ಬೆಂಗಳೂರು ಎಟಿಎಂ ದಾಳಿಗೆ ಒಂದು ವರ್ಷ, ಆರೋಪಿ ಎಲ್ಲಿ?
ಬೆಂಗಳೂರು, ನ.19 : ಅಂದು ಬೆಳಗ್ಗೆ ಬೆಂಗಳೂರಿನ ಬಿಬಿಎಂಪಿ ಕಚೇರಿ ಮುಂಭಾಗದಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ ಎಟಿಎಂಗೆ ಹೋದ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಹಲ್ಲೆ ನಡೆದ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿತ್ತು. ಅದನ್ನು ನೋಡಿದ ಜನರು ಬೆಚ್ಚಿಬಿದ್ದಿದ್ದರು. ಬೆಂಗಳೂರಿನ ಎಟಿಎಂ ದಾಳಿಗೆ ಇಂದಿಗೆ ಒಂದು ವರ್ಷ ಆದರೆ, ಆರೋಪಿ ಮಾತ್ರ ಇನ್ನೂ ಪತ್ತೆಯಾಗಿಲ್ಲ.
2013ರ ನ.19ರಂದು ಬೆಳಗ್ಗೆ 7.10ರ ಸುಮಾರಿಗೆ ಕಾರ್ಪೋರೇಷನ್ ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್ ಅವರ ಮೇಲೆ ಅಪರಿಚಿತ ವ್ಯಕ್ತಿ ಎಲ್ಐಸಿ ಕಟ್ಟಡದಲ್ಲಿರುವ ಎಟಿಎಂನಲ್ಲಿ ಹಲ್ಲೆ ನಡೆಸಿದ್ದ. ಹಲ್ಲೆ ನಂತರ ಆರೋಪಿ ಶಟರ್ ಅನ್ನು ಮುಚ್ಚಿ ಪರಾರಿಯಾಗಿದ್ದ. ಈ ಕೃತ್ಯ ನಡೆದ ಸುಮಾರು ನಾಲ್ಕು ಗಂಟೆಗಳ ನಂತರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಜ್ಯೋತಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇಂದು ಜ್ಯೋತಿ ಉದಯ್ ಚೇತರಿಸಿಕೊಂಡಿದ್ದು, ಬ್ಯಾಂಕಿನಲ್ಲಿ ಕೆಲಸ ಮುಂದುವರೆಸಿದ್ದಾರೆ. ಸಿಸಿಟಿವಿಯಲ್ಲಿ ಹಲ್ಲೆಯ ದೃಶ್ಯಗಳು ರೆಕಾರ್ಡ್ ಆಗಿದ್ದರೂ ಒಂದು ವರ್ಷವಾದರೂ ಆರೋಪಿಯನ್ನು ಹಿಡಿಯಲು ಸಾಧ್ಯವಾಗಿಲ್ಲ. ಬೆಂಗಳೂರು ಪೊಲೀಸರು ರಚಿಸಿರುವ ವಿಶೇಷ ತಂಡ ಆರೋಪಿಗಾಗಿ ಹುಡುಕಾಟ ನಡೆಸುತ್ತಲೇ ಇದೆ. [ಘಟನೆ ಬಗ್ಗೆ ಜ್ಯೋತಿ ಉದಯ್ ಹೇಳಿದ್ದೇನು?]
ಹಲ್ಲೆ ಆರೋಪಿ ಆಂಧ್ರಪ್ರದೇಶದಲ್ಲಿದ್ದಾನೆ ಎಂದು ಪೊಲೀಸರು ನಡೆಸಿದ ಹುಡುಕಾಟ ಫಲ ನೀಡಿಲ್ಲ. ವ್ಯಕ್ತಿಯ ಮುಖಚಹರೆ ಹೊಂದುವ ಹಲವು ಜನರನ್ನು ಪೊಲೀಸರು ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದಾರೆ. ಆರೋಪಿಯ ಸುಳಿವು ಕೊಟ್ಟವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ. ಆದರೆ, ಆರೋಪಿ ಮಾತ್ರ ಸಿಕ್ಕಿಬಿದ್ದಿಲ್ಲ.

ಎಟಿಎಂನಲ್ಲಿ ಹಲ್ಲೆ ನಡೆದ ನಂತರ ಪೊಲೀಸರು ಎಟಿಎಂಗಳಲ್ಲಿ ಜನರ ಸುರಕ್ಷತೆಗಾಗಿ ನೀಡಿರುವ ಮಾರ್ಗಸೂಚಿ ಎಲ್ಲಾ ಎಟಿಎಂಗಳಲ್ಲೂ ಪಾಲನೆಯಾಗಿಲ್ಲ. ಇಂದಿಗೂ ಹಲವಾರು ಎಟಿಎಂಗಳಲ್ಲಿ ಸೈರನ್, ಸಿಸಿಟಿವಿ ಮತ್ತು ಸೆಕ್ಯೂರಿಟಿ ಗಾರ್ಡ್ಗಳಿಲ್ಲ.
ಆರೋಪಿಯನ್ನು ಪತ್ತೆ ಹಚ್ಚುತ್ತೇವೆ : ಎಟಿಎಂನಲ್ಲಿ ನಡೆದ ಹಲ್ಲೆ ಪ್ರಕರಣದ ಆರೋಪಿಯನ್ನು ಬಂಧಿಸುವ ಕಾರ್ಯಕ್ಕೆ ಸಂಬಂಧಿಸಿದಂತೆ ನಮ್ಮ ಪ್ರಯತ್ನ ಮುಂದುವರಿದಿದೆ. ಆದರೆ ಆರೋಪಿಯ ಬಗ್ಗೆ ಇನ್ನೂ ಯಾವುದೇ ಸುಳಿವು ಪತ್ತೆಯಾಗಿಲ್ಲ. ಶೀಘ್ರವೇ ಆರೋಪಿಯ ಬಂಧಿಸುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಹೇಳಿದ್ದಾರೆ.

ಪೊಲೀಸರು ಪ್ರಯತ್ನ ಮಾಡುತ್ತಿದ್ದಾರೆ : 'ನನ್ನ ಮೇಲೆ ಹಲ್ಲೆ ನಡೆದ ಆರೋಪಿಯನ್ನು ಇನ್ನೂ ಬಂಧಿಸಲು ಸಾಧ್ಯವಾಗಿಲ್ಲ. ಪೊಲೀಸರು ತಮ್ಮ ಪ್ರಯತ್ನ ಮಾಡುತ್ತಿದ್ದಾರೆ. ಪೊಲೀಸರನ್ನು ನಾನು ದೂರುವುದಿಲ್ಲ' ಎಂದು ಜ್ಯೋತಿ ಉದಯ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಎಟಿಎಂ ದಾಳಿಯ ವಿಡಿಯೋ ಇಲ್ಲಿದೆ












Click it and Unblock the Notifications