ತಮಿಳುನಾಡಿನಲ್ಲೂ ಇನ್ನು ಮುಂದೆ ನಂದಿನಿ ಹಾಲು ಸಿಗುತ್ತೆ
ಬೆಂಗಳೂರು, ಜ. 24 : ತಮಿಳುನಾಡಿನಲ್ಲಿಯೂ ಇನ್ನು ಮುಂದೆ ನಂದಿನಿ ಹಾಲು ದೊರೆಯಲಿದೆ. ಹೌದು, ಬೆಂಗಳೂರು ಸಹಕಾರ ಹಾಲು ಒಕ್ಕೂಟ ನಿಯಮಿತ (ಬಮೂಲ್) ಪಕ್ಕದ ರಾಜ್ಯ ತಮಿಳುನಾಡಿನಲ್ಲಿ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಲು ಚಾಲನೆ ನೀಡಿದೆ.
ಬೆಂಗಳೂರು ಡೇರಿಯ ಸುವರ್ಣ ಮಹೋತ್ಸವ ಅಂಗವಾಗಿ ತಮಿಳುನಾಡಿನಲ್ಲಿ ನಂದಿನಿ ಹಾಲು ಮಾರಾಟಕ್ಕೆ ಬಮೂಲ್ ಮುಂದಾಗಿದ್ದು, ಬೆಂಗಳೂರು ಡೇರಿ ಆವರಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಈ ಯೋಜನೆಗೆ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ ನೀಡಿದ್ದಾರೆ. [ಮಾರುಕಟ್ಟೆಗೆ ಬರಲಿದೆ ಕೆಎಂಎಫ್ ಮಿನರಲ್ ವಾಟರ್]

ಈ ಯೋಜನೆ ಅನ್ವಯ ಪ್ರತಿದಿನ ಸುಮಾರು 15 ಸಾವಿರ ಲೀಟರ್ ಹಾಲಿನ ಪೊಟ್ಟಣಗಳನ್ನು ಹೊಸೂರು, ಕೃಷ್ಣಗಿರಿ, ಚೆನ್ನೈನಲ್ಲಿ ಮಾರಾಟ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಮಾತನಾಡಿದ ರಾಮಲಿಂಗಾ ರೆಡ್ಡಿ, ತಮಿಳುನಾಡಿನಿಂದ ಬೆಂಗಳೂರಿಗೆ ನಿರಂತರವಾಗಿ ಕಲಬೆರಕೆ ಹಾಲು ಪೂರೈಕೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. [ಕಲಬೆರಕೆ ಹಾಲು ಉತ್ಪಾದಕರನ್ನು ಜೈಲಿಗೆ ಕಳುಹಿಸುತ್ತೇವೆ]
ತಮಿಳುನಾಡಿನವರು ಹಾಲು ಮಾರಾಟ ಮಾಡಲು ನಮ್ಮ ಅಭ್ಯಂತರವಿಲ್ಲ. ಆದರೆ, ಕಲಬೆರಕೆ ಹಾಲು ಮಾರಾಟ ಮಾಡಲು ಅವಕಾಶ ನೀಡುವುದಿಲ್ಲ. ಇದನ್ನು ನಿಯಂತ್ರಿಸಲು ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ಬೆಣ್ಣೆಗೆ ಬೇಡಿಕೆ ಸಿಕ್ತು : ಯೋಗ ಗುರು ಬಾಬಾ ರಾಮದೇವ್ ಅವರು ಕೆಎಂಎಫ್ ಜೊತೆ ಕೈಜೋಡಿಸುವುದಾಗಿ ಭರವಸೆ ನೀಡಿದ್ದು ಬೆಣ್ಣೆಗಾಗಿ ಬೇಡಿಕೆ ಇಟ್ಟಿದ್ದಾರೆ. ನಾಲ್ಕು ಸಾವಿರ ಟನ್ ಬೆಣ್ಣೆ ಅಗತ್ಯವಿದೆ ಎಂದು ಬೇಡಿಕೆ ಮುಂದಿಟ್ಟಿದ್ದು, ಸದ್ಯ ಕೆಎಂಎಫ್ ಎರಡು ಸಾವಿರ ಟನ್ ಬೆಣ್ಣೆಯನ್ನು ಕಳುಹಿಸಿಕೊಡಲಿದೆ ಎಂದು ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು ಅವರು ತಿಳಿಸಿದ್ದಾರೆ.












Click it and Unblock the Notifications