ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ್ರೆ ಪೇಟಿಎಂ ಮೂಲಕ ದಂಡ ಪಾವತಿಸಿ
ಬೆಂಗಳೂರು, ಜು. 05: ನಿಮ್ಮ ಮೊಬೈಲ್ನಲ್ಲಿ ಪೇಟಿಎಂ ಆಪ್ ಇದೆಯೇ? ನೀವು ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದೀರಾ? ಹಾಗಿದ್ದರೆ ನಿಮ್ಮ ಮೊಬೈಲ್ ಫೋನ್ಗೆ 'ದಂಡ ಪಾವತಿ ಬಾಕಿ' ರಶೀದಿ ಬರಲಿದೆ. ಇಷ್ಟೇ ಅಲ್ಲ. ದಂಡವನ್ನು ಇನ್ನು ಮುಂದೆ ಪೇಟಿಎಂ ಮೂಲಕವೂ ಪಾವತಿಸಲು ಬೆಂಗಳೂರು ಸಂಚಾರ ಪೊಲೀಸರು ಅವಕಾಶ ಕಲ್ಪಿಸಿದ್ದಾರೆ. ಪೇಟಿಎಂನಲ್ಲಿ ದಂಡ ಪಾವತಿ ಮಾಡುವಂತೆ ಎಚ್ಚರಿಕೆ ಸಂದೇಶಗಳು ಕೂಡ ಬರಲಿವೆ. ಇವತ್ತಿನಿಂದ ಪೇಟಿಎಂ ಆಪ್ ಮೂಲಕ ದಂಡ ಪಾವತಿಗೆ ಅವಕಾಶ ಕಲ್ಪಿಸಿದ್ದು, ಶೀಘ್ರದಲ್ಲಿಯೇ ಡಿಜಿಟಲ್ ಕಣ್ಗಾವಲು ವ್ಯವಸ್ಥೆ ಬೆಂಗಳೂರಿನಲ್ಲಿ ಜಾರಿಗೆ ಬರಲಿದೆ. ಭವಿಷ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ತಕ್ಷಣವೇ ನಿಮ್ಮ ಮೊಬೈಲ್ ಫೋನ್ಗೆ ನಿಯಮ ಉಲ್ಲಂಘನೆ ಸಂದೇಶ ಬರಲಿದೆ. ತಂತ್ರಜ್ಞಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಬೆಂಗಳೂರು ಸಂಚಾರ ಪೊಲೀಸರು ಮುಂದಾಗಿದ್ದು, ಸಂಚಾರ ನಿಯಮ ಉಲ್ಲಂಘನೆ ಮತ್ತು ದಂಡ ಪಾವತಿ ಕುರಿತ ವ್ಯವಸ್ಥೆ ಹೇಗಿರಲಿದೆ ನೋಡಿ.
ಪೇಟಿಎಂ ಮೂಲಕ ಸಂಚಾರ ದಂಡ ಪಾವತಿಗೆ ಚಾಲನೆ ದಂಡ ಸೇವೆ: ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ವಾಹನ ಸವಾರರು ದಂಡವನ್ನು ಪೇಟಿಎಂ ಮೂಲಕವೇ ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಜು. 05 ರಿಂದಲೇ ಪೇಟಿಎಂ ಮೂಲಕ ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಪೇಟಿಎಂ ಹಾಗೂ ಬೆಂಗಳೂರು ಸಂಚಾರ ಪೊಲೀಸರ ನಡುವೆ ಈ ಕುರಿತು ಒಡಂಬಡಿಕೆಯಾಗಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರು ಸೋಮವಾರ ಉದ್ಘಾಟನೆ ಮಾಡಿದರು. ಜಂಟಿ ಪೊಲೀಸ್ ಆಯುಕ್ತ ಬಿ.ಆರ್. ರವಿಕಾಂತೇಗೌಡ, ಸಂಚಾರ ವಿಭಾಗದ ಎಸಿಪಿ, ಡಿಸಿಪಿಗಳು ಕೂಡ ಇದ್ದರು. ಈ ವೇಳೇ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ, ಇಂದು ಬಹುತೇಕರು ಡಿಜಿಟಲ್ ಪೇಮೆಂಟ್ ಆಯ್ಕೆ ಮಾಡಿಕೊಂಡಿದ್ದಾರೆ. ಬೆಂಗಳೂರು ಸಂಚಾರ ಉಲ್ಲಂಘನೆ ದಂಡ ಪಾವತಿಯನ್ನು ಡಿಜಿಟಲ್ ಪೇಮೆಂಟ್ ಮೂಲಕ ಮಾಡಲು ಅವಕಾಶ ಕಲ್ಪಿಸಿರಲಿಲ್ಲ. ಇದೀಗ ಜನಪ್ರಿಯ ಪೆಟಿಎಂ ಮೂಲಕ ಒಡಂಬಡಿಕೆ ಮಾಡಿಕೊಂಡಿದ್ದು, ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರು ದಂಡವನ್ನು ಪೇಟಿಎಂ ಮೂಲಕವೇ ಪಾವತಿ ಮಾಡಬಹುದು ಎಂದು ಅವರು ಹೇಳಿದರು.
ಪೇಟಿಎಂ ನಲ್ಲಿ ದಂಡ ಪಾವತಿ ಚಲನ್
ಇನ್ನು ಪೇಟಿಎಂ ನಲ್ಲಿ ಮೈ ರೀಚಾರ್ಜ್ ವಿಭಾಗದ ಸೇವೆಗೆ ಹೋದರೆ ಎಲ್ಐಸಿ, ಶಾಲಾ ಶುಲ್ಕ ಪಾವತಿ ಮತ್ತಿತರ ಅವಕಾಶಗಳಿವೆ. ಅದರಲ್ಲಿ "ಸಿಟಿ ಸರ್ವೀಸ್" ವಿಭಾಗದಲ್ಲಿ ಚಲನ್ ಆಯ್ಕೆ ಮಾಡಿಕೊಂಡರೆ, ಪೇಟಿಎಂ ಮೂಲ ದಂಡ ಪಾವತಿಗೆ ಅನುಮತಿ ನೀಡಿರುವ ವಿವಿಧ ರಾಜ್ಯಗಳ ಪೊಲೀಸರ ವಿವರ ಸಿಗುತ್ತದೆ. ಅಲ್ಲಿ ಬೆಂಗಳೂರು ಸಂಚಾರ ಪೊಲೀಸರು ವಿಭಾಗ ಆಯ್ಕೆ ಮಾಡಿಕೊಂಡರೆ, ವಾಹನ ಸಂಖ್ಯೆ ಕೇಳುತ್ತದೆ. ನಿಮ್ಮ ವಾಹನ ಸಂಖ್ಯೆ ನಮೂದಿಸಿದ ಕೂಡಲೇ ವಾಹನದ ದಂಡದ ವಿವರ ಬರುತ್ತದೆ. ಅದರಲ್ಲಿ ಎಷ್ಟು ಸಂಚಾರ ನಿಯಮ ಉಲ್ಲಂಘನೆ ವಿವರ ವಿರುತ್ತದೋ, ಆಯ್ಕೆಮಾಡಿಕೊಂಡು ದಂಡ ಪಾವತಿಗೆ ಅವಕಾಶ ನೀಡಲಾಗಿದೆ. ಈಗಾಗಲೇ ಆಂಧ್ರ ಪೊಲೀಸರು, ಚೆನ್ನೈ ಸಂಚಾರ ಪೊಲೀಸರು, ಬೆಂಗಳೂರು ಸಂಚಾರ ಪೊಲೀಸರು, ಮಹಾರಾಷ್ಟ್ರ ಸಂಚಾರ ಪೊಲೀಸರು ಮತ್ತು ತೆಲಂಗಾಣ ಸಂಚಾರ ಪೊಲೀಸರು ಪೇಟಿಎಂ ದಂಡ ಪಾವತಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ.
ಭವಿಷ್ಯದಲ್ಲಿ ಪಾಪಪ್ ಸಂದೇಶ
''ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ಮನೆ ವಿಳಾಸಕ್ಕೆ ಉಲ್ಲಂಘನೆ ವಿವರ ಹೋಗುತ್ತಿತ್ತು. ಇನ್ನು ಮುಂದೆ ಪೇಟಿಎಂ ಮೂಲಕವೇ ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿ ಬಗ್ಗೆ ಎಚ್ಚರಿಸುವ ಸಂದೇಶ ಸವಾರರ ಮೊಬೈಲ್ ಗಳಿಗೆ ಬರಲಿದೆ. ಕೆಲವೇ ದಿನಗಳಲ್ಲಿ ಪಾಪಪ್ ಸಂದೇಶ ಬರಲಿದೆ. ಆನಂತರ ದಂಡ ಪಾವತಿಯ ನೋಟಿಸ್ ಗಳನ್ನು ವಾಹನ ಸವಾರರ ಮೊಬೈಲ್ಗೆ ಪೇಟಿಎಂ ಮೂಲಕವೇ ರವಾನಿಸಲಾಗುವುದು. ಈ ಕುರಿತ ಪ್ರಯತ್ನ ನಡೆಯುತ್ತಿದೆ. ವಾಹನ ನೋಂದಣಿ ವೇಳೆ ಮಾಲೀಕರು ಆರ್ಟಿಓ ಅಧಿಕಾರಿಗಳಿಗೆ ನೀಡಿರುವ ಮೊಬೈಲ್ ನಂಬರ್ ಪಡೆದು ಜೋಡಣೆ ಮಾಡುವ ಜತೆಗೆ ತಂತ್ರಜ್ಞಾನ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಎಲ್ಲಾ ವಾಹನ ಸವಾರರ ಮೊಬೈಲ್ ನಂಬರ್ ಪಡೆದುಕೊಳ್ಳುತ್ತೇವೆ. ಅವನ್ನು ಈ ತಂತ್ರಜ್ಞಾನದೊಂದಿಗೆ ಜೋಡಿಸುತ್ತಿದ್ದೇವೆ. ಕೆಲವೇ ದಿನದಲ್ಲಿ ಈ ಕಾರ್ಯ ಮುಗಿಯಲಿದ್ದು, ಆನಂತರ ವಾಹನ ಸವಾರರ ಮೊಬೈಲ್ ನಂಬರ್ಗೆ ಸಂಚಾರ ನಿಯಮ ಉಲ್ಲಂಘನೆ ನೋಟಿಸ್ ರವಾನೆಯಾಗಲಿದೆ,'' ಎಂದು ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್. ರವಿಕಾಂತೇಗೌಡ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.
ಸುಗಮ ಸಂಚಾರಕ್ಕೆ ತಂತ್ರಜ್ಞಾನ ಮೊರೆ
''ಬೆಂಗಳೂರಿನಲ್ಲಿ ಈಗಾಗಲೇ 250 ಕ್ಕೂ ಹೆಚ್ಚಿನ ಸಿಗ್ನಲ್ನಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ನಂಬರ್ ಕ್ಯಾಪ್ಚರ್ ಮಾಡುವ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸದ್ದಿಲ್ಲದೇ ಕಾರ್ಯ ನಿರ್ವಹಿಸುತ್ತಿರುವ ಕ್ಯಾಮರಾಗಳಲ್ಲಿ ದಾಖಲಾಗುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ವಿವರಗಳನ್ನು ಮುಂದಿನ ದಿನಗಳಲ್ಲಿ ತಂತ್ರಜ್ಞಾನದೊಂದಿಗೆ ಜೋಡಿಸಲಾಗುವುದು. ಸಂಚಾರ ನಿಯಮ ಉಲ್ಲಂಘನೆ ಮಾಡಿದ ಮರು ಕ್ಷಣವೇ ವಾಹನ ಸವಾರರ ಮೊಬೈಲ್ ಗೆ ಸಂದೇಶ ಹೋಗಲಿದೆ. ದಂಡದ ವಿವರವೂ ಲಭ್ಯವಾಗಲಿದೆ. ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಸಾಕ್ಷಿ ಕೇಳಿದರೂ ಸಂಚಾರ ಪೊಲೀಸರು ಒದಗಿಸಲಿದ್ದಾರೆ. ಲೈವ್ ಸಂದೇಶ ವನ್ನು ವಾಹನ ಸವಾರರಿಗೆ ರವಾನಿಸುವ ಕಾರ್ಯವೂ ನಡೆಯುತ್ತಿದೆ. ಇದರಿಂದ ಬೆಂಗಳೂರಿನಲ್ಲಿ ಸಾಕಷ್ಟು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ನಿಯಂತ್ರಣಕ್ಕೆ ಬರಲಿವೆ ಎಂಬ ನಂಬಿಕೆಯಿದೆ,'' ಎಂದು ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.
Recommended Video
ತಂತ್ರಜ್ಞಾನದಿಂದ ಭವಿಷ್ಯದಲ್ಲಿ ಅನುಕೂಲ
''ಬೆಂಗಳೂರಿನಲ್ಲಿ ಸಂಚಾರ ನಿಯಂತ್ರಣ, ಸಂಚಾರ ನಿಯಮ ಉಲ್ಲಂಘನೆ ನಿರ್ವಹಣೆ ವಿಚಾರದಲ್ಲಿ ತಂತ್ರಜ್ಞಾನ ಬಹುಮುಖ್ಯ ಪಾತ್ರ ವಹಿಸಲಿದೆ. ಮೊದಲ ಹಂತದಲ್ಲಿ ಪೇಟಿಎಂ ಮೂಲಕ ದಂಡ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ವಾಹನ ಸವಾರರು ದಂಡವನ್ನು ಪೇಟಿಎಂ ಮೂಲಕವೇ ಪಾವತಿ ಮಾಡಬಹುದು. ಮುಂದಿನ ದಿನಗಳಲ್ಲಿ ದಂಡದ ವಿವರಗಳು ಸವಾರರ ಮೊಬೈಲ್ಗೆ ಸಂದೇಶ ರೂಪದಲ್ಲಿ ರವಾನೆಯಾಗಲಿದೆ. ಇದರಿಂದ ನಿಯಮ ಉಲ್ಲಂಘನೆ ಮಾಡುವ ಸವಾರರು ಮತ್ತು ಪೊಲೀಸರ ನಡುವೆ ದಂಡ ವಸೂಲಾತಿಯಲ್ಲಿ ನಡೆಯುವ ವಾಗ್ವಾದಗಳು ಕಡಿಮೆಯಾಗಲಿವೆ. ಡಿಜಿಟಲ್ ಪೇಮೆಂಟ್ಗೆ ಅವಕಾಶ ನೀಡುವುದರಿಂದ ಸಾರ್ವಜನಿಕರು ಸುಲಭವಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡಿದಕ್ಕೆ ದಂಡ ಪಾವತಿ ಮಾಡಬಹುದು. ರಶೀದಿ ಕೂಡ ಪಡೆಯಬಹುದು ಎಂದು ಪಶ್ಚಿಮ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಆರ್. ಜೈನ್ ಪೆಟಿಎಂ ಟೆಕ್ನಾಲಜಿ ಹಾಗೂ ಸಂಚಾರ ಪೊಲೀಸರ ಮುಂದಿನ ಹೆಜ್ಜೆಗಳ ಬಗ್ಗೆ ವಿವರ ನೀಡಿದರು.