ಕನ್ನಡದಲ್ಲೇ ನಾಮಫಲಕಕ್ಕೆ ಕೊನೆಗೂ ಕಾನೂನು ರೂಪಿಸಲು ನಿರ್ಧಾರ
ಬೆಂಗಳೂರು, ಅಕ್ಟೋಬರ್ 12: ಬೆಂಗಳೂರಿನ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯಕ್ಕೆ ಕಾನೂನು ರೂಪಿಸುವ ಸಾಧ್ಯತೆ ಇದೆ.
ಬೆಂಗಳೂರಲ್ಲಿ ಕನ್ನಡ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ನಾಮಫಲಕಗಳು ಕನ್ನಡದಲ್ಲೇ ಇರಬೇಕು ಎಂದು ಬಿಬಿಎಂಪಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸುತ್ತೋಲೆ ಹೊರಡಿಸಿತ್ತು. ಆದರೆ ವಾಣಿಜ್ಯ ಮಳಿಗೆಗಳ ಮಾಲೀಕರು ಇದಕ್ಕೆ ಒಪ್ಪದೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಕನ್ನಡದಲ್ಲೇ ನಾಮಫಲಕ ಕಡ್ಡಾಯ ಎನ್ನುವ ನಿಯಮ ಯಾವ ಕಾಯ್ದೆಯಲ್ಲಿದೆ ಎಂದು ಹೈಕೋರ್ಟ್ ಪ್ರಶ್ನಿಸಿತ್ತು. ಆದರೆ ಇದೀಗ ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶಗಳ ಬೈಲಾ 2018ರ ಮೂಲಕ ನಾಮಫಲಕದಲ್ಲಿ ಕನ್ನಡ ಕಡ್ಡಾಯಕ್ಕೆ ಕಾನೂನಿನ ಮಾನ್ಯತೆ ಪಡೆಯಲು ದಾರಿ ಸೃಷ್ಟಿಯಾಗುವ ನಿರೀಕ್ಷೆಯಿದೆ.
ರಾಜ್ಯ ಸರ್ಕಾರ ಅನುಮತಿಯೊಂದಿಗೆ ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ಕಾಯ್ದೆಯಡಿ ಹೊಸದಾಗಿ ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶಗಳ ಬೈಲಾಗಳು ರೂಪಿಸಲಾಗಿದ್ದು ಇದರಲ್ಲಿ ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಅಂಗಡಿ ಮುಗ್ಗಟ್ಟು, ಮಾಲ್ ಗಳು ಸೇರಿದಂತೆ ಎಲ್ಲಾ ರೀತಿಯ ವಾಣಿಜ್ಯ ಮಳಿಗೆಗಳ ನಾಮಫಲದಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ಬಳಕೆ ಮಾಡಬೇಕು ಉಳಿದ ಭಾಷೆ ಶೇ 40ರಷ್ಟು ಮೀರಬಾರದು ಎಂಬ ನಿಯಮವನ್ನು ರೂಪಿಸಲು ಹೊರಟಿದೆ.

ಬೈಲಾ ಪ್ರಕಟಣೆ, ಅ.24ರವರೆಗೆ ಆಕ್ಷೇಪಣೆ ಸ್ವೀಕಾರ
ಈ ಹೊಸ ಬೈಲಾವನ್ನು ಈಗಾಗಲೇ ಬಿಬಿಎಂಪಿ ವೆಬ್ಸೈಟ್ನಲ್ಲಿ ಪ್ರಕಟಿಸಿದ್ದು, ಆಕ್ಷೇಪಣೆ ಸಲ್ಲಿಸಲು ಅ.24ರವರೆಗೆ ಅವಕಾಶ ನೀಡಲಾಗಿದೆ. ಬರುವ ಆಕ್ಷೇಪಣೆಗಳನ್ನು ಪರಿಶೀಲಿಸಿ ಹೊಸ ಜಾಹೀರಾತು ಬೈಲಾವನ್ನು ಅಂತಿಮಗೊಳಿಸಲಾಗುತ್ತದೆ.

ಸುತ್ತೋಲೆ ಸದ್ಯಕ್ಕೆ ವಾಪಸ್
ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸಿ ಪಾಲಿಕೆ ಹೊರಡಿಸಿರುವ ಸುತ್ತೋಲೆಯನ್ನು ಸದ್ಯಕ್ಕೆ ವಾಪಸ್ ಪಡೆಯುವುದು ಬಿಬಿಎಂಪಿಗೆ ಅನಿವಾರ್ಯವಾಗಿದೆ. ಸುತ್ತೋಲೆಯನ್ನು ಕೆಲ ವಾಣಿಜ್ಯ ಮಳಿಗೆಗಳ ಮಾಲೀಕರು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದಾರೆ. ಸದ್ಯಕ್ಕೆ ಈ ಸುತ್ತೋಲೆಯನ್ನು ವಾಪಸ್ ಪಡೆಯಲಾಗಿದೆ. ಹೊಸ ಜಾಹೀರಾತು ಬೈಲಾಗೆ ಸರ್ಕಾರದಿಂದ ಅನುಮತಿ ದೊರೆತ ಕೂಡಲಢ ಹೊಸ ಸುತ್ತೋಲೆ ಹೊಡರಿಸುವ ಚಿಂತನೆ ಇದೆ.

ಬಿಬಿಎಂಪಿಯಂಪಿ ಅಡ್ಡಕತ್ತರಿಯಲ್ಲಿದೆ
ನಾಮಫಲಕಗಳಲ್ಲಿ ಕನ್ನಡವೇ ಪ್ರಧಾನ ಭಾಷೆಯಾಗಿರಬೇಕು ಎಂದು ಯಾವ ಕಾನೂನಿನ ಅಡಿಯಲ್ಲಿ ಹೊರಡಿಸಲಾಗಿದೆ. ಸುತ್ತೋಲೆಗೆ ಕಾನೂನಿನ ಮಾನ್ಯತೆ ಇದೆಯಾ ಎಂದು ನ್ಯಾಯಪೀಠ ಬಿಬಿಎಂಪಿಗೆ ಪ್ರಶ್ನೆ ಮಾಡಿದೆ. ಆದರೆ ಸುತ್ತೋಲೆ ಕಾನೂನಿನ ಅಡಿಯಲ್ಲಿ ಇಲ್ಲ ಎನ್ನುವುದು ಮನದಟ್ಟಾಗಿದೆ. ಸುತ್ತೋಲೆ ವಾಪಸ್ ಪಡೆದರೆ ಕನ್ನಡಪರ ಸಂಘಟನೆಗಳು ಹಾಗೂ ಕನ್ನಡಿಗರ ವಿರೋಧ ಎದುರಿಸಬೇಕಾಗುತ್ತದೆ, ಇಲ್ಲವಾದರೆ, ನ್ಯಾಯಾಲಯದಲ್ಲಿ ಮುಜುಗರ ಅನುಭವಿಸಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿದೆ.

ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಸುತ್ತೋಲೆ
ಜುಲೈ 27ರಂದು ನಾಮಫಲಕದಲ್ಲಿ ಕನ್ನಡ ಭಾಷೆಯನ್ನು ಪ್ರಧಾನವಾಗಿ ಬಳಸುವುದನ್ನು ಕಡ್ಡಾಯಗೊಳಿಸಿ ಹೊರಡಿಸಿರುವ ಸುತ್ತೋಲೆಯನ್ನು ಹಿಂಪಡೆಯಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಂಡಿದೆ.












Click it and Unblock the Notifications