ಬೆಂಗಳೂರನ್ನು ಬೃಹತ್ ಮಾಡಿ, ಮನೆಯನ್ನು ಮಳೆಗೆ ಸಿಲುಕಿಸಿದರೆ...
ಸೋಮವಾರ ಮಧ್ಯರಾತ್ರಿ ಇನ್ನೇನು ಮಂಗಳವಾರ ಕಣ್ಣು ತೆರೆಯುವುದಕ್ಕೆ ಒಂದೆರಡು ಗಂಟೆ ಬಾಕಿ ಇತ್ತು. ಅರವತ್ತೆಂಟು ವಯಸ್ಸಿನ ನನ್ನ ತಂದೆ ಜೋರಾಗಿ ಕೂಗಿದಂತೆ ಕೇಳಿಸಿತು. ವಿದ್ಯುತ್ ಸಂಪರ್ಕ ಕೂಡ ಇರಲಿಲ್ಲ. ನೀರು-ನೀರು ಅಂದಿದ್ದು ಸ್ಪಷ್ಟವಾಗಿ ಕೇಳಿಸಿತ್ತು. ನಾನು ಮಲಗಿದ್ದ ಕೋಣೆಯ ತುಂಬ ಮಳೆ ನೀರು. ಹಾಸಿಗೆ ಒದ್ದೆ ಮುದ್ದೆಯಾಗಿತ್ತು.
ಅಂದಹಾಗೆ ನಾವಿರುವ ಬಡಾವಣೆಯ ಹೆಸರು ಹೇಳಲಿಲ್ಲ ಅಲ್ಲವಾ? ಬನಶಂಕರಿ ಮೂರನೇ ಹಂತ, ಹೊಸಕೆರೆಹಳ್ಳಿಯ ದತ್ತಾತ್ರೇಯ ನಗರ. ಬಿಡಿ, ಎಲ್ಲಿ ಅಂತ ಹೇಳುವ ಅಗತ್ಯ ಏನು ಅಂತೀರಾ? ಬೆಂಗಳೂರಿನ ಬಹುತೇಕ ಪ್ರದೇಶಗಳ ಸ್ಥಿತಿ ಹೀಗೇ ಆಗಿದೆ. ಆದರೂ ನಮ್ಮ ಸ್ಥಿತಿ ಕೇಳಿ.
ಬೆಂಗಳೂರಿನ ಎಲ್ಲೆಲ್ಲಿ, ಎಷ್ಟೆಷ್ಟು ಮಳೆ: ಇಲ್ಲಿದೆ ಮಾಹಿತಿ
ಬಾಗಿಲ ಸಂದಿಯಿಂದ ಮಳೆ ನೀರು ಒಳ ನುಗ್ಗುವುದು ಹೆಚ್ಚುತ್ತಾ ಇರುವುದು ಗೊತ್ತಾಗಿ, ಏನಾದರೂ ಮಾಡಬೇಕು ಅಂದುಕೊಳ್ಳುವ ಹೊತ್ತಿಗೆ ಮೊಳಕಾಲುದ್ದ ನೀರು ಮನೆಯೊಳಗೆ ನಿಂತಿತ್ತು. ಕೋಣೆಯಲ್ಲಿದ್ದ ರೆಫ್ರಿಜರೇಟರ್ ಇನ್ನೇನು ತೇಲಾಡಿ, ಬೀಳುವುದರಲ್ಲಿತ್ತು. ಅಷ್ಟರಲ್ಲಿ ಅದಕ್ಕೆ ಹಗ್ಗ ಕಟ್ಟಿ ನಿಲ್ಲಿಸಲಾಯಿತು.
ಕೆರೆಗಳನ್ನು ಮುಚ್ಚಿಸಿದ್ದೇ ಬೆಂಗಳೂರಿನ ಈ ದೈನೇಸಿ ಸ್ಥಿತಿಗೆ ಕಾರಣ!
ಮಧುಮೇಹ, ಹೃದಯ ಸಂಬಂಧಿ ಸಮಸ್ಯೆ ಇರುವ ನನ್ನ ತಂದೆಯನ್ನು ಕನಿಷ್ಠ ಒಂದು ಕಡೆ ಕೂರಿಸಬೇಕಿತ್ತು. ಆದರೆ ಮಂಚದ ಮೇಲೆ ಒಂದಿಷ್ಟು ಬಟ್ಟೆ ರಾಶಿ, ಪುಸ್ತಕ, ಕೆಲವು ವಸ್ತುಗಳನ್ನು ಇರಿಸಿದ್ದರಿಂದ ಅಲ್ಲೇ ಸ್ವಲ್ಪ ಜಾಗ ಮಾಡಿ ಕೂಡಿಸಿದೆ. ಕಳೆದ ಜೂನ್ ನಲ್ಲಿ ಇದೇ ರೀತಿಯಾಗಿತ್ತು. ಆದರೆ ಸಂಜೆ ಶುರುವಾಗಿದ್ದ ಮಳೆಗೆ ಮನೆಯೊಳಗೆ ನೀರು ತುಂಬಿತ್ತು. ಹೇಗೋ ಹೆಣಗಾಡಿ ಮನೆಯನ್ನು ಮುಂಚಿನಂತೆ ಮಾಡಿಕೊಂಡಿದ್ದೆವು.
ಹದಿಮೂರು ವರ್ಷದಲ್ಲಿ ಇದು ಎರಡನೇ ಸಲ
ಇಲ್ಲಿ ಸ್ವಂತ ಮನೆ ಕಟ್ಟಿಕೊಂಡು ಬಂದು ಹದಿಮೂರು ವರ್ಷಗಳೇ ಕಳೆದಿವೆ. ಆದರೆ ಈ ರೀತಿ ಮಳೆ ನೀರು ಮನೆಗೆ ನುಗ್ಗುತ್ತಿರುವುದು ಈ ಎರಡು ತಿಂಗಳಿಂದ. ಮೊನ್ನೆಯ ಮಳೆ ಅವಘಡವನ್ನು ಸರಿ ಮಾಡಲು ಬಂದಂಥ ಬಿಬಿಎಂಪಿ ಅಧಿಕಾರಿ, ನಿಮ್ಮ ಮನೆಯ ಹಿಂದಿನ ಮೋರಿಯಲ್ಲಿ ಕಸ ತುಂಬಿತ್ತು. ಅದಕ್ಕೆ ಈ ಸಮಸ್ಯೆ ಎಂದು ತಣ್ಣಗಿನ ಧ್ವನಿಯಲ್ಲಿ ಹೇಳಿ, ನಾವೇ ಅಪರಾಧಿಗಳು ಎಂಬಂಥ ದೃಷ್ಟಿ ಬೀರಿದರು.
ಮೋರಿ ನಿರ್ವಹಣೆ ಯಾರ ಜವಾಬ್ದಾರಿ
ಎರಡು ತಿಂಗಳ ಹಿಂದೆ ಇದೇ ರೀತಿ ಆಗಿದ್ದಾಗ ಕೂಡ ಅಂಥದ್ದೇ ಒಂದು ಕಾರಣ ಹೇಳಿ ಸ್ಥಳದಿಂದ ಕಳಚಿಕೊಂಡಿದ್ದರು ಬಿಬಿಎಂಪಿ ಅಧಿಕಾರಿಗಳು. ಅಂದರೆ ಈ ರೀತಿ ಮಳೆ ನೀರು ಹೋಗುವ ಮೋರಿಗಳನ್ನು ನಿರ್ವಹಣೆ ಮಾಡಬೇಕಾದ ಜವಾಬ್ದಾರಿ ಯಾರದು?
ರಾಜಕಾಲುವೆ ಗುರುತಿಸಬಹುದಿತ್ತು
ನಾವು ಇಲ್ಲಿಗೆ ಬಂದ ಹೊಸತರಲ್ಲಿ ಇಂಥ ಸಮಸ್ಯೆ ಇರಲಿಲ್ಲ. ಓಹ್, ಇದು ರಾಜಕಾಲುವೆ ಎಂದು ಗುರುತಿಸಬಹುದಿತ್ತು. ಈಗ ಅದೆಲ್ಲಿದೆ ಅಂತ ಕೂಡ ಗೊತ್ತಿಲ್ಲ. ರಾಜ್ಯ ಸರಕಾರ ಒತ್ತುವರಿ ತೆರವು ಮಾಡುವುದಕ್ಕೆ ಆರಂಭದಲ್ಲಿ ತೋರಿದ ಉತ್ಸಾಹ ಈಗ ತೋರಿಸುತ್ತಿಲ್ಲ. ಮಳೆಗಾಲ ಮುಗಿದ ಮೇಲೆ ನಾವು ಆ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂಬುದು ಸರಕಾರಕ್ಕೂ ಗೊತ್ತು.
ಒಂದು ಪ್ರದೇಶದ ಕಥೆಯಲ್ಲ
ಬಿಡಿ, ಇದು ಒಂದು ಪ್ರದೇಶದ ಕಥೆಯಲ್ಲ. ಇಡೀ ಬೆಂಗಳೂರು ನೆನೆ ಹಾಕಿದ ಅವಲಕ್ಕಿಯಂತಾಗಿದೆ. ಅಲ್ಲೆಲ್ಲೋ ದೋಣಿ ಬಳಸಿದರಂತೆ. ನಾವೆಷ್ಟೋ ವಾಸಿ, ಮನೆಯಲ್ಲಿ ನೀರು ಬಂದಿದ್ದನ್ನು ನಾವೇ ತೆಗೆದು ಹಾಕಿಕೊಳ್ಳುವುದಕ್ಕೆ ಆಯಿತು ಎಂದು ನಮ್ಮ ರಸ್ತೆಯಲ್ಲೊಬ್ಬರು ಸಮಾಧಾನ ಪಟ್ಟುಕೊಳ್ಳುತ್ತಿದ್ದರು. ಒಂದೋ ಬಾಣಲೆ, ಇಲ್ಲವೇ ಬೆಂಕಿ ಎಂಬ ಸ್ಥಿತಿ ನಮ್ಮದು.
ಪ್ರಜ್ಞೆ - ಕಾಳಜಿ ಇರಬೇಕಿತ್ತಲ್ಲವೇ?
ಒಂದು ಮಗು ಹುಟ್ಟಿದರೆ ಅದರ ಇನ್ನೂ ಇಪ್ಪತ್ತೋ- ಮೂವತ್ತೋ ವರ್ಷದ ಭವಿಷ್ಯವನ್ನು ಈಗಲೇ ನಿರ್ಧರಿಸುವ ಪೋಷಕರನ್ನು ಕಾಣುತ್ತಿದ್ದೇವೆ. ಅಂಥದ್ದರಲ್ಲಿ ಬೆಂಗಳೂರನ್ನು ಬೃಹತ್ ಬೆಂಗಳೂರು ಮಾಡಿದವರಿಗೆ ಏನೇನು ಕೆಲಸ ಮಾಡಬೇಕು ಎಂಬ ಪ್ರಜ್ಞೆ, ಕಾಳಜಿ ಇರಬೇಕಿತ್ತಲ್ಲವೆ?
ನಮಗೆ ಖಂಡಿತಾ ದೋಣಿ ಬೇಡ
ಕಾಂಗ್ರೆಸ್ ಪಕ್ಷವೇ ರಾಜ್ಯದಲ್ಲೂ ಬಿಬಿಎಂಪಿಯಲ್ಲೂ ಅಧಿಕಾರದಲ್ಲಿದೆ. ಬೆಂಗಳೂರಿನ ಅಭಿವೃದ್ಧಿಗೆ ಕೋಟಿಗಟ್ಟಲೆ ಹಣ ಕೊಟ್ಟಿದ್ದೀವಿ ಅಂತಾರೆ ಮುಖ್ಯಮಂತ್ರಿಗಳು. ನಮ್ಮ ಬದುಕು ಮಳೆ ಬಂದರೆ ತಡೆಯಲಾಗದಷ್ಟು ಅಸಹಾಯಕತೆಯಲ್ಲಿ ಸಿಲುಕಿದೆ. ಸಮಾನ ದುಃಖಿಗಳೇ ಬೆಂಗಳೂರಿನ ತುಂಬಾ ಇದೀವಿ. ಸ್ವಾಮಿ ನಮಗೆ ಖಂಡಿತಾ ದೋಣಿ ಬೇಡ. ಮನೆ-ರಸ್ತೆ ನೆಟ್ಟಗಿಟ್ಟುಕೊಳ್ಳುವುದಕ್ಕೆ ಒಂದಿಷ್ಟು ಕೆಲಸ ಮಾಡಿಕೊಡಿ.