ಮೇ 4ರಿಂದ ಬೆಂಗಳೂರು ಜನ ಹೊರಗೆ ಬರಬೇಕಂದ್ರೆ ಈ ನಿಯಮಗಳನ್ನು ಪಾಲಿಸಲೇಬೇಕು
ಬೆಂಗಳೂರು, ಮೇ 3: ಸೋಮವಾರದಿಂದ ರಾಜ್ಯದಲ್ಲಿ ಲಾಕ್ಡೌನ್ನಲ್ಲಿ ಸಡಿಲಿಕೆಯಾಗುತ್ತಿದೆ. ಕಂಟೈನ್ಮೆಂಟ್ ಪ್ರದೇಶಗಳನ್ನು ಬಿಟ್ಟು ಉಳಿದ ಎಲ್ಲ ಕಡೆ ಬಹುತೇಕ ರಿಲೀಫ್ ಸಿಕ್ಕಿದೆ. ಆದರೆ, ಬೆಂಗಳೂರು ಜಿಲ್ಲೆ ರೆಡ್ಜೋನ್ನಲ್ಲಿರುವುದರಿಂದ ನಗರದಲ್ಲಿ ಪರಿಸ್ಥಿತಿ ಹೇಗಿರಬಹುದು ಎಂಬ ಆತಂಕ ಉಳಿದುಕೊಂಡಿದೆ.
190 ವಾರ್ಡ್ಗಳ ಪೈಕಿ 21 ಕಂಟೈನ್ಮೆಂಟ್ ಜೋನ್ ಇದೆ. ಉಳಿದ ಎಲ್ಲ ವಾರ್ಡ್ಗಳಲ್ಲಿ ವ್ಯವಹಾರಿಕ ಚಟುವಟಿಕೆ ಪೊಲೀಸ್ ಇಲಾಖೆ ಅನುಮತಿ ನೀಡುತ್ತಿದೆ. ನಾಳೆಯಿಂದ ಬೆಂಗಳೂರಿನಲ್ಲಿ ಏನೆಲ್ಲ ಸಿಗುತ್ತೆ? ಯಾರೆಲ್ಲ ಸಂಚಾರ ಮಾಡಬಹುದು, ಹೊರಗೆ ಹೋಗಬೇಕು ಅಂದ್ರೆ ಅವರು ಅನುಸರಿಸಬೇಕಾದ ಕ್ರಮಗಳೇನು? ಪಾಸ್ ಅಗತ್ಯ ಇದ್ಯಾ? ಪೊಲೀಸರು ವಾಹನಗಳನ್ನು ಅಡ್ಡ ಹಾಕುತ್ತಾರಾ ಎಂಬ ಗೊಂದಲಗಳಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯ ಸರ್ಕಾರದ ದೃಷ್ಟಿಯಲ್ಲೂ ಕೆಂಪು ವಲಯ ಮೂರು ಮಾತ್ರ
ಸೋಮವಾರದಿಂದ ಸಿಲಿಕಾನ್ ಸಿಟಿ ಜನರು ಮನೆಯಿಂದ ಹೊರಗೆ ಬರಬೇಕು ಅಂದ್ರೆ ಈ ನಿಯಮಗಳನ್ನು ಪಾಲಿಸಲೇಬೇಕು. ಮುಂದೆ ಓದಿ...
ಎಲ್ಲ ಅಂಗಡಿಗಳು ತೆರೆಯಬಹುದು
ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೂ ಬೆಂಗಳೂರಿನ ಎಲ್ಲ ಅಂಗಡಿ/ಮಳಿಗೆಗಳನ್ನು ತೆರೆಯಬಹುದು. ಮಾಲ್, ರೆಸ್ಟೋರೆಂಟ್, ಸಲೂನ್ ತೆರೆಯುವಂತಿಲ್ಲ. ಹೋಟೆಲ್ನಲ್ಲಿ ಕುಳಿತು ತಿಂಡಿ, ಊಟ ಮಾಡುವಂತಿಲ್ಲ. ಉಳಿದಂತೆ ಎಲ್ಲರೂ ಕೆಲಸ ಮಾಡಬಹುದು. ಸಂಜೆ 7 ರ ನಂತರ ಬೆಳಿಗ್ಗೆ 7ರ ತನಕ ನಗರದಲ್ಲಿ ಕರ್ಫ್ಯೂ ವಾತಾವರಣ ಮುಂದುವರಿಯುತ್ತೆ. ಆ ಸಮಯದಲ್ಲಿ ಯಾರೂ ಅನಗತ್ಯವಾಗಿ ಓಡಾಡಬಾರದು. ಕೇವಲ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ.
ಯಾರಿಗೂ ಪಾಸ್ ಚೆಕ್ ಮಾಡಲ್ಲ
ಬೆಳಿಗ್ಗೆಯಿಂದ ಸಂಜೆ ಆರು ಗಂಟೆಯವರೆಗೂ ಯಾರಿಗೂ ಪಾಸ್ ಚೆಕ್ ಮಾಡಲ್ಲ. ಹಾಗಂತ ಅನಗತ್ಯವಾಗಿ ಸಂಚಾರ ಮಾಡಬಾರದು. ಅನುಮಾನ ಬಂದರೆ ಪ್ರಶ್ನಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಕಚೇರಿಗಳಿಗೆ ಹೋಗುವವರು ಐಡಿ ಕಾರ್ಡ್ ಕಡ್ಡಾಯ. ಐಡಿ ಕಾರ್ಡ್ ಇಲ್ಲದ ಇರುವವರಿಗೆ ಅವಕಾಶ ಇಲ್ಲ. ಸರಿಯಾದ ಕಾರಣ ಹೇಳಿ ಹೋಗಬೇಕಾಗುತ್ತೆ. ಕೆಲವು ಮುಖ್ಯ ರಸ್ತೆಗಳು ಬಂದ್ ಆಗಿರುತ್ತೆ. ವಾಹನಗಳನ್ನು 30 ಕಿಮೀ ವೇಗದಲ್ಲಿ ಮಾತ್ರ ಸಂಚಾರ ಮಾಡಬೇಕು. ಸಂಚಾರಿ ನಿಯಮ ಪಾಲಿಸಬೇಕು. ಹೆಲ್ಮೆಟ್ ಕಡ್ಡಾಯ. ಆರೋಗ್ಯ ಇಲಾಖೆಯ ಸೂಚನೆ ಪಾಲಿಸುವುದು ಕಡ್ಡಾಯ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಇಲ್ಲವಾದಲ್ಲಿ ದಂಡ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
ಕೋವಿಡ್-19:ರೆಡ್ ಝೋನ್ ನಲ್ಲಿರುವ ಬೆಂಗಳೂರಿನ 13 ವಾರ್ಡ್ ಗಳು ಯಾವುವು?
ಮದ್ಯದ ಮಾರಾಟಕ್ಕೆ ಅನುಮತಿ
ಅಬಕಾರಿ ಇಲಾಖೆಯಿಂದ ಮದ್ಯದಂಗಡಿಗೆ ಅನುಮತಿ ಸಿಕ್ಕಿದೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೂ ಓಪನ್ ಮಾಡಬಹುದು. ಮಾಲೀಕರು ಅಂಗಡಿ ಮುಂದೆ ಬ್ಯಾರಿಕೇಡ್ ಹಾಕಬೇಕು. ಗ್ರಾಹಕರು ಮಾಸ್ಕ್ ಮತ್ತು ಗ್ಲೌಸ್ ಹಾಕಿರಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಿಸಿಟಿವಿ ಮತ್ತು ಸಿವಿಆರ್ ಅಳವಡಿಸಬೇಕು. ಖಾಸಗಿ ಭದ್ರತೆ ಗೊತ್ತುಪಡಿಸಬೇಕು. ಈ ನಿಯಮಗಳನ್ನು ಪಾಲಿಸಿದೆ ಇದ್ದರೆ ಆ ಅಂಗಡಿಯನ್ನು ಬಂದ್ ಮಾಡಲಾಗುವುದು. ಪಾರ್ಸಲ್ಗೆ ಮಾತ್ರ ಅವಕಾಶ, ತಗೊಂಡು ಮನೆಗೆ ಹೋಗಬೇಕು. ಉಲ್ಲಂಘನೆ ಮಾಡಿದ್ರೆ ಕಾನೂನಿನ ಕ್ರಮ ಜರುಗಿಸಲಾಗುವುದು.
ಮದುವೆ, ಸಾವು ನಿರ್ಬಂಧನೆ ಪಾಲಿಸಬೇಕು
ಮದುವೆ ಕಾರ್ಯಕ್ರಮಗಳಿಗೆ ಮತ್ತು ಸಾವು ಸಂಭವಿಸಿದ್ದಲ್ಲಿ ಅಂತವರಿಗೆ ಸೀಮಿತ ಜನರು ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಹೆಚ್ಚು ಜನರು ಸೇರಿದ್ದರೆ ಅವರು ವಿರುದ್ಧ ಕೇಸ್ ದಾಖಲಿಸಲಾಗುವುದು. ಕಂಟೈನ್ಮೆಂಟ್ ಜೋನ್ನಲ್ಲಿ ಇದಕ್ಕೆಲ್ಲ ಅವಕಾಶ ಇರುವುದಿಲ್ಲ. ಉಳಿದ ವಿನಾಯಿತಿಗಳು ಸಿಗುವುದಿಲ್ಲ.