ಆಪರೇಷನ್ ಬ್ಲಾಕ್ ಡಾಗ್: ನೇಪಾಳದಲ್ಲಿ ಸಿಕ್ಕಿಬಿದ್ದ ಸೌತ್ ಬಾಸ್ ಕರಿಯಾ ರಾಜೇಶ್
ಬೆಂಗಳೂರು, ಜೂ. 15: ಆತ ಬೆಂಗಳೂರಿನ ಪುಡಿ ರೌಡಿ. ಭೂಗತ ಲೋಕದಲ್ಲಿ ಆತನಿಗೆ ' ಸೌತ್ ಬಾಸ್' ಎನಿಸಿಕೊಳ್ಳುವ ಹಪಾಹಪಿ. ಬೆಂಗಳೂರು ದಕ್ಷಿಣ ಪೊಲೀಸರು ನಡೆಸಿದ ಆಪರೇಷನ್ ಬ್ಲಾಕ್ ಡಾಗ್ ಸೀಕ್ರೇಟ್ ಕಾರ್ಯಾಚರಣೆಗೆ ಭೂಗತ ಲೋಕದ ಕಿರಾತಕ ಸಿಕ್ಕಿಬಿದ್ದಿದ್ದಾನೆ!
Recommended Video
ಕೆಲ ತಿಂಗಳ ಹಿಂದೆ ರಾಜ್ಯದಲ್ಲಿ ಸದ್ದು ಮಾಡಿದ ಸ್ಯಾಂಡಲ್ ವುಡ್ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹತ್ಯೆಗೆ ಯತ್ನಿಸಿದ ಪ್ರಕರಣದ ಮುಂದುವರೆದ ಭಾಗ. ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ ಹತ್ಯೆಗೆ ಸಂಚು ರೂಪಿಸಿದ್ದ ಬೆಂಗಳೂರಿನ ಲೋಕಲ್ ರೌಡಿ ಕರಿಯ ರಾಜೇಶ್ ನನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಹಳೇ ರೌಡಿ ಪರಂಧಾಮಯ್ಯನ ಶಿಷ್ಯನಾಗಿದ್ದ ರೌಡಿ ಶೀಟರ್ ರಾಜೇಶ್ ಕರಿಯ ರಾಜೇಶ್ ಎಂದೇ ಪರಿಚಿತನಾಗಿದ್ದ. ಇತ್ತೀಚೆಗೆ ಈತನಿಗೆ ಬಾಂಬೆ ರವಿಯ ಸಂಪರ್ಕ ಸಿಕ್ಕಿತ್ತು. ಅಂದಿನಿಂದ ನಣಾ ಅಪರಾಧ ಕೃತ್ಯ ಎಸಗುತ್ತಿದ್ದ ಕರಿಯಾ ರಾಜೇಶ್, ಸೌತ್ ಬಾಸ್ ಎಂದು ತನ್ನ ಶಿಷ್ಯಂದಿರ ಕೈಯಲ್ಲಿ ಕರೆಸಿಕೊಳ್ಳುತ್ತಿದ್ದ. ಸೌತ್ ಬಾಸ್ ಎಂದು ಕರೆಸಿಕೊಳ್ಳುವ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದ. ಹೀಗೆ ಗುರುತಿಸಿಕೊಂಡಿದ್ದ ಕರಿಯಾ ರಾಜೇಶ್ ಅಂಡರ್ ವರ್ಲ್ಡ್ನಲ್ಲಿ ದೊಡ್ಡ ಹೆಸರು ಮಾಡುವ ದುರಾಲೋಚನೆಯೊಂದಿಗೆ ನಿರ್ಮಾಪಕ ಉಮಾಪತಿ ಅವರ ಹತ್ಯೆಗೆ ಸಂಚು ರೂಪಿಸಿದ್ದ. ಇದರ ವಾಸನೆ ಹಿಡದಿದ್ದ ಜಯನಗರ ಪೊಲೀಸರು ಸಂಚು ರೂಪಿಸಿದ್ದ ಗ್ಯಾಂಗ್ ಎಡೆ ಮುರಿ ಕಟ್ಟಿದ್ದರು. ಸಂಚುಕೋರ ತಂಡ ಬಂಧನಕ್ಕೆ ಒಳಗಾಗುತ್ತಿದ್ದಂತೆ, ಕರಿಯಾ ರಾಜೇಶ್ ಪರಾರಿಯಾಗಿದ್ದ.

ಹಳೇ ಜಿದ್ದಿಗೆ ಮುಹೂರ್ತ ಇಟ್ಟಿದ್ದ ಸೌತ್ ಬಾಸ್: ಬೆಂಗಳೂರಿನ ಭೂಗತ ಲೋಕದಲ್ಲಿ ಬಾಂಬೆ ರವಿ ಹಾಗೂ ಸೈಕಲ್ ರವಿ ನಡುವೆ ಹಳೇ ವೈಷಮ್ಯವಿದೆ. ನಿರ್ಮಾಪಕ ಉಮಾಪತಿ ಅವರ ಸಹೋದರ ಸೈಕಲ್ ರವಿ ಜತೆ ಗುರುತಿಸಿಕೊಂಡಿದ್ದ. ಹೀಗಾಗಿ ಸಹಜವಾಗಿ ಉಮಾಪತಿ ಹಾಗೂ ಸಹೋದರ ಬಗ್ಗೆ ಜಿದ್ದು ಸಾಧಿಸುತ್ತಿದ್ದ ಬಾಂಬೆ ರವಿ. ಬಾಂಬೆ ರವಿಯ ಅಣತಿಯಂತೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹತ್ಯೆಗೆ ಸಂಚು ರೂಪಿಸಿದ್ದ. ಮೊದಲ ಯತ್ನದಲ್ಲೇ ಕರಿಯಾ ರಾಜೇಶನ ಸಂಚು ವಿಫಲವಾಗಿತ್ತು. ಸಹಚರರು ಬಂಧನಕ್ಕೆ ಒಳಗಾಗುತ್ತಿದ್ದಂತೆ ಬೆಂಗಳೂರು ಬಿಟ್ಟು ನೇಪಾಳಕ್ಕೆ ಓಡಿ ಹೋಗಿದ್ದ. ಅಲ್ಲಿ ಇರಲಿಕ್ಕೆ ಸೇಫ್ ಅಂತ ತಿಳಿದು ವಾಸ ಮಾಡುತ್ತಿದ್ದ.

ಆಪರೇಷನ್ ಬ್ಲ್ಯಾಕ್ ಡಾಗ್: ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಬಂಧಿತ ಆರೋಪಿಗಳು ಕರಿಯಾ ರಾಜೇಶ್ನ ವೃತ್ತಾಂತ ಬಾಯಿಬಿಟ್ಟಿದ್ದರು. ಇದರ ಜಾಡು ಹಿಡಿದು ತನಿಖೆ ನಡೆಸಲು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ನೇತೃತ್ವದಲ್ಲಿ ಬ್ಲಾಕ್ ಡಾಗ್ ಹೆಸರಿನ ವಿಶೇಷ ತಂಡ ಕಾರ್ಯಾಚರಣೆಗೆ ಇಳಿದಿತ್ತು. ನೇಪಾಳದಲ್ಲಿ ಅಡಗಿರುವ ರಾಜೇಶ್ ನ ಬಂಧನಕ್ಕಾಗಿ ರಹಸ್ಯ ಕಾರ್ಯಾಚರಣೆ ನಡೆಸಿದ್ದರು. ಸೌತ್ ಬಾಸ್ ಎನಿಸಿಕೊಳ್ಳಲು ಅಪರಾಧ ಕೃತ್ಯ ಎಸಗಲು ಯೋಜನೆ ರೂಪಿಸಿದ್ದ ಕರಿಯಾ ರಾಜೇಶ್ನನ್ನು ದಕ್ಷಿಣ ವಿಭಾಗದ ಪೊಲೀಸರು ನೇಪಾಳದಲ್ಲಿ ಬಂಧಿಸಿ ಬೆಂಗಳೂರಿಗೆ ಕರೆ ತಂದಿದ್ದಾರೆ. ಜಯನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುದರ್ಶನ್, ರೌಡಿ ಕರಿಯಾ ರಾಜೇಶ್ನನ್ನು ವಿಚಾರಣೆ ನಡೆಸುತ್ತಿದ್ದಾರೆ. ಶೀಘ್ರದಲ್ಲಿಯೇ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾನೆ ಕರಿಯಾ ರಾಜೇಶ್.












Click it and Unblock the Notifications