ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಮೇ ತಿಂಗಳಲ್ಲಿ ಸಂಚಾರಕ್ಕೆ ಮುಕ್ತ: ಸಚಿವ ನಿತಿನ್ ಗಡ್ಕರಿ
ಬೆಂಗಳೂರು, ಏಪ್ರಿಲ್ 16 : ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ವೇಯ ಮೊದಲ ಹಂತದ ಕಾಮಗಾರಿ ಮುಂದಿನ ತಿಂಗಳು ಮುಕ್ತಾಯವಾಗಲಿದೆ ಅಂತ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ನಿತಿನ್ ಗಡ್ಕರಿ, ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯನ್ನು ಎರಡು ಹಂತದಲ್ಲಿಅಭಿವೃದ್ಧಿಪಡಿಸಲಾಗುತ್ತಿದೆ. ಮೊದಲ ಹಂತದಲ್ಲಿ ಬೆಂಗಳೂರು-ನಿಡಘಟ್ಟ ರಸ್ತೆ ಕಾಮಗಾರಿ 90% ರಷ್ಟು ಮುಕ್ತಾಯದ ಹಂತಕ್ಕೆ ಬಂದಿದೆ. ಮುಂದಿನ ತಿಂಗಳು ಈ ರಸ್ತೆಯನ್ನು ಸಂಚಾರಕ್ಕೆ ಮುಕ್ತಾಗೊಳಿಸುವ ವಿಶ್ವಾಸವಿದೆ ಎಂದಿದ್ದಾರೆ. ಇನ್ನು ಎರಡನೇ ಹಂತದಲ್ಲಿ ನಿಡಘಟ್ಟದಿಂದ-ಮೈಸೂರು ರಸ್ತೆ ಕಾಮಗಾರಿ ಕೂಡ 85% ರಷ್ಟು ಮುಕ್ತಾಯವಾಗಿದ್ದು, ಈ ವರ್ಷದ ಸೆಪ್ಟೆಂಬರ್ ಒಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಅಂತ ತಿಳಿಸಿದ್ದಾರೆ.
ಮೊದಲ ಹಂತದ ಕಾಮಗಾರಿಗೆ ಸುಮಾರು 3,501 ಕೋಟಿ ರೂ ವೆಚ್ಚ ಮಾಡಲಾಗಿದ್ದು, ಎರಡನೇ ಹಂತದ ಕಾಮಗಾರಿಗೆ 2,920 ಕೋಟಿ ರೂ ವೆಚ್ಚ ಮಾಡಿ ಕಾಮಗಾರಿ ನಡೆಸಲಾಗುತ್ತಿದೆ. ಸದ್ಯ ಸ್ಥಳೀಯರಿಂದ ರಸ್ತೆ ದಾಟಲು ಅನುಕೂಲ ಮಾಡಿಕೊಂಡುವಂತೆ ಕೆಲ ಮನವಿಗಳು ಬಂದಿದ್ದು, ಹಳ್ಳಿ ಜನರು ರಸ್ತೆ ದಾಟಲು ಅನುಕೂಲವಾಗಲಿ ಅಂತ 74 ಅಂಡರ್ಪಾಸ್ಗಳು ಮತ್ತು 12 ಮೇಲ್ಸೇತುವೆಗಳನ್ನು ಒದಗಿಸಲಾಗಿದೆ ಅಂತ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಈ ಯೋಜನೆಯಲ್ಲಿ ಹೆದ್ದಾರಿಯುದ್ದಕ್ಕೂ ಉಂಟಾಗುವ ಸಂಚಾರ ದಟ್ಟಣೆಯನ್ನ ತಪ್ಪಿಸಲು 5 ಬೈಪಾಸ್ಗಳನ್ನ ಹೊಂದಿರುತ್ತದೆ. ಬಿಡದಿ ಬೈಪಾಸ್ 6.9 ಕಿಮೀ , ರಾಮನಗರದ-ಚನ್ನಪಟ್ಟಣ ಮೂಲಕ 22.35 ಕಿಮೀ, ಮದ್ದೂರು 4.5 ಕಿಮೀ, ಮಂಡ್ಯ 10 ಕಿಮೀ, ಮತ್ತು ಶ್ರೀರಂಗಪಟ್ಟಣ 8 ಕಿಮೀ, ಇದಲ್ಲದೆ 8 ಕಿಮೀ ಉದ್ದದ ಕಾರಿಡಾರ್ ಜೊತೆಗೆ 9 ಪ್ರಮುಖ ಸೇತುವೆಗಳು, 44 ಸಣ್ಣ ಸೇತುವೆಗಳು, ಮತ್ತು ನಾಲ್ಕು ರೈಲ್ವೆ ಓವರ್ ಪಾಸ್ಗಳು ಇರುತ್ತವೆ.
ಇದರ ಜೊತೆಗೆ ರಾಮನಗರ ಬೈಪಾಸ್ ರಸ್ತೆ- ಕುಂಬಳಗೋಡು ಮತ್ತು ಶ್ರೀರಂಗಪಟ್ಟಣದಲ್ಲಿ ಟೋಲ್ ಬೂತ್ಗಳು ಬರಲಿವೆ. ಈ ಮೂಲಕ ನಗರಕ್ಕೆ ಪ್ರವೇಶಿಸುವಾಗ ಸಂಚಾರ ದಟ್ಟಣೆಯನ್ನ ತಪ್ಪಿಸಲು ಈ ಎಕ್ಸ್ಪ್ರೆಸ್ವೇ ರಸ್ತೆ ವಾಹನ ಸವಾರರಿಗೆ ಸಹಾಯಕವಾಗಲಿದೆ. ಎನ್ಎಚ್ಎಐ ಅಧಿಕಾರಿಗಳ ಮಾಹಿತಿಯ ಪ್ರಕಾರ ಬೆಂಗಳೂರು-ನಿಡಘಟ್ಟ-ಮೈಸೂರು ರಸ್ತೆ ಕಾಮಗಾರಿ ಪೂರ್ಣಗೊಂಡರೆ, ಎರಡೂ ನಗರಗಳ ನಡುವಿನ ಪ್ರಯಾಣದ ಅವಧಿ ಈಗಿರುವ 3 ಗಂಟೆಯಿಂದ 75 ನಿಮಿಷಕ್ಕೆ ತಗ್ಗಲಿದೆ ಎಂದು ಹೇಳಿದ್ದಾರೆ.
ಬೆಂಗಳೂರು-ಮೈಸೂರು ರಸ್ತೆ ಕೇವಲ ಟ್ರಾಫಿಕ್ ನಿಂದ ಮಾತ್ರವಲ್ಲದೆ ಸ್ಪೀಡ್ ಬ್ರೇಕರ್ನಿಂದಲೂ ಅಪಾಯಕಾರಿಯಾಗಿದೆ. ಹೀಗಾಗಿ ಈಗ ನಡೆಯುತ್ತಿರುವ ಎಕ್ಸ್ಪ್ರೆಸ್ ವೇ ರಸ್ತೆಯಲ್ಲಿ ಯಾವುದೇ ಸ್ಪೀಡ್ ಬ್ರೇಕರ್ಗಳಿರುವುದಿಲ್ಲ. ಈ ಎಕ್ಸ್ಪ್ರೆಸ್ ವೇ ರಸ್ತೆ ಪ್ರವೇಶ ನಿಯಂತ್ರಿತ ಹೆದ್ದಾರಿಯಾಗಲಿದ್ದು, ಯಾರು ಕೂಡ ಅಡ್ಡದಿಡ್ಡಿಯಾಗಿ ಪ್ರವೇಶ ಮಾಡುವಂತಿಲ್ಲ. ಇದಕ್ಕಾಗಿಯೇ ಪಾದಚಾರಿಗಳು ರಸ್ತೆ ದಾಟದಂತೆ ರಸ್ತೆ ನಡುವೆ ಕಂಬಿಗಳನ್ನ ಅಳವಡಿಸಲಾಗುತ್ತದೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.