ಅಕ್ರಮ ವಲಸಿಗರನ್ನು ಹೊರಹಾಕಲು ರಾಜ್ಯದಲ್ಲೂ ಎನ್ಆರ್ಸಿ ಜಾರಿ: ಬೊಮ್ಮಾಯಿ
ಬೆಂಗಳೂರು, ಅಕ್ಟೋಬರ್ 3: ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್ಆರ್ಸಿ) ರಾಜ್ಯದಲ್ಲಿ ಕೂಡ ಜಾರಿ ಮಾಡಲಾಗುವುದು ಎಂಬ ಸುಳಿವನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ನೀಡಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್ಆರ್ಸಿ ಜಾರಿಯ ಬಗ್ಗೆ ಸೂಚನೆ ನೀಡಿದರು. 'ನಾವು ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಕೇಂದ್ರ ಗೃಹ ಸಚಿವರೊಂದಿಗೆ ಚರ್ಚಿಸಿ ಈ ಬಗ್ಗೆ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದೇವೆ' ಎಂದು ಬೊಮ್ಮಾಯಿ ಹೇಳಿದರು.
ಎಲ್ಲ ರಾಜ್ಯಗಳಲ್ಲಿಯೂ ಎನ್ಆರ್ಸಿಯನ್ನು ಅನುಷ್ಠಾನ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದರು. ಅದರ ಬೆನ್ನಲ್ಲೇ ಬೊಮ್ಮಾಯಿ ಕರ್ನಾಟಕದಲ್ಲಿ ಕೂಡ ಅದರ ಜಾರಿಗೆ ಆಸಕ್ತಿ ತೋರಿಸಿದ್ದಾರೆ. ಇದೇ ವಾರದಲ್ಲಿ ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಿದೆ
'ರಾಜ್ಯಕ್ಕೆ ಬರುತ್ತಿರುವ ವಲಸಿಗರ ಸಂಖ್ಯೆ ಹೆಚ್ಚಿದೆ. ಅದರಲ್ಲಿಯೂ ಮುಖ್ಯವಾಗಿ ಬೆಂಗಳೂರಿಗೆ ಅಧಿಕ ಸಂಖ್ಯೆಯಲ್ಲಿ ವಲಸೆ ಬರುತ್ತಿದ್ದಾರೆ. ಅವರ ಚಟುವಟಿಕೆಗಳ ಮೇಲೆ ಗಮನ ಇಡುವ ಅಗತ್ಯವಿದೆ. ಹಲವು ರಾಜ್ಯಗಳು ಎನ್ಆರ್ಸಿಗೆ ಒಪ್ಪಿಕೊಂಡಿವೆ. ಈಗಾಗಲೇ ಈ ಸಂಬಂಧ ಅಧಿಕಾರಿಗಳೊಂದಿಗೆ ಎರಡು ಬಾರಿ ಸಭೆ ನಡೆಸಿದ್ದೇನೆ. ಕಾನೂನು ಜಾರಿ ಕುರಿತು ಅಧ್ಯಯನ ನಡೆಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ' ಎಂದು ಬೊಮ್ಮಾಯಿ ತಿಳಿಸಿದರು.

ವಲಸಿಗರಿಂದ ಅಪರಾಧ ಚಟುವಟಿಕೆ
ಬೆಂಗಳೂರು ನಗರದಲ್ಲಿ ಅಪಾರ ಸಂಖ್ಯೆಯ ಅಕ್ರಮ ವಲಸಿಗರಿದ್ದಾರೆ. ಅವರು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಾಗಿ ಅಕ್ರಮ ವಲಸಿಗರ ಮೇಲೆ ನಿಗಾ ಇರಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾನೂನಾತ್ಮಕ ತೊಡಕು
ಅಸ್ಸಾಂನಲ್ಲಿ ಈಗಾಗಲೇ ಎನ್ಆರ್ಸಿ ನಡೆದು ಅಕ್ರಮ ವಲಸಿಗರ ಪಟ್ಟಿ ತಯಾರಿಸಲಾಗಿದೆ. ಅದೇ ಮಾದರಿಯನ್ನು ರಾಜ್ಯದಲ್ಲಿಯೂ ಅನುಸರಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ರಾಜ್ಯದಲ್ಲಿ ಕಾನೂನು ಜಾರಿ ಮಾಡಲು ಹಲವು ತೊಡಕುಗಳಿವೆ. ಅವುಗಳನ್ನು ಕಾನೂನಾತ್ಮಕವಾಗಿ ಹೇಗೆ ನಿವಾರಿಸಿ ಮುಂದಿನ ಹೆಜ್ಜೆ ತೆಗೆದುಕೊಳ್ಳಬಹುದು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.

ಅಧಿಕೃತ ದಾಖಲೆ ಪರಿಶೀಲನೆ
ರಾಷ್ಟ್ರೀಯ ಪೌರತ್ವ ನೋಂದಣಿಯಡಿ ಭಾರತದ ಮೂಲ ನಾಗರಿಕರನ್ನು ಗುರುತಿಸಲಾಗುತ್ತಿದೆ. ವ್ಯಕ್ತಿಯ ಹೆಸರು, ಅವರು ಇಲ್ಲಿನ ಪ್ರಜೆ ಎನ್ನುವುದನ್ನು ಖಾತರಿಪಡಿಸುವ ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಲಾಗುತ್ತದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆಯುವವರನ್ನು ಮಾತ್ರ ಭಾರತದ ಅಧಿಕೃತ ಪ್ರಜೆ ಎಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ನೆಲೆಸಿರುವ ಮತ್ತು ಅಧಿಕೃತ ದಾಖಲೆ ಹೊಂದಿರದವರನ್ನು ಗುರುತಿಸಿ ಅಕ್ರಮ ವಿದೇಶಿಗರು ಎಂದು ಗುರುತಿಸಿ ಅವರನ್ನು ಗಡಿಪಾರು ಮಾಡಲಾಗುತ್ತದೆ.












Click it and Unblock the Notifications