ಬೇಸ್ಮೆಂಟ್ನ ವಾಣಿಜ್ಯ ಚಟುವಟಿಕೆ ಸ್ಥಗಿತಕ್ಕೆ ಪಾಲಿಕೆಗೆ ಪತ್ರ
ಬೆಂಗಳೂರು, ಫೆಬ್ರವರಿ 16 : ನಿಯಮ ಬಾಹಿರವಾಗಿ ವಾಣಿಜ್ಯ ಕಟ್ಟಡಗಳ ಬೇಸ್ಮೆಂಟ್ನಲ್ಲಿ ವ್ಯಾಪಾರ, ವಹಿವಾಟು ನಡೆಸುತ್ತಿರುವ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಲು ಮುಂದಾಗಬೇಕು ಎಂದು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆಯುವುದಾಗಿ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಮಂಗಳವಾರ(ಫೆ.13) ಸಂಜೆ ಕುಂದಲಹಳ್ಳಿ ಎಪಿಎಸ್ ಲೇಔಟ್ ನಲ್ಲಿ ಕೊಳಚೆ ಗುಂಡಿ ಸ್ವಚ್ಛಗೊಳಿಸುವ ವೇಳೆ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ನಿಯಮಬಾಹಿರವಾಗಿ ಹೋಟೆಲ್ ನಡೆಸಲು ಅವಕಾಶ ಕಲ್ಪಿಸಿದ ಆರೋಪದಲ್ಲಿ ಬಿಬಿಎಂಪಿ ತೂಬರಹಳ್ಳಿ ವಿಭಾಗದ ಹಿರಿಯ ಆರೋಗ್ಯ ನಿರೀಕ್ಷಕ ದೇವರಾಜ್ ಹಾಗೂ ಮಹದೇವಪುರ ವಲಯದ ಉಪ ಆರೋಗ್ಯಾಧಿಕಾರಿ ಕಲ್ಪನಾ ಅವರ ವಿರುದ್ಧ ಕೇಸ್ ದಾಖಲಿಸಿ ಬಂಧಿಸಲಾಗಿದೆ.
ಬಹುಮಹಡಿ ಕಟ್ಟಡದ ಬೇಸ್ಮೆಂಟ್ನಲ್ಲಿ ವಾಣಿಜ್ಯ ವಹಿವಾಟು ನಡೆಸಲು ಪರವಾನಗಿ ಇರಲಿಲ್ಲ. ಆದರೂ, ಅಲ್ಲಿಲ್ಲಿ ಯಮಲೋಕ್ ಹೆಸರಿನ ಹೋಟೆಲ್ ನಡೆಯುತ್ತಿತ್ತು. ತಮ್ಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಹೋಟೆಲ್ ವಿರುದ್ಧ ಕ್ರಮ ಕೈಗೊಳ್ಳುವ ಜವಾಬದಾರಿ, ಅಧಿಕಾರ ಈ ಇಬ್ಬರು ಅಧಿಕಾರಿಗಳಿಗೆ ಇತ್ತು. ಆದರೆ ಕ್ರಮ ಕೈಗೊಂಡಿಲ್ಲ ಎಂದರು.
ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ತಪ್ಪಿಸಲು ನಿಯಮಬಾಹಿರವಾಗಿ ಕಟ್ಟಡಗಳ ಬೇಸ್ಮೆಂಟ್ನಲ್ಲಿ ನಡೆಯುತ್ತಿರುವ ವಾಣಿಜ್ಯ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಆಯುಕ್ತರಿಗೆ ಪತ್ರಬರೆಯುವುದಾಗಿ ತಿಳಿಸಿದರು.