು ದಿನ ನಡೆಸಿದ ಕಾರ್ಯಾಚರಣೆಯಲ್ಲಿ ಕುಡಿದು ಚಾಲನೆ ಮಾಡುತ್ತಿದ್ದ 95 ಮಂದಿಯ ವಾಹನ ಮಾಲೀಕರ/ಚಾಲಕರ ವಿರುದ್ಧ ಕೇಸು ದಾಖಲಿಸಲಾಗಿದೆ. ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

Bengaluru police again starts operation against Drink and drive

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಆರೋಪ ಸಂಬಂಧ ಬೆಂಗಳೂರಿನಲ್ಲಿ ಕಳೆದ ಎರಡು ದಿನದಲ್ಲಿ ಒಟ್ಟು 95 ಪ್ರಕರಣ ದಾಖಲಿಸಲಾಗಿದೆ. ಎಲ್ಲರ ಪರವನಾಗಿ ರದ್ದು ಮಾಡುವಂತೆ ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆ. ಇನ್ನು ಮದ್ಯ ಸೇವನೆ ಸಂಬಂಧ ದಂಡ ವಿಧಿಸುವಂತೆ ನ್ಯಾಯಾಲಯಗಳಿಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ನ್ಯಾಯಾಲಯ ನಿಗದಿ ಮಾಡಿದ ದಂಡವನ್ನು ಪಾವತಿಸಿ ಜಪ್ತಿಯಾಗಿರು ವಾಹನಗಳನ್ನು ಮಾಲೀಕರು ಬಿಡಿಸಿಕೊಳ್ಳಬೇಕಿದೆ. ಮದ್ಯಪಾನ ಮಾಡಿ ಅಪಾಯಕಾರಿ ವಾಹನ ಚಾಲನೆ ಮಾಡಿದವರ ಎಲ್ಲಾ ಪರವಾನಗಿ ರದ್ದು ಮಾಡಿ ಕ್ರಮ ಜರುಗಿಸಲಾಗುತ್ತಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.

Bengaluru police again starts operation against Drink and drive

ಚುರುಕು ಮುಟ್ಟಿಸಿದ ಪೊಲೀಸರು: ಕೋವಿಡ್ ಹಿನ್ನೆಲೆಯಲ್ಲಿ ಇತ್ತೀಚೆಗೆ ಮದ್ಯಪಾನ ಸೇವನೆ ಮಾಡಿ ವಾಹನ ಚಾಲನೆ ಮಾಡುವರ ವಿರುದ್ಧ ಕಾರ್ಯಾಚರಣೆಯನ್ನು ಸಂಚಾರ ಪೊಲೀಸರು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡು ಕುಡಿದು ವಾಹನ ಚಾಲನೆ ಮಾಡುವರ ಸಂಖ್ಯೆ ಜಾಸ್ತಿಯಾಗಿರುವ ಬಗ್ಗೆ ಸಾರ್ವಜನಿಕರು ಸಂಚಾರ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಸಂಚಾರ ಪೊಲೀಸರು ಡಿಡಿ ಕೇಸುಗಳ ವಿರುದ್ಧ ಸಮರ ಸಾರಿದ್ದಾರೆ.

ವ್ಹೀಲಿಂಗ್ ಮಾಡ್ತಿದ್ದವರ ಬಂಧನ : ಇನ್ನೂ ದ್ವಿಚಕ್ರ ವಾಹನದಲ್ಲಿ ಅಪಾಯಕಾರಿ ವ್ಹೀಲಿಂಗ್ ಮಾಡಿ ಭೀತಿ ಹುಟ್ಟಿಸುತ್ತಿದ್ದ ಆರು ಮಂದಿಯನ್ನು ಬಂಧಿಸಲಾಗಿದೆ. ಬ್ಯಾಟರಾಯನಪುರ ಪೊಲೀಸರು ಸುರೇಶ್ ಹಾಗೂ ವಿಷ್ಣು ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಬಾಣಸವಾಡಿ ಪೊಲೀಸರು ಸೂರ್ಯ ಎಂಬುವನನ್ನು ಬಂಧಿಸಿದ್ದಾರೆ. ಕೆ.ಆರ್ . ಪುರ ಪೊಲೀಸರು ಅಪ್ರಾಪ್ತ ಬಾಲಕ ಹಾಗೂ ಪವನ್ ಎಂಬುವರನ್ನು ಬಂಧಿಸಿದ್ದಾರೆ. ಎಚ್‌ಎಎಲ್ ಸಂಚಾರ ಪೊಲೀಸರು ಸಯ್ಯದ್ ಎಂಬಾತನ ವಿರುದ್ಧ ಕೇಸು ದಾಖಲಿಸಿ ವಾಹನ ಜಪ್ತಿ ಮಾಡಿದ್ದಾರೆ. ಬಂಧಿತ ಬಹುತೇಕರು 20 ವರ್ಷದ ಒಳಗಿನವರು ಎಂಬುದು ದೃಢಪಟ್ಟಿದೆ.

Recommended Video

      ಅಧಿಕಾರ ತ್ಯಜಿಸಿದ ಭಾಸ್ಕರ್ ರಾವ್ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+