ಓಕಳಿಪುರಂ ಅಷ್ಟಪಥ ಕಾಮಗಾರಿಯ ಅಡ್ಡಿಗಳು ನಿವಾರಣೆ
ಬೆಂಗಳೂರು, ಸೆ. 23 : ಓಕಳಿಪುರಂ ಅಷ್ಟಪಥ ಕಾರಿಡಾರ್ ಕಾಮಗಾರಿಯನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಮಣ್ಣು ಪರೀಕ್ಷೆ ಸೇರಿದಂತೆ ಎಲ್ಲಾ ಕಾರ್ಯಗಳು ಪೂರ್ಣಗೊಂಡಿದ್ದು, ಕಾಮಗಾರಿಯನ್ನು ಆರಂಭಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಸೋಮವಾರ ಸಾರಿಗೆ ಮತ್ತು ಬೆಂಗಳೂರು ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಓಕಳಿಪುರಂ ಸಮೀಪದ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೈಗೆತ್ತಿಕೊಂಡ ಈ ಯೋಜನೆ ಭೂಸ್ವಾಧೀನ ಮತ್ತು ಮಣ್ಣು ಪರೀಕ್ಷೆಯ ಕಾರಣಗಳಿಂದ ವಿಳಂಬಗೊಂಡಿದೆ ಎಂದರು ಹೇಳಿದರು. [ಕಾಮಗಾರಿಗೆ ಬಜೆಟ್ ನಲ್ಲಿ ಅನುದಾನ]

ಯೋಜನೆಗೆ ಸಂಬಂಧಿಸಿದಂತೆ ಎಲ್ಲಾ ಸಮಸ್ಯೆಗಳು ಈಗ ಬಗೆಹರಿದಿವೆ. ರೈಲ್ವೆ ಇಲಾಖೆಯಿಂದ ಸುಮಾರು ಎರಡೂವರೆ ಎಕರೆ ಭೂಮಿಯನ್ನು ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಇದಕ್ಕೆ ಬದಲಾಗಿ, ಬಿನ್ನಿಮಿಲ್ ಕಾರ್ಖಾನೆ ಜಾಗವನ್ನು ಇಲಾಖೆಗೆ ನೀಡಲಾಗಿದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು. ಈ ಯೋಜನೆಯ ಭಾಗವಾಗಿರುವ ರೈಲ್ವೆ ಸೇತುವೆ ನಿರ್ಮಾಣಕ್ಕಾಗಿ 20 ಕೋಟಿ ರೂ.ಬಿಡುಗಡೆ ಮಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. [ಬಿಬಿಎಂಪಿ ವಿಭಜನೆಗೆ ಕುರಿತು ವರದಿ ನೀಡಲು ತಜ್ಞರ ಸಮಿತಿ]
ಸಚಿವರನ್ನು ಸ್ವಾಗತಿಸಿದ ಕಸ : ಓಕಳಿಪುರಂ ಜಂಕ್ಷನ್ ನಂತರ ಸರ್ವಿಸ್ ರಸ್ತೆಯ ಮೂಲಕ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಆಗಮಿಸಿದ ಸಚಿವರನ್ನು ದಾರಿಯುದ್ದಕ್ಕೂ ಕಸ ಸ್ವಾಗತಿಸಿತು. ತ್ಯಾಜ್ಯ ಕಂಡು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದ ಸಹಾಯಕ ಎಂಜಿನಿಯರ್ ಉದಯ ಕುಮಾರ್ ಮತ್ತು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮೋಹನ್ ಅವರಿಗೆ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದರು.

ಬಿಬಿಎಂಪಿ ಮೇಯರ್ ಎನ್.ಶಾಂತ ಕುಮಾರಿ, ಸಚಿವ ದಿನೇಶ್ ಗುಂಡೂರಾವ್, ಬಿಬಿಎಂಪಿ ಆಯುಕ್ತ ಎಂ.ಡಿ.ಲಕ್ಷ್ಮೀನಾರಾಯಣ ಮುಂತಾದವರು ಸಚಿವರೊಂದಿಗೆ ಇದ್ದರು. ಈ ಭೇಟಿಯ ನಂತರ ಮೇಯರ್ ಶಾಂತ ಕುಮಾರಿ ಅವರು, ಎಚ್ಎಎಲ್ ವಿಮಾನ ನಿಲ್ದಾನಕ್ಕೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದರು.












Click it and Unblock the Notifications