ಡಿಕೆಶಿ ಕೈಲಿ ಜೆಡಿಎಸ್ ಬಾವುಟ, ಕೆಂಡಾಮಂಡಲವಾದ ಸಿದ್ದರಾಮಯ್ಯ
Recommended Video
ಬೆಂಗಳೂರು, ಅಕ್ಟೋಬರ್ 24: ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ಡಿಕೆ ಶಿವಕುಮಾರ್ ಅವರ ಸ್ವಾಗತ ಮೆರವಣಿಗೆಯ ಸಂದರ್ಭದಲ್ಲಿ ಅವರು ಜೆಡಿಎಸ್ ಬಾವುಟವನ್ನು ಹಿಡಿದಿದ್ದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಕೆಂಡಾಮಂಡಲವಾಗಿದ್ದಾರೆ.
ಶನಿವಾರ ದೆಹಲಿಯಿಂದ ಬೆಂಗಳೂರಿಗೆ ಬಂದಿಳಿದ ಡಿಕೆ ಶಿವಕುಮಾರ್ ಅವರನ್ನು ಸ್ವಾಗತಿಸಲು ಲಕ್ಷಅಂತರ ಜನ ಸೇರಿದ್ದರು. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಡಿಕೆ ಶಿವಕುಮಾರ್ ಅವರನ್ನು ರಸ್ತೆಯುದ್ದಕ್ಕೂ ನೆರೆದಿದ್ದ ಅಭಿಮಾನಿಗಳು, ಕಾರ್ಯಕರ್ತರು ಭರಮಾಡಿಕೊಂಡರು.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಡಿ. ಕೆ. ಶಿವಕುಮಾರ್ರನ್ನು ಸೆಪ್ಟೆಂಬರ್ 3ರಂದು ಬಂಧಿಸಿತ್ತು. ಇದಕ್ಕೂ ಮೊದಲು ಆಗಸ್ಟ್ 30ರಿಂದ ಸತತ ನಾಲ್ಕು ದಿನ ವಿಚಾರಣೆಗೆ ಒಳಪಡಿಸಿತ್ತು. ಬಳಿಕ ಅವರನ್ನು ವಿಶೇಷ ನ್ಯಾಯಾಲಯವು ಇ.ಡಿ ವಶಕ್ಕೆ ಒಪ್ಪಿಸಿತ್ತು. ನಂತರ ಹಲವು ದಿನಗಳ ಕಾನೂನು ಹೋರಾಟದ ನಂತರ ಅಕ್ಟೋಬರ್ 23 ರಂದು ಡಿಕೆ ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
ಜೈಲಿಂದ ಹೆಬ್ಬಂಡೆಯಾಗಿ ಬಂದ ಡಿಕೆಶಿ, ಬಿಜೆಪಿ ನಾಯಕರಿಗೆ ತಪರಾಕಿ!
ಶನಿವಾರ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಭಾಗಿಯಾದ ಡಿಕೆಶಿ ಈ ಸಂದರ್ಭದಲ್ಲಿ ಜೆಡಿಎಸ್ ಬಾವುಟವನ್ನು ಹಿಡಿದಿದ್ದರು.
ಗೊತ್ತಿದ್ದು ಹಿಡಿದರಾ? ಗೊತ್ತಿಲ್ಲದೆ ಹಿಡಿದರಾ?
ರೋಡ್ ಶೋ ವೇಳೆ ಜಜೆಡಿಎಸ್ ನ ಹಲವು ಕಾರ್ಯಕರ್ತರೂ ಭಾಗಿಯಾಗಿದ್ದರು. ಅವರ ಕೈಲಿದ್ದ ಪಕ್ಷದ ಧ್ವಜವನ್ನು ಡಿಕೆ ಶಸಿವಕುಮಾರ್ ಅವರಿಗೆ ನೀಡಲಾಯ್ತು. ಆದರೆ ಧ್ವಜವನ್ನು ನೋಡದೆ ಅವರು ತೆಗೆದುಕೊಂಡರೆ? ಅಥವಾ ನೋಡಿಯೂ ಕಾರ್ಯಕರ್ತರ ಮೇಲಿನ ಅಭಿಮಾನದಿಂದ ತೆಗೆದುಕೊಂಡರೇ? ಅಥವಾ ಕತೆಯಲ್ಲಿ ಬೇರೆಯದೇ ಟ್ವಿಸ್ಟ್ ಇದೆಯೇ ಎಂಬುದು ಅರ್ಥವಾಗಬೇಕಿದೆ.
ವಿಡಿಯೋದಲ್ಲಿ ಸಿದ್ದರಾಮಯ್ಯ ಕೆಂಡಾಮಂಡಲ
ಈ ಘಟನೆಯ ಬಗ್ಗೆ ಕಾವೇರಿ ನಿವಾಸದಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಅಂಥ ರೋಡ್ ಶೋನಲ್ಲಿ ಜೆಡಿಎಸ್ ಬಾವುಟ ಹಿಡಿದು ಬರೋದು ಅಂದ್ರೆನು? ಎಂದು ಕೋಪದಿಂದಲೇ ಹೇಳಿರುವ ವಿಡಿಯೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರೊಂದಿಗಿದ್ದ ಪಿರಿಯಾಪಟ್ಟಣದ ಮಾಜಿ ಶಾಸಕ ವೆಂಕಟೇಶ್, ಹುಣಸೂರು ಮಾಜಿ ಶಾಸಕ ಮಂಜುನಾಥ್ ಸಹ ಈ ಘಟನೆಯನ್ನು ಟೀಕಿಸಿದ್ದಾರೆ.
ಡಿಕೆಶಿ ಸ್ವಾಗತ, 'ಇವೆಲ್ಲ ಬೇಕಿತ್ತಾ?' ಎಂದ ಸಂತೋಷ್ ಹೆಗ್ಡೆ
ವಿಮಾನ ನಿಲ್ದಾಣದಲ್ಲೇ ಎಚ್ ಡಿಕೆ ಭೇಟಿ
ಶನಿವಾರ ಡಿಕೆ ಶಿವಕುಮಾರ್ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಂತೆಯೇ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ ಅವರು ಡಿಕೆಶಿ ಅವರನ್ನು ವಿಮಾನ ನಿಲ್ದಾಣದಲ್ಲೇ ಭರಮಾಡಿಕೊಂಡಿದ್ದರು. ಈ ಬಗ್ಗೆ ನಂತರ ಡೀಕೆಶಿ ಅವರು ನಡೆಸಿದ ಸುದ್ಧಿಗೋಷ್ಠಿಯಲ್ಲೂ ಸ್ಮರಿಸಿದ್ದ ಡಿಕೆಶಿ, ಧನ್ಯವಾದ ಅರ್ಪಿಸಿದ್ದರು.
ಮೂರ್ನಾಲ್ಕು ಬಾರಿ ದೆಹಲಿಗೆ ತೆರಳಿದ್ದ ಗೌಡ್ರು
ತಿಹಾರ್ ಜೈಲಿನಲ್ಲಿದ್ದ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಲು ಮೂರ್ನಾಲ್ಕು ಬಾರಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ್ರು ದೆಹಲಿಗೆ ತೆರಳಿದ್ದರು. ಆದರೆ ಅಲ್ಲಿ ತಿಂಗಳಿಗೆ ಎರಡೂ ದಿನ ಮಾತ್ರವೇ ಭೇಟಿಗೆ ಅವಕಾಶ ಇದ್ದಿದ್ದರಿಂದ ಡಿಕೆಶಿ ಅವರನ್ನು ಭೇಟಿಯಾಗಲು ಗೌಡರಿಗೆ ಸಾಧ್ಯವಾಗಿರಲಿಲ್ಲ.