2015ರ ಫೆಬ್ರವರಿಗೆ ಪೀಣ್ಯ-ನಾಗಸಂದ್ರ ಮೆಟ್ರೋ ಸಂಚಾರ
ಬೆಂಗಳೂರು, ಸೆ. 16 : ಪೀಣ್ಯ ಕೈಗಾರಿಕಾ ನಿಲ್ದಾಣದಿಂದ ನಾಗಸಂದ್ರವರೆಗಿನ ನಮ್ಮ ಮೆಟ್ರೋ ಮಾರ್ಗದ ಕಾಮಗಾರಿ ಡಿಸೆಂಬರ್ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, 2015ರ ಫೆಬ್ರವರಿಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸೋಮವಾರ ಸಂಜೆ ಸಿಎಂ ಸಿದ್ದರಾಮಯ್ಯ ನಿರ್ಮಾಣ ಹಂತದಲ್ಲಿರುವ ನಮ್ಮ ಮೆಟ್ರೋ ನಿಲ್ದಾಣಗಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ಮೆಟ್ರೊ ಮೊದಲನೇ ಹಂತದ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿಯನ್ನು 2015ರ ಸೆಪ್ಟೆಂಬರ್ಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಚಿನ್ನಸ್ವಾಮಿ ಸ್ಟೇಡಿಯಂನಿಂದ ಮಾಗಡಿ ರಸ್ತೆಯ ಪ್ರವೇಶದ್ವಾರದವರೆಗಿನ ಸುರಂಗಮಾರ್ಗ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಮಾರ್ಗ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸುರಂಗ ನಿರ್ಮಾಣ ಕಾಮಗಾರಿ ಏಪ್ರಿಲ್ ವೇಳೆಗೆ ಮುಗಿಯಬೇಕಿತ್ತು. ನಾಲ್ಕು ಟಿಬಿಎಂ ಯಂತ್ರಗಳು ಸುರಂಗ ಕೊರೆಯುತ್ತಿವೆ. ಗಟ್ಟಿ ಬಂಡೆಗಳು ಸಿಕ್ಕಿರುವುದರಿಂದ ಕಾರ್ಯಚರಣೆ ವಿಳಂಬವಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು. [ಸಂಪಿಗೆ ರಸ್ತೆ-ಪೀಣ್ಯ ಮೆಟ್ರೋಗೆ 1.33 ಕೋಟಿ ಆದಾಯ]
ಸರ್ಕಾರ 42 ಕಿ.ಮೀ.ಗಳ ಮೊದಲ ಹಂತದ ಮೆಟೋ ಯೋಜನೆ ಕಾಮಗಾರಿಗೆ 13,500 ಕೋಟಿ ರೂ. ವೆಚ್ಚ ಮಾಡಿದೆ. 2015ರ ಸೆಪ್ಟೆಂಬರ್ ಅಂತ್ಯಕ್ಕೆ ಈ ಕಾಮಗಾರಿ ಪೂರ್ಣಗೊಳ್ಳಲಿದೆ. ಎರಡನೇ ಹಂತದ 72 ಕಿ.ಮೀ ಮಾರ್ಗ ನಿರ್ಮಾಣಕ್ಕೆ 26,500 ಕೋಟಿ ರೂ. ಖರ್ಚು ಮಾಡುತ್ತಿದ್ದು, ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು. [ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ ಹೇಗಿದೆ ಗೊತ್ತೆ?]
ಫೆಬ್ರವರಿಯಲ್ಲಿ ಸಂಚಾರ ಮುಕ್ತ : ಪೀಣ್ಯ ಕೈಗಾರಿಕಾ ನಿಲ್ದಾಣದಿಂದ ನಾಗಸಂದ್ರವರೆಗಿನ 3.5 ಕಿ.ಮೀ ಉದ್ದದ (ರೀಚ್ 3ಬಿ) ಮಾರ್ಗವನ್ನು ಫೆ. 2015ಕ್ಕೆ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಸಿಎಂ ಹೇಳಿದರು. ಈ ಮಾರ್ಗದಲ್ಲಿ ಈಗಾಗಲೇ ಸಂಪಿಗೆ ರಸ್ತೆಯಿಂದ ಪೀಣ್ಯದ ತನಕ ಮೆಟ್ರೋ ಸಂಚರಿಸುತ್ತಿದೆ ಎಂದು ಅವರು ತಿಳಿಸಿದರು. [ಪಿಟಿಐ]












Click it and Unblock the Notifications