ಕಾಲೇಜು, ಆಸ್ಪತ್ರೆ, ಬಸ್ ನಿಲ್ದಾಣಗಳಲ್ಲೂ ಇಂದಿರಾ ಕ್ಯಾಂಟೀನ್: ಸಿಎಂ
ಬೆಂಗಳೂರು, ಜನವರಿ 26 : ಹಸಿದವರಿಗೆ ರಿಯಾಯಿತಿ ದರದಲ್ಲಿ ಅನ್ನ ನೀಡುವ ಇಂದಿರಾ ಕ್ಯಾಂಟೀನ್ ಯೋಜನೆ ವಿರೋಧಿಸುವವರಿಗೆ ಸಾರ್ವಜನಿಕರೇ ತಕ್ಕ ಪಾಠ ಕಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದಲ್ಲಿ ಶುಕ್ರವಾರ ನಡೆದ ಸಂಚಾರಿ ಇಂದಿರಾ ಕ್ಯಾಂಟೀನ್ ಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ 198 ವಾರ್ಡ್ ಗಳಲ್ಲಿಯೂ ಇಂದಿರಾ ಕ್ಯಾಂಟೀನ್ ಇರಬೇಕೆನ್ನುವುದು ನಮ್ಮ ಉದ್ದೇಶವಾಗಿದೆ.
ಇವುಗಳನ್ನು ಒಟ್ಟಿಗೆ ಪ್ರಾರಂಭಿಸಲು ಕೆಲವರು ಅಡ್ಡಿಪಡಿಸಿದ್ದರು. ಬಡವರ ಕೆಲಸ ಮಾಡುವಾಗ ಕೆಲವರು ಅಸೂಯೆ ಪಡುತ್ತಾರೆ ಎಂದರು.

ರಾಜಕೀಯವಾಗಿ ವಿರೋಧ ಮಾಡುವವರಿಗೆ ಹಸಿವಿನ ಕಷ್ಟ ಗೊತ್ತಿಲ್ಲ. ಯಾರು ಹಸಿವನ್ನು ಅನುಭವಿಸಿದ್ದಾರೋ ಅವರಿಗೆ ಮಾತ್ರ ಹಸಿವಿನ ಕಷ್ಟ ತಿಳಿಯುತ್ತದೆ. ನಮ್ಮ ಉದ್ದೇಶ ಹಸಿವುಮುಕ್ತ ರಾಜ್ಯವನ್ನಾಗಿಸಬೇಕು ಎನ್ನುವುದು. ಕೆಲವರು ಕಾಂಗ್ರೆಸ್ ಮುಕ್ತ ಮಾಡಬೇಕು ಎನ್ನುತ್ತಾರೆ. ನಾವು ಯಾವುದೇ ಪಕ್ಷವನ್ನು ದೂಷಿಸದೆ ರಾಜ್ಯವನ್ನು ಹಸಿವು ಮುಕ್ತ ಮಾಡಲು ಕಂಕಣಬದ್ಧವಾಗಿದ್ದೇವೆ ಎಂದು ತಿಳಿಸಿದರು.
ಇಂದಿರಾ ಕ್ಯಾಂಟೀನ್ ನಲ್ಲಿ ಮಾರ್ಷಲ್ ಗಳ ನೇಮಕ ಮಾಡುವ ಮೂಲಕ ಅವರು ಗುಣಮಟ್ಟ, ಪ್ರಮಾಣ ಹಾಗೂ ನೈರ್ಮಲ್ಯವನ್ನು ಪರೀಕ್ಷಿಸುತ್ತಾರೆ. ಇಂದಿರಾ ಕ್ಯಾಂಟೀನ್ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದ್ದು ಬಿಬಿಸಿಯಂತಹ ಮಾಧ್ಯಮಗಳಲ್ಲಿ ಪ್ರಚಾರ ಪಡೆದಿದೆ ಎಂದರು.

ಆಸ್ಪತ್ರೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಎಲ್ಲೆಲ್ಲಿ ಜನಸಂದಣಿ ಇರುತ್ತದೋ ಅಲ್ಲೆಲ್ಲ ಇಂದಿರಾ ಕ್ಯಾಂಟೀನ್ ಮಾಡಿದರೆ ಅದಕ್ಕೆ ಅನುದಾನ ನೀಡಲು ಸಿದ್ಧರಿದ್ದೇವೆ. ಕಾಲೇಜುಗಳ ಬಳಿಯೂ ಮುಖ್ಯವಾಗಿ ಬೆಂಗಳೂರಿನ ಮಹಾರಾಣಿ ಕಾಲೇಜು, ಸರ್ಕಾರಿ ಕಾಲೇಜು ಬಳಿ ಇಂದಿರಾ ಕ್ಯಾಂಟೀನ್ ತೆರೆಯಲಾಗುವುದು ಎಂದರು.












Click it and Unblock the Notifications