ಕರ್ನಾಟಕದ ಮಕ್ಕಳಿಗೆ ಸದ್ಯಕ್ಕಿಲ್ಲ ರಾಗಿ ಮುದ್ದೆ, ಜೋಳದ ರೊಟ್ಟಿ ಭಾಗ್ಯ
ಬೆಂಗಳೂರು, ನವೆಂಬರ್ 22: ಕರ್ನಾಟಕದಲ್ಲಿ 2023ರನ್ನು ಅಂತಾರಾಷ್ಟ್ರೀಯ ರಾಗಿ ವರ್ಷವನ್ನಾಗಿ ಆಚರಿಸಲು ಸಜ್ಜಾಗಿದ್ದು, ಈ ಹಿನ್ನೆಲೆಯಲ್ಲಿ ಈ ಹಿಂದೆ ಶಾಲಾ ಮಕ್ಕಳ ಮಧ್ಯಾಹ್ನ ಬಿಸಿಯೂಟ ಯೋಜನೆಯಲ್ಲಿ ರಾಗಿ ಮುದ್ದೆ ಹಾಗೂ ಜೋಳದ ರೊಟ್ಟಿ ನೀಡುವ ಕುರಿತು ನಿರ್ಧರಿಸಲಾಗಿತ್ತು. ಆದರೆ ಈ ಯೋಜನೆ ಮುಂದಿನ ವರ್ಷದಿಂದ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಧ್ಯಾಹ್ನದ ಬಿಸಿಯೂಟ ಊಟ ಯೋಜನೆಯ ಮುಖ್ಯ ಅಧಿಕಾರಿ ಅನಿತಾ ನಜರೆ ತಿಳಿಸಿದ್ದಾರೆ. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ ಲಭ್ಯವಿರುವ ಆಹಾರ ಧಾನ್ಯಗಳು ಕಳಪೆ ಗುಣಮಟ್ಟದ್ದಾಗಿದೆ. ಹೀಗಾಗಿ ಈ ವರ್ಷ ರಾಗಿ ಮುದ್ದೆ ಮತ್ತು ಜೋಳದ ರೊಟ್ಟಿ ನೀಡುವ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಕಷ್ಟಸಾಧ್ಯ ಎಂದು ತಿಳಿಸಿದ್ದಾರೆ.
ಬೆಂಗಳೂರಲ್ಲಿ ಒಂದು ದಶಕದಲ್ಲೇ ಅತ್ಯಧಿಕ ಚಳಿ ಸೋಮವಾರ ದಾಖಲು: IMD
ಮಾತು ಮುಂದುವರಿಸಿದ ಅವರು,"ನಾವು ಸಾಮಾನ್ಯವಾಗಿ ಅಕ್ಕಿ ಮತ್ತು ಗೋಧಿಯನ್ನು ಕೇಂದ್ರ ಸರ್ಕಾರದ ಭಾರತೀಯ ಆಹಾರ ನಿಗಮದಿಂದ ಸಂಗ್ರಹಿಸುತ್ತೇವೆ. ರಾಗಿ ಮತ್ತು ಜೋಳ ಕರ್ನಾಟಕಕ್ಕೆ ಸ್ಥಳೀಯವಾದ ಬೆಳೆಗಳಾಗಿದೆ. ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ರಾಗಿ ಮುದ್ದೆ ಮತ್ತು ಜೋಳದ ರೊಟ್ಟಿ ನೀಡಲು ದೊಡ್ಡ ಪ್ರಮಾಣದಲ್ಲಿ ರಾಗಿ ಮತ್ತು ಜೋಳ ಉತ್ಪಾದನೆಯ ಅಗತ್ಯವಿತ್ತು. ಈಗ ಸಂಗ್ರಹವಾಗುತ್ತಿರುವ ಆಹಾರ ಧಾನ್ಯಗಳು ತಾಜಾವಾಗಿಲ್ಲ ಜೊತೆಗೆ ಅವುಗಳ ಪೌಷ್ಟಿಕಾಂಶ ಕಳಪೆಯಾಗಿತ್ತು. ಆದ್ದರಿಂದ ಈ ಶೈಕ್ಷಣಿಕ ವರ್ಷದಲ್ಲಿ ಯೋಜನೆಯನ್ನು ಜಾರಿಗೊಳಿಸದಿರಲು ನಾವು ನಿರ್ಧರಿಸಿದ್ದೇವೆ," ಎಂದು ಅನಿತಾ ನಜರೆ ತಿಳಿಸಿದ್ದಾರೆ.
ಇನ್ನು "ಈ ಬಗ್ಗೆ ಬಜೆಟ್ ಅಧಿವೇಶನದ ಮೊದಲು, ನಾವು ಸಭೆ ನಡೆಸುತ್ತೇವೆ. ಈ ಯೋಜನೆಯ ಜಾರಿಗೆ ಆಹಾರ ಧಾನ್ಯಗಳನ್ನು ಸಂಗ್ರಹಿಸಲು ಹಣವನ್ನು ಮೀಸಲಿಡುತ್ತೇವೆ. ಇದರಿಂದಾಗಿ ನಾವು ಮುಂದಿನ ಶೈಕ್ಷಣಿಕ ವರ್ಷದಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ರಾಗಿ ಮುದ್ದೆ ಮತ್ತು ಜೋಳದ ರೊಟ್ಟಿ ನೀಡಲು ಸಾಧ್ಯವಾಗಬಹುದು," ಎಂದು ತಿಳಿಸಿದ್ದಾರೆ.
ಹವಾಮಾನ ವೈಪರೀತ್ಯ: ಕರ್ನಾಟಕದಾದ್ಯಂತ 3 ದಿನ ಮಳೆ ಸಾಧ್ಯತೆ
ರಾಜ್ಯದಲ್ಲಿ ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ಪೌಷ್ಠಿಕಾಂಶದ ಆಹಾರ ನೀಡುವ ಉದ್ದೇಶದಿಂದ ರಾಗಿಮುದ್ದೆ, ಜೋಳದ ರೊಟ್ಟಿ ನೀಡಲು ನಿರ್ಧಾರ ಮಾಡಲಾಗಿತ್ತು. ಶಿಕ್ಷಣ ಇಲಾಖೆಯ ವತಿಯಿಂದ ಕರ್ನಾಟಕದ ದಕ್ಷಿಣ ಭಾಗದ ಸರ್ಕಾರಿ ಮತ್ತು ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೆ ರಾಗಿ ಮುದ್ದೆ ಹಾಗೂ ಉತ್ತರ ಕರ್ನಾಟಕ ಭಾಗದ ಸರ್ಕಾರಿ ಮತ್ತು ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೆ ಜೋಳದ ರೊಟ್ಟಿ ನೀಡಲು ನಿರ್ಧರಿಸಲಾಗಿತ್ತು. ಇನ್ನು ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಧ್ಯಾಹ್ನದ ಬಿಸಿಯೂಟ ಊಟ ಯೋಜನೆ ಅಡಿಯಲ್ಲಿ ಮಕ್ಕಳಿಗೆ ಹಾಲು ಮತ್ತು ಮೊಟ್ಟೆ ನೀಡಲಾಗುತ್ತಿದೆ.
(ಮಾಹಿತಿಕೃಪೆ: ಇಂಡಿಯನ್ ಎಕ್ಸ್ ಪ್ರೆಸ್)