Breaking: ಬೆಂಗಳೂರಿನಲ್ಲಿ ಕೈಕಾಲು ಕಟ್ಟಿ ವೃದ್ದೆಯ ಹತ್ಯೆ- ಚಿನ್ನಾಭರಣ ದೋಚಿದ ದುಷ್ಕರ್ಮಿಗಳು
ಬೆಂಗಳೂರು, ಸೆಪ್ಟೆಂಬರ್ 09: ಬೆಂಗಳೂರಿನಲ್ಲಿ ವೃದ್ದೆಯ ಕೈ ಕಾಲುಗಳನ್ನು ಕಟ್ಟಿ, ಉಸಿರು ಗಟ್ಟಿಸಿ ಕೊಲೆ ಮಾಡಿ ಚಿನ್ನಾಭರಣವನ್ನು ದೋಚಿರುವ ಘಟನೆ ವಿದ್ಯಾರಣ್ಯ ಪುರದ ಅಂಬಾ ಭವಾನಿ ದೇವಸ್ಥಾನದದ ಸಮೀಪದ ಮನೆಯಲ್ಲಿ ನಡೆದಿದೆ.
ವೃದ್ಧೆಯ ಬರ್ಬರವಾಗಿ ಕೊಲೆಯನ್ನು ಮಾಡಿರುವ ದುಷ್ಕರ್ಮಿಗಳು ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ. ತಡರಾತ್ರಿ ಕೊಲೆ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಪ್ರಸನ್ನ ಕುಮಾರಿ(60) ಕೊಲೆಯಾದ ವೃದ್ಧೆಯಾಗಿದ್ದು ಕೊಲೆ ಮಾಡಿ ಚಿನ್ನಾಭರಣ ಹೊತ್ತೊಯ್ದಿರೋ ಆರೋಪಿಗಳಿಗಾಗಿ ವಿದ್ಯಾರಣ್ಯಪುರ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಪ್ರಸನ್ನ ಕುಮಾರಿ ಮೂಲತಃ ವಿಜಯವಾಡದವರು ಎನ್ನಲಾಗಿದೆ. ಚಿಂತಾಮಣಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿ ಇತ್ತೀಚಿಗೆ ನಿವೃತ್ತಿಯಾಗಿದ್ದರು. ಪ್ರಸನ್ನ ಕುಮಾರಿ ಒಂಟಿಯಾಗಿ ಜೀವನವನ್ನ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ. ನಿನ್ನೆ ಸಂಜೆಯ ಸಮಯದಲ್ಲಿ ಇಬ್ಬರು ಆಗಂತುಕರು ಬಂದು ಕೃತ್ಯ ಎಸಗಿರೋ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆಸ್ತಿ ವಿಚಾರಕ್ಕೆ ಕೊಲೆ ನಡೆದಿರುವ ಬಗ್ಗೆ ಶಂಕೆಯೂ ಇದೆ. ಕೈಕಾಲು ಕಟ್ಟಿ ಉಸಿರುಗಟ್ಟಿಸಿ ಕೊಲೆಗೈದ ಕಿರಾತಕರು ಬಗ್ಗೆ ಮಾಹಿತಿಯನ್ನು ಕಲೆ ಹಾಕಲಾಗತ್ತಿದೆ.
ಸದ್ಯ ವಿದ್ಯಾರಣ್ಯ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯರು ವೃದ್ದೆಯು ಒಂಟಿಯಾಗಿ ವಾಸವನ್ನು ಮಾಡುತ್ತಿದ್ದರ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಕೆಲವು ಬಂಧುಗಳು ಆಗಾಗ ಬಂದು ಹೋಗುತ್ತಿದ್ದ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ವೃದ್ದೆಗೆ ಯಾರು ಕಡೆಯ ಸಲ ಕರೆಯನ್ನು ಮಾಡಿದ್ದರು ಎಂಬ ಬಗ್ಗೆಯು ಪೊಲೀಸರು ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ವೃದ್ದೆಯನ್ನು ಪರಿಚಿತರೇ ಕೊಲೆಯನ್ನು ಮಾಡಿರುವ ಶಂಕೆ ವ್ಯಕ್ತವಾಗಿದ್ದು ಮರ್ಡರ್ ಫಾರ್ ಗೇನ್ ಎಂದು ತಿಳಿದುಬಂದಿದೆ. ಸದ್ಯ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ಪತ್ತೆಗಾಗಿ ಪೊಲೀಸರ ಬಲೆ ಬೀಸಿದ್ದಾರೆ.