ಜೈಲಿನಲ್ಲೇ ರೌಡಿ ಚಟುವಟಿಕೆ ಮಾಡ್ತಿದ್ದ ವಿಲ್ಸನ್ ಗಾರ್ಡನ್ ನಾಗ ಎತ್ತಂಗಡಿ!
ಬೆಂಗಳೂರು, ಆ. 20: ಜೈಲಿನಲ್ಲಿದ್ದುಕೊಂಡೇ ರೌಡಿ ಚಟುವಟಿಕೆ ನಡೆಸುತ್ತಿದ್ದ ವಿಲ್ಸನ್ ಗಾರ್ಡನ್ ನಾಗ ಸೇರಿದಂತೆ ಹದಿನೆಂಟು ರೌಡಿಗಳನ್ನು ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಜಿಲ್ಲಾ ಕಾರಾಗೃಹಗಳಿಗೆ ಎತ್ತಂಗಡಿಗೆ ಆದೇಶಿಸಲಾಗಿದೆ. ಬೆಂಗಳೂರು ಜೈಲಿನಲ್ಲಿದ್ದುಕೊಂಡೇ ತಮ್ಮ ಸಹಚರರ ಮೂಲಕ ರೌಡಿ ಚಟುವಟಿಕೆ ನಡೆಸುತ್ತಿರುವ ರೌಡಿಗಳನ್ನು ಬಳ್ಳಾರಿ, ಗುಲ್ಬರ್ಗಾ ಜೈಲುಗಳಿಗೆ ವರ್ಗಾವಣೆ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ ಪಂತ್ ಆದೇಶ ಮಾಡಿದ್ದಾರೆ.
ಬೆಂಗಳೂರಿನ ಜೈಲಿನಲ್ಲಿರುವ ವಿಲ್ಸನ್ ಗಾರ್ಡನ್ ನಾಗ, ಆತನ ಚುಟವಟಿಕೆ ಹಾಗೂ ಜೈಲಿನಲ್ಲಿದ್ದುಕೊಂಡೇ ತಮಿಳು ಸಿನಿಮಾ "ಕರ್ಣ" ಸಿನಿಮಾದ ಹಾಡೊಂದನ್ನು ದಿನಕ್ಕೆ ಆರು ತಾಸು ಕೇಳುವ ಬಗ್ಗೆ ಒನ್ ಇಂಡಿಯಾ ಕನ್ನಡ ವರದಿ ಪ್ರಕಟಿಸಿತ್ತು. ವರದಿ ಬೆನ್ನಲ್ಲೇ ವಿಲ್ಸನ್ ಗಾರ್ಡನ್ ನಾಗ, ಬಾಂಬೆ ಸಲೀಂ, ಪ್ರದೀಪ್, ಶಿವಕುಮಾರ್,ಮೈಕಲ್ ಜಾರ್ಜ್, ಪ್ರದೀಪ್ ಅಲಿಯಾಸ್ ಚೊಟ್ಟೆ ಸೇರಿದಂತೆ ಹದಿನೆಂಟು ರೌಡಿಗಳನ್ನು ಬೆಂಗಳೂರು ಜೈಲಿನಿಂದ ಬೇರೆ ಜಿಲ್ಲೆಗಳಿಗೆ ಸ್ಥಳಾಂತರಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಆದೇಶ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಆಯುಕ್ತರು, "ವಿವಿಧ ಅಪರಾಧ ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಕುಖ್ಯಾತ ರೌಡಿಗಳು ಜೈಲಿನಲ್ಲಿದ್ದುಕೊಂಡೇ ತಮ್ಮ ಸಹಚರರ ಮೂಲಕ ಬೆಂಗಳೂರು ನಗರದಲ್ಲಿ ರೌಡಿ ಚಟುವಟಕೆ ನಡೆಸುವ ಸಂಚು ರೂಪಿಸಿದ ಪ್ರಯತ್ನಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಗ್ಗೆ ಬಂದ ಖಚಿತ ಮಾಹಿತಿ ಆಧರಿಸಿ ಹದಿನೆಂಟು ರೌಡಿಗಳನ್ನು ಬೆಂಗಳೂರು ಜೈಲಿನಿಂದ ವರ್ಗಾವಣೆ ಮಾಡಿ ಆದೇಶಿಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.

ವಿಲ್ಸನ್ ಗಾರ್ಡನ್ ನಾಗ, ಅಲಿಯಾಸ್ ನಾಗರಾಜ, ಬಾಂಬೆ ಸಲೀಂ, ರೌಡಿ ಶೀಟರ್ ಶಿವಕುಮಾರ್ ಸೇರಿ ಹದಿನೆಂಟು ಮಂದಿ ರೌಡಿಗಳು ರಾಜ ವಿಲಾಸಿ ಬೆಂಗಳೂರು ಜೈಲನ್ನು ತೊರೆದು ಬಳ್ಳಾರಿ,ಗುಲ್ಬರ್ಗಾ, ಬೆಳಗಾವಿ ಜೈಲು ಸೇರಬೇಕಿದೆ. ಈ ಕುರಿತು ಕಾರಾಗೃಹ ಮುಖ್ಯ ಅಧೀಕ್ಷಕರ ರಂಗನಾಥ್ ಅವರನ್ನು ಸಂಪರ್ಕಿಸಿದ ಒನ್ ಇಂಡಿಯಾ ಕನ್ನಡ ಪ್ರಯತ್ನ ವಿಫಲವಾಯಿತು.
ಜೈಲೇ ರೌಡಿಗಳ ಅರಮನೆ : ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವೇ ಪಾತಕ ಲೋಕದ ಕ್ರಿಮಿನಲ್ ಗಳ ಜೀವ ರಕ್ಷಿಸುವ ತಾಣ. ಸದಾ ಬಿಗಿ ಭದ್ರತೆ, ಹೊರ ಜಗತ್ತನ್ನು ಸಂಪರ್ಕಿಸಲು ಮೊಬೈಲ್ ಪೋನ್ ಸೌಲಭ್ಯ, ಮೂರು ಹೊತ್ತು ಊಟ, ದುಡ್ಡು ಕೊಟ್ಟರೆ ಮದ್ಯಪಾನ, ಯೋಗ, ಜಿಮ್ ಎಲ್ಲವೂ ಅಲ್ಲಿ ಸಿಗುತ್ತದೆ. ಇನ್ನು ಗೂಂಡಾಗಿರಿ ಹಿನ್ನೆಲೆಯುಳ್ಳವರಿಗೆ ಕೈಕಾಲು ಮಸಾಜ್ ಮಾಡಲಿಕ್ಕೂ ಆಳುಗಳು ಸಿಗುತ್ತಾರೆ. ಹೀಗಾಗಿ ಎದುರಾಳಿ ಗ್ಯಾಂಗ್ ನಿಂದ ಜೀವ ಭಯ ಇರುವ ರೌಡಿ ಶೀಟರ್ ಗಳು ಉದ್ದೇಶ ಪೂರ್ವಕವಾಗಿಯೇ ಅಪರಾಧ ಕೃತ್ಯ ಎಸಗಿ ಜೈಲಿಗೆ ಹೋಗುತ್ತಾರೆ.

ಜೈಲು ಅಧಿಕಾರಿಗಳಿಂದಲೇ ಅಕ್ರಮ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಹೆಸರಿಗೆ ಮಾತ್ರ ಜೈಲು. ಎಷ್ಟೇ ಅಕ್ರಮ ಹೊರ ಬಂದರೂ ಜೈಲು ಮಾತ್ರ ಸುಧಾರಣೆಯಾಗಿಲ್ಲ. ಇತ್ತೀಚೆಗೆಷ್ಟೇ ಸಿಸಿಸಿಬಿ ಪೊಲೀಸರು ದಾಳಿ ನಡೆಸಿ ಚಾಕು, ಚೂರಿ, ಮಾದಕ ವಸ್ತು, ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡಿದ್ದರು. ಇದಾದ ಕೆಲವೇ ದಿನಕ್ಕೆ ಡಿ.ಜೆಹಳ್ಳಿ ಗಲಭೆ ಪ್ರಕರಣದ ಜಾಮೀನು ಅರ್ಜಿಯ ಹೈಕೋರ್ಟ್ ಕಲಾಪವನ್ನು ಜೈಲಿನಲ್ಲಿದ್ದೇ ವೀಕ್ಷಿಸುತ್ತಿದ್ದ ಸಂಗತಿ ಹೊರ ಬಂದಿತ್ತು. ಈ ವಿಚಾರ ಹೈಕೋರ್ಟ್ ಗಮನಕ್ಕೆ ಬಂದು ನ್ಯಾಯಾಧೀಶರು ಕಿಡಿ ಕಾರಿದ್ದರು. ಮಾತ್ರವಲ್ಲ, ಈ ಕುರಿತು ವರದಿ ನೀಡಲು ಸೂಚನೆ ನೀಡಿದ್ದಾರೆ. ಹಾಗಂತ ಈಗ ಸಂಪೂರ್ಣ ಭದ್ರತೆಯಿಂದ ಕೂಡಿದೆಯಾ ? ಸಾಧ್ಯವೇ ಇಲ್ಲ.ಪರಪ್ಪನ ಅಗ್ರಹಾರ ಕಾರಾಗೃಹದ್ಲಿ ಕಾಸು ಕೊಟ್ಟರೆ ಸಿಗದ ಸೌಲಭ್ಯ ಯಾವುದೂ ಇಲ್ಲ ಎನ್ನುವಂತಾಗಿದೆ. ಬೆಂಗಳೂರು ಜೈಲಿನಲ್ಲಿದ್ದುಕೊಂಡೇ ಸಿಗರೇಟ್, ಬೀಡಿ, ಮೊಬೈಲ್ ಸಿಮ್, ಮೊಬೈಲ್, ಮೊಬೈಲ್ ಕಾಲ್, ಹೊರಗಿನ ಊಟ, ಬಿರಿಯಾನಿ ಊಟ ಹೀಗೆ ನಾನಾ ವಹಿವಾಟು ನಡೆಯುತ್ತದೆ. ಜಲು ಅಧಿಕಾರಿಗಳ ದನ ದಾಹ ತಿಳಿದ ಕ್ರಿಮಿನಲ್ ಗಳೇ ಜೈಲನ್ನು ಆಳ್ವಿಕೆ ಮಾಡುವಂತಾಗಿದೆ.

ಕನಿಷ್ಠ ನೆಮ್ಮದಿ ಜೀವನಕ್ಕೆ 50 ಸಾವಿರ ಬೇಕು: "ಸಾರ್ ನಾನಿದ್ದಿದ್ದು ಹದಿನೈದು ದಿನ. ಯಾವನೋ ದೊಡ್ಡ ರೌಡಿಯಂತೆ ಅವನು ಬಂದ ಕೂಡಲೇ ಯಾವ ಜೈಲು ಅಧಿಕಾರಿ ಮಾತನಾಡುವುದಿಲ್ಲ. ಅಲ್ಲಿ ದುಡ್ಡು ಕೊಟ್ಟರೆ ಎಲ್ಲವೂ ಸಿಗುತ್ತದೆ. ಹಣ ಕೊಟ್ಟು ತರಿಸಿಕೊಳ್ಳಲಿ ಎಂಬ ಕಾರಣಕ್ಕೆ ಜೈಲಿನಲ್ಲಿ ಒಳ್ಳೆಯ ಊಟ ಹಾಕುವುದಿಲ್ಲ. ಹಣ ಕೊಟ್ಟರೆ ಮನೆಯವರ ಜತೆ ವಿಡಿಯೋ ಕಾಲ್ ಮಾಡಿ ಮಾತನಾಡಬಹುದು. ಹತ್ತು ರೂಪಾಯಿ ವಸ್ತು ನೂರು ರೂಪಾಯಿಗೆ ಮಾರಾಟವಾಗುತ್ತದೆ. ನಾನು ಹದಿನೈದು ದಿನ ಕಳೆಯಲು ಬರೋಬ್ಬರಿ ಐವತ್ತು ಸಾವಿರ ಖರ್ಚು ಮಾಡುವ ಅನಿವಾರ್ಯತೆ ಬಿತ್ತು. ಯಾರು ಹಣ ಕೊಡುವುದಿಲ್ಲವೋ ಅವರನ್ನು ಜೈಲು ಅಧಿಕಾರಿಗಳೇ ಕೀಳಾಗಿ ನೋಡುತ್ತಾರೆ. ರೌಡಿಗಳಿಗೆ ಅಲ್ಲಿ ರಾಜ ಮರ್ಯಾದೆ ಸಿಗುತ್ತಿದೆ ಎಂದು ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನ ರೋಚಕ ಸಂಗತಿಯನ್ನ ಒನ್ ಇಂಡಿಯಾ ಕನ್ನಡಕ್ಕೆ ತಿಳಸಿದ್ದಾರೆ.












Click it and Unblock the Notifications