ಸೋಮವಾರದ ಪ್ರಮುಖ ಸುದ್ದಿಗಳ ಕ್ವಿಕ್ ಲುಕ್
ಬೆಂಗಳೂರು, ಅ.14 : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಎದುರಿಸಲು ಕಾಂಗ್ರೆಸ್ ಪ್ರಿಯಾಂಕ ವದ್ರಾ ಅವರು ಲೋಕಸಭೆ ಚುನಾವಣೆ ಅಖಾಡಕ್ಕೆ ಧುಮುಕಲಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಪ್ರಿಯಾಂಕ ದೇಶಾದ್ಯಂತ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ.
ಪ್ರಿಯಾಂಕ ರಾಯ್ ಭರೇಲಿ ಮತ್ತು ಅಮೇಥಿ ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಪರವಾಗಿ ಪ್ರಚಾರ ಕೈಗೊಂಡಿದ್ದರು. ಸದ್ಯ ದೇಶಾದ್ಯಂತ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯ ನಡೆಸಲು ಪ್ರಿಯಾಂಕ ಸಜ್ಜಾಗಿದ್ದಾತೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯದ ರೂಪುರೇಷೆಯನ್ನು ತಯಾರಿಸಿದ್ದಾರೆ. ಅದಕ್ಕೆ ಅನುಗುಣವಾಗಿ ಪ್ರಿಯಾಂಕಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಈ ಮೂಲಕ ದೇಶಾದ್ಯಂತ ಪ್ರಿಯಾಂಕ ಕಾಂಗ್ರೆಸ್ ಗೆ ಮತ ನೀಡಿ ಎಂದು ಜನರಿಗೆ ಮನವಿ ಮಾಡಲಿದ್ದಾರೆ. (ಸೋಮವಾರದ ಇತರ ಸುದ್ದಿಗಳು)

ಪ್ರಚಾರ ಕಣಕ್ಕೆ ಪ್ರಿಯಾಂಕ ವದ್ರಾ
2014ರ ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ ಪ್ರಚಾರ ನಡೆಸಲು ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ವಾದ್ರಾ ನಿರ್ಧರಿಸಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಿಯಾಂಕ ಅವರ ಪ್ರಚಾರದ ವೇಳಾಪಟ್ಟಿ ತಯಾರಿಸಿ ಕೊಡಲಿದ್ದಾರೆ. ಹಿಂದೆ ರಾಯ್ ಭರೇಲಿ ಮತ್ತು ಅಮೇಥಿ ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಪ್ರಿಯಾಂಕ ಪ್ರಚಾರ ನಡೆಸಿದ್ದರು.

ಸಂಜಯ್ ದತ್ ಪೆರೋಲ್ ವಿಸ್ತರಣೆ
1993ರ ಮುಂಬೈ ದಾಳಿ ಪ್ರಕರಣದಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸುತ್ತಿರುವ ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ನೀಡಲಾಗಿದ್ದ ಪೆರೋಲ್ ಅವಧಿಯನ್ನು ಮತ್ತೆ 14 ದಿನಗಳ ಕಾಲ ವಿಸ್ತರಿಸಲಾಗಿದೆ. ಸಂಜಯ್ ದತ್ ಕಾಲಿಗೆ ಪೆಟ್ಟು ಬಿದ್ದಿದ್ದು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಮನವಿ ಮೇರೆಗೆ ಅ.1ರಂದು ನೀಡಲಾಗಿದ್ದ 14 ದಿನಗಳ ಕಾಲಾವಧಿಯ ಪೆರೋಲ್ ಆದೇಶವನ್ನು ಯರವಾಡ ಜೈಲಿನ ಅಧಿಕಾರಿಗಳು ವಿಸ್ತರಣೆ ಮಾಡಿದ್ದಾರೆ.

ಸೌಜನ್ಯ ಕೊಲೆ ತನಿಖೆ ಚುರುಕು
ವಿದ್ಯಾರ್ಥಿನಿ ಸೌಜನ್ಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಚುರುಕುಗೊಂಡಿದೆ. ಬೆಳ್ತಂಗಡಿ ಠಾಣಾ ಎಸ್ಸೈ ಯೋಗೀಶ್ ಕುಮಾರ್ ರನ್ನು ಸೋಮವಾರ ಸಿಐಡಿ ಅಧಿಕಾರಿಗಳು ತನಿಖೆಗೊಳಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಾನಸಿಕ ಅಸ್ವಸ್ಥ ಸಂತೋಷ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆದರೆ, ಪ್ರಕರಣದಲ್ಲಿ ಧರ್ಮಸ್ಥಳದ ಪ್ರಭಾವಿಗಳ ಕೈವಾಡವಿದೆ ಎಂದು ಸ್ಥಳೀಯರು ಆರೋಪಿಸಿದ್ದರಿಂದ ಸಿಐಡಿ ತನಿಖೆ ನಡೆಯುತ್ತಿದೆ. ಸೋಮವಾರ ಬೆಳ್ತಂಗಡಿಯ ಪ್ರವಾಸಿ ಮಂದಿರದಲ್ಲಿ ಯೋಗೀಶ್ ವಿಚಾರಣೆ ನಡೆಯುತ್ತಿದೆ.

ಹುಲಿ ದತ್ತು ಪಡೆದ ಯಡಿಯೂರಪ್ಪ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಈ ಹಿಂದೆ ದತ್ತು ಪಡೆದಿದ್ದ ಹುಲಿಯನ್ನು ಮತ್ತೊಮ್ಮೆ ದತ್ತು ಪಡೆದಿದ್ದಾರೆ. ಅ.10, 2013 ರಿಂದ ಅ.9 2014ರ ಅವಧಿಗೆ ಅಮೂಲ್ಯ ಎಂಬ ಹುಲಿಯನ್ನು ದತ್ತು ಸ್ವೀಕಾರ ದತ್ತನ್ನು ನವೀಕರಿಸಿದ್ದಾರೆ. ಈ ಹುಲಿಯನ್ನು ನಿರಂತರವಾಗಿ ಐದನೇ ಬಾರಿಗೆ ಅಂದರೆ ಯಡಿಯೂರಪ್ಪ ದತ್ತು ಪಡೆಯುತ್ತಿದ್ದಾರೆ.

ಖಾಸಗಿ ಬಸ್ ಡಿಕ್ಕಿ ಐವರ ಸಾವು
ಟಿಲ್ಲರ್ ಹಿಂದಿನಿಂದ ಖಾಸಗಿ ಬಸ್ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ ತಾಲೂಕಿನ ಶ್ರೀರಾಮಪುರದಲ್ಲಿ ನಡೆದಿದೆ. ಮೀನಾ(35), ವೇಡಿಯಪ್ಪ(55), ಯಶೋಧಮ್ಮ(55), ಕುಮಾರ(40) ಮತ್ತು ವೇಲು(16) ಮೃತ ದುರ್ದೈವಿಗಳು. ಮೃತರು ಶಿವಮೊಗ್ಗ ತಾಲ್ಲೂಕಿನ ವಡ್ಡಿನಕೊಪ್ಪ ಗ್ರಾಮದವರು. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುಂಗಾ ನಗರ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications