ಪೀಣ್ಯ ಫ್ಲೈ ಓವರ್ ದುರಸ್ತಿ ಮುಗಿದಿಲ್ಲ; ವಾಹನ ಸವಾರರ ಪರದಾಟ
ಬೆಂಗಳೂರು, ಜನವರಿ 20; ಬೆಂಗಳೂರಿನ ಪೀಣ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 4ರ ಎಲಿವೇಟೆಡ್ ಹೈವೇಯಲ್ಲಿ ವಾಹನ ಸಂಚಾರ ಬಂದ್ ಮಾಡಿ ತಿಂಗಳುಗಳು ಕಳೆಯುತ್ತಾ ಬಂದಿದೆ. ಫ್ಲೈ ಓವರ್ ದುರಸ್ತಿ ಕಾರ್ಯ ಇನ್ನೂ ಮುಗಿಯದೇ ವಾಹನ ಸವಾರರು ಪರದಾಡುತ್ತಿದ್ದಾರೆ.
ತುರ್ತು ದುರಸ್ತಿ ಕಾಮಗಾರಿಗಾಗಿ ಡಿಸೆಂಬರ್ 26ರಿಂದಲೇ ಡಾ. ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆಯನ್ನು ಒಂದು ವಾರದ ಮಟ್ಟಿಗೆ ಬಂದ್ ಮಾಡಲಾಗಿತ್ತು. ಬಳಿಕ ವಾಹನ ಸಂಚಾರ ಬಂದ್ ಆದೇಶ ವಿಸ್ತರಣೆಯಾಗುತ್ತಲೇ ಇದೆ. ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ.
ಬೆಂಗಳೂರು-ತುಮಕೂರು ರಸ್ತೆ ಹೆಚ್ಚು ವಾಹನ ಸಂಚಾರ ದಟ್ಟಣೆಯಿಂದ ಕೂಡಿರುವ ರಸ್ತೆಯಾಗಿದೆ. ಫ್ಲೈ ಓವರ್ ಬಂದ್ ಆಗಿರುವುದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಕಾಮಗಾರಿ ಕೆಲಸ ಪೂರ್ಣಗೊಳ್ಳಲು ಇನ್ನೂ 15 ದಿನಗಳು ಬೇಕು ಎಂದು ಅಂದಾಜಿಸಲಾಗಿದೆ.

ಪೀಣ್ಯ ಎಲಿವೇಟೆಡ್ ಹೈವೇ (ಡಾ. ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಪಿಲ್ಲರ್ ನಂ 102 ಮತ್ತು 103ರ ಮಧ್ಯೆ 8ನೇ ಮೈಲಿಯ ಸ್ವಾತಿ ಪೆಟ್ರೋಲ್ ಬಂಕ್ ಬಳಿ ಫ್ಲೈ ಓವರ್ಗೆ ಅಳವಡಿಸಿರುವ ಕೇಬಲ್ ತುರ್ತಾಗಿ ದುರಸ್ಥಿ ಆಗಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಕಾಮಗಾರಿ ಕೈಗೊಂಡಿದೆ.
ಆದ್ದರಿಂದ ಬೆಂಗಳೂರು ಸಂಚಾರಿ ಪೊಲೀಸರು ಫ್ಲೈ ಓವರ್ ಎರಡೂ ಬದಿಯಲ್ಲಿ ವಾಹನ ಸಂಚಾರ ಬಂದ್ ಮಾಡಿದ್ದಾರೆ. ಈಗ ಕಾಮಗಾರಿಯೂ ಪೂರ್ಣಗೊಳ್ಳದೇ ವಾಹನ ಸವಾರರು ನಿತ್ಯ ಪರದಾಟ ನಡೆಸುತ್ತಿದ್ದಾರೆ.
10 ವರ್ಷದ ಹಿಂದೆ ನಿರ್ಮಾಣ ಮಾಡಿರುವ ಫ್ಲೈ ಓವರ್ನಲ್ಲಿ 116 ಪಿಲ್ಲರ್ಗಳಿವೆ. ಇಡೀ ಫ್ಲೈ ಓವರ್ ಪರಿಶೀಲನೆ ಮಾಡಿ, ಬೇರೆ ದುರಸ್ತಿಗಳಿದ್ದರೂ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ. ಆದ್ದರಿಂದ ಇನ್ನೂ 15 ರಿಂದ 20 ದಿನ ಕಾಮಗಾರಿ ನಡೆಯುವ ನಿರೀಕ್ಷೆ ಇದ್ದು, ಅಲ್ಲಿಯ ತನಕ ವಾಹನ ಸಂಚಾರ ಬಂದ್ ಆಗಿರಲಿದೆ.
ಫ್ಲೈ ಓವರ್ ಮೇಲೆ ವಾಹನ ಸಂಚಾರ ಬಂದ್ ಮಾಡಿರುವುದರಿಂದ ಈ ಪ್ರದೇಶದಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. 10 ನಿಮಿಷದಲ್ಲಿ ಸಂಚಾರ ನಡೆಸಬೇಕಾದ ಮಾರ್ಗದಲ್ಲಿ ಗಂಟೆಗಟ್ಟಲೇ ಕಾಯಬೇಕಿದೆ. ಈ ಮಾರ್ಗದಲ್ಲಿ ಪ್ರತಿದಿನ 50 ರಿಂದ 60 ಸಾವಿರ ವಾಹನಗಳು ಸಂಚಾರ ನಡೆಸುತ್ತವೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು ನಗರಕ್ಕೆ ಹೊರ ಜಿಲ್ಲೆಗಳಿಂದ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ.
2021ರ ಡಿಸೆಂಬರ್ 25ರಂದು ರಸ್ತೆ ನಿರ್ವಹಣೆ ಮಾಡುತ್ತಿದ್ದಾಗ ಸ್ಪ್ಯಾಬ್ ಬಿಗಿಗೊಳಿಸುವ ಕೇಬಲ್ ಸಡಿಲವಾಗಿರುವುದು ಪತ್ತೆಯಾಗಿತ್ತು. ತಕ್ಷಣವೇ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿ ಫ್ಲೈ ಓವರ್ ಮೇಲೆ ಎರಡೂ ಕಡೆಯ ಸಂಚಾರ ಬಂದ್ ಮಾಡಲಾಯಿತು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಂದು ವಾರದಲ್ಲಿ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಿತ್ತು. ಆದರೆ ಇನ್ನೂ ಕಾಮಗಾರಿ ಅಂತಿಮಗೊಂಡಿಲ್ಲ. ಫ್ಲೈ ಓವರ್ನ 102 ಮತ್ತು 103ನೇ ಪಿಲ್ಲರ್ ನಡುವೆ ಕೇಬಲ್ ಸಡಿಲಗೊಂಡಿದೆ.
ಈಗ ಫ್ಲೈ ಓವರ್ ಮೇಲೆ ವಾಹನ ಸಂಚಾರ ಬಂದ್ ಮಾಡಲಾಗಿದೆ. ಆದ್ದರಿಂದ ಇಡೀ ಫ್ಲೈ ಓವರ್ ಪರಿಶೀಲನೆ ನಡೆಸಿ ದುರಸ್ತಿ ಕಾರ್ಯಗಳು ಇದ್ದರೆ ಅದನ್ನು ಸಹ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ. ಆದ್ದರಿಂದ ವಾಹನ ಸವಾರರಿಗೆ ಸಂಚಾರ ದಟ್ಟಣೆ ಬಿಸಿ ತಟ್ಟಿದೆ.
ಪರ್ಯಾಯ ಮಾರ್ಗಗಳು; ಕಾಮಗಾರಿ ನಡೆಯುತ್ತಿರುವುದರಿಂದ ಪರ್ಯಾಯ ಮಾರ್ಗಗಳ ಮೂಲಕ ಬೆಂಗಳೂರು ನಗರ ಪ್ರವೇಶಿಸಬಹುದು ಅಥವ ಹೊರ ಹೋಗಬಹುದಾಗಿದೆ.
* ತುಮಕೂರು ಕಡೆಯಿಂದ ಬೆಂಗಳೂರು ನಗರದೊಳಗೆ ಪ್ರವೇಶಿಸುವ ವಾಹನಗಳು ಮಾದಾವರದ ಬಳಿ ಬಲತಿರುವು ಪಡೆದು ನೈಸ್ ರಸ್ತೆಯ ಮೂಲಕ ಬೆಂಗಳೂರು ನಗರಕ್ಕೆ ಬರಬಹುದಾಗಿದೆ.
* ಬೆಂಗಳೂರು ನಗರದ ಕಡೆಯಿಂದ ತುಮಕೂರು ರಸ್ತೆಯ ಮುಖಾಂತರ ಹೊರ ಹೋಗುವ ವಾಹನಗಳು ಗೊರಗುಂಟೆಪಾಳ್ಯದ ಸಿ.ಎಂ.ಟಿ.ಐ ಜಂಕ್ಷನ್ನಲ್ಲಿ ಎಡತಿರುವು ಪಡೆದು ರಿಂಗ್ ರಸ್ತೆ ಮೂಲಕ ಸುಮನಹಳ್ಳಿ, ಮಾಗಡಿ ರಸ್ತೆ ಕಡೆ ಸಂಚರಿಸಿ ನೈಸ್ ರಸ್ತೆ ಪ್ರವೇಶಿಸಿ ಹೊರ ಹೋಗಬಹುದು.











Click it and Unblock the Notifications