ಕನಿಷ್ಠ ವೇತನ ಬೇಕೇ ಬೇಕು: ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ
ಬೆಂಗಳೂರು, ಜನವರಿ 17: ಕಳೆದ ವರ್ಷ ಒಂದು ವಾರಗಳ ಕಾಲ ಬೆಂಗಳೂರು ನಗರದಲ್ಲಿ ಅಹೋರಾತ್ರಿ ಧರಣಿ ನಡೆಸುವ ಮೂಲಕ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಅಂಗನವಾಡಿ ಕಾರ್ಯಕರ್ತರು ಇದೀಗ ಕೇಂದ್ರ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಮಾತೃಪೂರ್ಣ ಯೋಜನೆ ಆಹಾರ, ಬಾಣಂತಿಯರಿಗೆ ನೇರವಾಗಿ ತಲುಪಿಸಲು ಒತ್ತಾಯ
ಬುಧವಾರ ಬೆಳಗ್ಗೆ ಸೌತ್ ಎಂಡ್ ವೃತ್ತದಲ್ಲಿರುವ ಕೇಂದ್ರ ಸಚಿವ ಅನಂತಕುಮಾರ್ ಕಾರ್ಯಾಲಯ ಎದುರು ಏಕಾಏಕಿ ಪ್ರತಿಭಟನೆ ಆರಂಭಿಸಿರುವ ಸಾವಿರಾರು ಅಂಗನವಾಡಿ ಕಾರ್ಯಕರ್ತರು ಸುಪ್ರೀಂಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವವರೆಗೂ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಕನಿಷ್ಠ ವೇತನ ನಮ್ಮ ಹಕ್ಕು, ಬೇಕೆ ಬೇಕು ಕನಿಷ್ಠ ವೇತನ, ಖಾಸಗೀಕರಣ ಬೇಡವೇ ಬೇಡವೆಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಂಡ್ಯ, ಮೈಸೂರು, ಹಾಸನ, ಕೊಡಗು, ಚಾಮರಾಜನಗರದಿಂದ ಅಂಗನವಾಡಿ ಕಾರ್ಯಕರ್ತರು ಬೆಳಗ್ಗೆ ೮ ಗಂಟೆಗೆ ಆಗಮಿಸಿದ್ದಾರೆ.
ಪ್ರತಿಭಟನೆಗೆ ಎಐಟಿಯುಸಿ ಹಾಗೂ ಸಿಪಿಎಂ ಬೆಂಬಲ ನೀಡಿದೆ. ಸೌತ್ ಎಂಡ್ ಸುತ್ತಮುತ್ತಲೂ ಸಂಚಾರ ದಟ್ಟಣೆ ಏರ್ಪಟ್ಟಿದೆ. ತಮ್ಮ ಬೇಡಿಕೆ ಈಡೇರುವವರೆಗೂ ಅನಿರ್ಧಿಷ್ಟಾವಧಿ ಪ್ರತಿಭಟನೆ ನಿರ್ಧರಿಸಿದ್ದಾರೆ.