ಸಂತೋಷ್ ಲಾಡ್ ರಾಜೀನಾಮೆ ಕೇಳಿಲ್ಲ : ಸಿಎಂ
ಬೆಂಗಳೂರು, ನ. 22 : ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ಸಚಿವ ಸಂತೋಷ್ ಲಾಡ್ ಅವರು ರಾಜೀನಾಮೆ ನೀಡುವಂತೆ ಪಕ್ಷ ಅಥವ ತಾವು ಸೂಚಿಸಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಲಾಡ್ ವಿರುದ್ಧ ರಾಜ್ಯಪಾಲರು ವಿವರ ಕೇಳಿದ್ದಾರೆ, ಅದಕ್ಕೆ ನಾನು ಉತ್ತರವನ್ನೂ ನೀಡಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಾರ್ತಾ ಮತ್ತು ಮೂಲ ಸೌಕರ್ಯ ಸಚಿವ ಸಂತೋಷ್ ಲಾಡ್ ವಿರುದ್ಧ ಅಕ್ರಮ ಗಣಿಗಾರಿಕೆ ಆರೋಪ ಕೇಳಿಬಂದಿದೆ. ಆ ಕುರಿತು ರಾಜ್ಯಪಾಲರಿಗೂ ಹಲವಾರು ದೂರುಗಳು ಹೋಗಿವೆ. ಆದರೆ, ನಾನು ಅವರಿಗೆ ರಾಜೀನಾಮೆ ನೀಡುವಂತೆ ಕೇಳಿಲ್ಲ ಎಂದು ತಿಳಿಸಿದರು.

ಸಂತೋಷ್ ಲಾಡ್ ವಿರುದ್ಧ ರಾಜ್ಯಪಾಲರಿಗೆ ಬಂದಿರುವ ದೂರುಗಳನ್ನು ಅವರು ನನಗೆ ಸಲ್ಲಿಸಿದ್ದಾರೆ ಮತ್ತು ಆ ಕುರಿತು ವಿವರಣೆ ಕೇಳಿದ್ದಾರೆ. ಆದರೆ, ಅದಕ್ಕೆ ನಾನು ಯಾವುದೇ ಉತ್ತರವನ್ನು ನೀಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಕಾಂಗ್ರೆಸ್ ಪಕ್ಷ ಅಥವ ನಾನು ಲಾಡ್ ರಾಜೀನಾಮೆ ನೀಡುವಂತೆ ಯಾವುದೇ ಸೂಚನೆ ನೀಡಿಲ್ಲ ಎಂದು ಹೇಳಿದರು. (ಲಾಡ್ ಬಗ್ಗೆ ಸಿಎಂ ಪ್ರತಿಕ್ರಿಯೆ ನೀಡಿಲ್ಲ : ರಾಜ್ಯಪಾಲರು)
ಪ್ರತಿಪಕ್ಷಗಳ ಒತ್ತಾಯಕ್ಕೆ ಮಣಿದಿರುವ ಸಿಎಂ ಸಿದ್ದರಾಮಯ್ಯ ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ಸಚಿವ ಸಂತೋಷ್ ಲಾಡ್ ಅವರಿಗೆ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದಾರೆ ಎಂಬ ಸುದ್ದಿ ಗುರುವಾರ ರಾತ್ರಿ ಹಬ್ಬಿತ್ತು. ಸಿಎಂ ಸೂಚನೆ ಮೇರೆಗೆ ಶುಕ್ರವಾರ ಸಂಜೆ ಅಥವ ಶನಿವಾರ ಸಚಿವ ಸಂತೋಷ್ ಲಾಡ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಯೂ ಇತ್ತು. (ಸಂತೋಷ್ ಲಾಡ್ ರಾಜೀನಾಮೆಗೆ ಸಿಎಂ ಸೂಚನೆ?)
ಸಂತೋಷ್ ಲಾಡ್ ಪ್ರತಿಕ್ರಿಯೆ : ಶುಕ್ರವಾರ ಬೆಳಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಸಚಿವ ಸಂತೋಷ್ ಲಾಡ್, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿಲ್ಲ. ಪ್ರತಿಪಕ್ಷಗಳ ಆರೋಪಗಳಲ್ಲಿ ಸತ್ಯವಿಲ್ಲ. ತಾವು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಹೇಳಿಕೆ ನೀಡಿದ್ದರು. ಸದ್ಯ ಸಿಎಂ ಸಹ ಲಾಡ್ ರಾಜೀನಾಮೆ ಕೇಳಿಲ್ಲ ಎಂದು ತಿಳಿಸಿದ್ದಾರೆ.












Click it and Unblock the Notifications