Breaking: ರಸ್ತೆ ಗುಂಡಿ ತಪ್ಪಿಸಲು ಮಹಿಳೆ ಯತ್ನ: ಮಹಿಳೆಗೆ KSRTC ಬಸ್ ಡಿಕ್ಕಿ ಸ್ಥಿತಿ ಗಂಭೀರ
ಬೆಂಗಳೂರು, ಅಕ್ಟೋಬರ್ 17: ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ಬಿಬಿಎಂಪಿಯು ಮತ್ತೊಮ್ಮೆ ರಸ್ತೆಗುಂಡಿಯಿಂದಾಗಿ ಸುದ್ದಿಯಾಗಿದೆ. ರಸ್ತೆಗುಂಡಿ ತಪ್ಪಿಸಲು ಹೋದ ಮಹಿಳಾ ದ್ವಿಚಕ್ರವಾಹನ ಸವಾರರೊಬ್ಬರಿಗೆ ಮೇಲೆ ಬಸ್ ಡಿಕ್ಕಿ ಹೊಡೆದ ಘಟನೆ ರಾಜಾಜಿನಗರ ಸುಜಾತ ಚಿತ್ರಮಂದಿರ ಬಳಿ ನಡೆದಿದೆ.
ಗಾಯಗೊಂಡವರನ್ನು ಉಮಾದೇವಿ ಎಂದು ಎಂದು ಗುರುತಿಸಲಾಗಿದೆ. ಸೋಮವಾರ ಬೆಳಗ್ಗೆ ವನಿತಾ ಎಂಬುವವರ ಜತೆ ಸ್ಕೂಟರ್ನಲ್ಲಿ ಸುಜಾತ ಚಿತ್ರಮಂದಿರ ಮಾರ್ಗವಾಗಿ ಉಮಾದೇವಿ ಅವರು ತೆರಳುತ್ತಿದ್ದರು. ಮಳೆಯಿಂದಾಗಿ ಈ ರಸ್ತೆಗಳಲ್ಲಿ ಸಾಕಷ್ಟು ಗುಂಡಿಗಳು ನಿರ್ಮಾಣಗೊಂಡಿವೆ. ಈ ರಸ್ತೆಗುಂಡಿಗಳನ್ನು ತಪ್ಪಿಸುವ ವೇಳೆ ಉಮಾದೇವಿ ಅವರು ಆಯತಪ್ಪಿ ಸ್ಕೂಟರ್ನಿಂದ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಹಿಂಬದಿಯಿಂದ ಬಂದ ಕೆಎಸ್ಆರ್ಟಿಸಿ ಬಸ್ ಅವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಉಮಾದೇವಿ ಅವರಿಗೆ ಗಂಭೀರ ಗಾಯಗಳು ಆಗಿವೆ ಎಂದು ತಿಳಿದು ಬಂದಿದೆ.
ಘಟನೆ ನಡೆದ ಕೂಡಲೇ ಸ್ಥಳೀಯರು ಉಮಾದೇವಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಕಾಲು ಹಾಗೂ ದೇಹಕ್ಕೆ ದೊಡ್ಡ ಪ್ರಮಾಣದಲ್ಲಿ ಪೆಟ್ಟಾಗಿದೆ. ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಘಟನೆಗೆ ಬಿಬಿಎಂಪಿ ಕಳಪೆ ಗುಣಮಟ್ಟದ ರಸ್ತೆ ನಿರ್ಮಾಣ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ ವ್ಯಕ್ತವಾಗಿದೆ.

ರಾಜಾಜಿನಗರದ ಸುಜಾತ ಚಿತ್ರಮಂದಿರ ಬಳಿ ಗುಂಡಿಗಳ ಬಿದ್ದು ತಿಂಗಳುಗಳೇ ಕಳೆದಿವೆ. ಈ ಬಗ್ಗೆ ಬಿಬಿಎಂಪಿ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿಲ್ಲ. ಬಿಬಿಎಂಪಿ ಕೇವಲ ಗುಂಡಿ ಮುಚ್ಚುವ ನಾಟವಾಡುತ್ತಿದೆ. ಈ ಬಗ್ಗೆ ಎಷ್ಟೇ ದೂರುಗಳನ್ನು ನೀಡಿದರೂ, ನಾನಾ ರೀತಿಯಲ್ಲಿ ಜಾಗೃತಿ ಮೂಡಿಸಿದರೂ ಪ್ರಯೋಜನವಾಗುತ್ತಿಲ್ಲ. ರಸ್ತೆಗುಂಡಿಗಳಿಗೆ ಅಮಾಯಕ ಜೀವಗಳು ಬಲಿಯಾಗುತ್ತಿವೆ. ಸಾಕಷ್ಟು ಮಂದಿ ಕೈ ಕಾಲು ಕಳೆದುಕೊಂಡಿದ್ದಾರೆ. ಇದಕ್ಕೀಗ ಮತ್ತೊಂದು ಘಟನೆ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ಸರ್ಕಾರದ ವಿರುದ್ಧ ಹಿಡಿ ಶಾಪ ಹಾಕಿದ್ದಾರೆ.

ಸದ್ಯ ಪ್ರಕರಣ ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಕೆಎಸ್ಆರ್ಟಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮತ್ತೊಂದು ಪ್ರಕರಣ ಸವಾರಿನಗೆ ಗಾಯ
ರಸ್ತೆಗುಂಡಿಗಳಿಂದ ನಿತ್ಯ ಒಂದಿಲ್ಲ ಒಂದು ಕಡೆ ಸಮಸ್ಯೆಗೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಲೆ ಇದೆ. ಮತ್ತೊಂದು ಪ್ರಕರಣದಲ್ಲಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಬೈಕ್ ಸವಾರರೊಬ್ಬರು ಆಯತಪ್ಪಿ ಬಿದ್ದಿದ್ದಾರೆ. ಅವರ ಎಡಗಾಲಿಗೆ ಗಾಯವಾಗಿದೆ. ಈ ಘಟನೆ ಕಾರ್ಪೋರೇಷನ್ ವೃತ್ತ ಸಮೀಪ ಮಿಷನ್ ರಸ್ತೆಯಲ್ಲಿ ಸೋಮವಾರ ನಡೆದಿದೆ. ರಸ್ತೆಗಳನ್ನು ಮುಚ್ಚದ ಬಿಬಿಎಂಪಿ ವಿರುದ್ಧ ಬೈಕ್ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications