ಎಸಿ ಸಿಟಿ ಬೆಂಗಳೂರು ಆಗಲಿದೆ ಬೆಂಗಾಡು!
ಬೆಂಗಳೂರು, ಏಪ್ರಿಲ್ 22: ಬೆಂಗಳೂರು ಪಿಂಚಣಿದಾರರ ಸ್ವರ್ಗದೂರು ಎಂಬ ಮಾತು ನಗರ ಅಸ್ತಿತ್ವಕ್ಕೆ ಬಂದ ಕಾಲದಿಂದಲೂ ಚಾಲ್ತಿಯಲ್ಲಿದೆ. ಆದರೆ ಕಳೆದ ಎರಡ್ಮೂರು ದಶಕಗಳಿಂದ ಇದಕ್ಕೆ ಚ್ಯುತಿ ಬಂದಿದೆ. ಆಗಾಗ್ಗೆ ಈ ಬಗ್ಗೆ ತಜ್ಞರು ಎಚ್ಚರಿಸುತ್ತಲೇ ಬಂದಿದ್ದಾರೆ.
ಆದರೆ ಈ ಬಾರಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಂಟಿ ಅಧ್ಯಯನ ವರದಿಯಲ್ಲಿ 'ನಮ್ಮೀ ಎಸಿ ಸಿಟಿ ಬೆಂಗಳೂರು ಮುಂದಿನ ವರ್ಷಗಳಲ್ಲಿ ಬೆಂಗಾಡು ಆಗುವುದು ಖಚಿತ' ಎಂದು ಅನುಮಾನಕ್ಕೆ ಎಡೆಯಿಲ್ಲದಂತೆ ಸ್ಪಷ್ಟಪಡಿಸಲಾಗಿದೆ!
ಇದಕ್ಕೆ ಅಧ್ಯಯನ ವರದಿಯಲ್ಲಿ ಕಂಡುಬಂದಿರುವ ಮುಖ್ಯ ಕಾರಣವೆಂದರೆ ಒಂದೇ ಸಮನೆ ಮರಗಳ ವ್ಯಾಪಕ ಮಾರಣಹೋಮವಾಗುತ್ತಿರುವುದು. 'ವರ್ಷ ವರ್ಷವೂ ಮರಗಳ ನಾಶ ಹೆಚ್ಚುತ್ತಿದ್ದು, ಉದ್ಯಾನ ನಗರ ಎಂದು ಹೆಸರುವಾಸಿಯಾಗಿರುವ ಬೆಂಗಳೂರು ಇನ್ನು ಮುಂದೆ ಬರಡು ನಗರವಾಗಲಿದೆ' ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ. ಜತೆಗೆ, ಅಧ್ಯಯನ ವರದಿ ನೋಡಿದಾಗ ವಿಪರೀತವೆಂಬಂತೆ ಜನಸಂಖ್ಯೆ ಹೆಚ್ಚಳವಾಗುತ್ತಿರುವುದು ಸುಂದರ ನಗರ ಬೆಂಗಾಡು ಆಗಿ ಪರಿವರ್ತನೆಯಾಗಲು ಕಾರಣವಾಗಿತ್ತಿದೆ.
ಮಹಾನಗರ ಪಾಲಿಕೆಯ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಈ ಅಧ್ಯಯನವನ್ನು ಕೈಗೊಳ್ಳಲಾಗಿತ್ತು. ನಗರದಲ್ಲಿ ಒಟ್ಟು ಸುಮಾರು 15 ಲಕ್ಷ ಮರಗಳು ಇವೆ. ಜನಸಂಖ್ಯೆ ಹಾಗೂ ಹಸಿರು ಪ್ರದೇಶದ ಅನುಪಾತದ ಪ್ರಕಾರ ಪ್ರತಿ 100 ಜನರಿಗೆ 17 ಮರಗಳು ಇವೆ. 2001ರಲ್ಲಿ ನಗರದ ಜನಸಂಖ್ಯೆ 65.37 ಲಕ್ಷ ಆಗಿತ್ತು. 2011ರಲ್ಲಿ ಜನಸಂಖ್ಯೆ 95.88 ಲಕ್ಷಕ್ಕೆ ಏರಿತು. ಒಂದು ದಶಕದಲ್ಲಿ ಜನಸಂಖ್ಯೆಯಲ್ಲಿ ಶೇ 46.68 ರಷ್ಟು ಹೆಚ್ಚಳ ಆಗಿದೆ ಎಂದು ವರದಿ ವಿಶ್ಲೇಷಿಸಿದೆ.
2001ರಲ್ಲಿ ಪ್ರತಿ ಚದರ ಕಿಮೀಗೆ 10,732 ಜನರು ಇದ್ದರು. ಆದರೆ, 2011ರ ಜನಗಣತಿ ಪ್ರಕಾರ ಪ್ರತಿ ಚದರ ಕಿಮೀ ವ್ಯಾಪ್ತಿಯಲ್ಲಿ 13,392 ಜನರು ವಾಸಿಸುತ್ತಿದ್ದಾರೆ. ಒಂದೇ ದಶಕದಲ್ಲಿ ಸಸ್ಯಗಳ ಪ್ರಮಾಣ ಶೇ 66ರಷ್ಟು ಕಡಿಮೆ ಆಗಿದೆ ಹಾಗೂ ಶೇ 74ರಷ್ಟು ನೀರಿನ ಸೆಲೆಗಳು ಬತ್ತಿ ಹೋಗಿವೆ ಎಂದೂ ವರದಿಯಿಂದ ತಿಳಿದುಬಂದಿದೆ.
ಚಿಕ್ಕಪೇಟೆ, ಶಿವಾಜಿನಗರ, ಕೆಂಪಾಪುರ ಅಗ್ರಹಾರ, ಪಾದರಾಯನಪುರ ವಾರ್ಡುಗಳು ಕೆಂಪು ಪಟ್ಟಿಯಲ್ಲಿದೆ. ಗಮನಾರ್ಹವೆಂದರೆ ನಗರದ ಅತಿ ದೊಡ್ಡ ವಾರ್ಡ್ ವರ್ತೂರು. ಇದರ ವಿಸ್ತೀರ್ಣ 2723.1 ಹೆಕ್ಟೇರ್. ಇಲ್ಲಿನ ಜನಸಂಖ್ಯೆ 30,340. ಆದರೆ, ಇಲ್ಲಿ 72,069 ಮರಗಳಿವೆ. ಅಂದರೆ ಇಲ್ಲಿನ ಜನಸಂಖ್ಯೆಯ ದುಪ್ಪಟ್ಟು ಮರಗಳು (ಪ್ರತಿ ವ್ಯಕ್ತಿಗೆ 2.368 ಮರ) ಇವೆ! ಬೆಳ್ಳಂದೂರು ವಾರ್ಡಿನಲ್ಲಿಯೂ ಜನರಿಗಿಂತ ದುಪ್ಪಟ್ಟು ಮರಗಳು ಇವೆ.