ಬೆಂಗಳೂರಿನ ಪ್ರವೀಣ್ ಸೇರಿ 200 ಸಾಹಸಿಗಳ ರಕ್ಷಣೆ
ಕಠ್ಮಂಡು,ಏ.27: ವಿಶ್ವದ ಅತಿ ಎತ್ತರದ ಪರ್ವತ ಎವರೆಸ್ಟ್ ಏರಲು ಮುಂದಾಗಿದ್ದ ಬೆಂಗಳೂರಿನ ಸಾಹಸಿ ಪ್ರವೀಣ್ ಸಿ.ಎಂ ಸೇರಿದಂತೆ ಸುಮಾರು 200 ಜನ ಪರ್ವತಾರೋಹಿಗಳನ್ನು ರಕ್ಷಿಸಲಾಗಿದೆ ಎಂದು ನೇಪಾಳ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ ಪ್ರಕಟಿಸಿದೆ.
ಕಠ್ಮಂಡು ಸೇರಿದಂತೆ ನೇಪಾಳದ ಹಲವೆಡೆ ಭೂಕಂಪದಿಂದ ಜನ ತತ್ತರಿಸಿದ್ದು ಇಲ್ಲಿ ತನಕ ಸುಮಾರು 4,500 ಜನ ಬಲಿಯಾಗಿದ್ದಾರೆ, ಗಾಯಾಳುಗಳ ಸಂಖ್ಯೆ 8 ಸಾವಿರಕ್ಕೇರಿದೆ. ಕಳೆದ 80 ವರ್ಷಗಳಲ್ಲೇ ಅತ್ಯಂತ ಭೀಕರವಾದ ದೃಶ್ಯಗಳು ಕಂಡು ಬಂಡಿದೆ. ಇತ್ತ ಎವರೆಸ್ಟ್ ಬೇಸ್ ಕ್ಯಾಂಪ್ ಮೇಲೆ ಸತತವಾಗಿ ಸುರಿದ ಭಾರಿ ಹಿಮಪಾತಕ್ಕೆ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.[ನೇಪಾಳ, ಭಾರತ ಭೂಕಂಪ ಪೀಡಿತರಿಗೆ ಸಹಾಯವಾಣಿ]

ಏರ್ ಲಿಫ್ಟ್ ಮಾಡಲಾಗಿದೆ: ಹಿಮಾಲಯದಲ್ಲಿ ಮತ್ತಷ್ಟು ಕಂಪನ ಉಂಟಾಗುವ ಭೀತಿ ಎದುರಾಗಿರುವುದರಿಂದ ಎಲ್ಲಾ ಪರ್ವತಾರೋಹಿಗಳನ್ನು ಸುರಕ್ಷಿತ ಸ್ಥಳಗಳಿಗೆ ಏರ್ ಲಿಫ್ಟ್ ಮಾಡಲಾಗಿದೆ. [ಗೂಗಲ್ ಗುರು ಬಳಸಿ ನಿಮ್ಮವರ ಹುಡುಕಾಟ ನಡೆಸಿ]
ಕ್ಯಾಂಪ್ 1 ಹಾಗೂ 2 ನಲ್ಲಿದ್ದ ಸುಮಾರು 200 ಜನ ಟ್ರೆಕ್ಕರ್ಸ್ ರಕ್ಷಿಸಲಾಗಿದೆ. ಹಿಮಪಾತದಿಂದ 19ಜನ ಮಾತ್ರ ಸಾವನ್ನಪ್ಪಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿ ತುಳಸಿ ಪ್ರಸಾದ್ ಗೌತಮ್ ಸುದ್ದಿಗಾರರಿಗೆ ತಿಳಿಸಿದರು. [ನೇಪಾಳ ಭೂಕಂಪಕ್ಕೆ ಕರ್ನಾಟಕ ನೆರವಿನ ಸುನಾಮಿ!]
ಬೆಂಗಳೂರಿನ ಜೆಪಿ ನಗರದ ನಿವಾಸಿ 29 ವರ್ಷ ಪ್ರವೀಣ್ ಅವರನ್ನು ಕ್ಯಾಂಪ್ 2 ರಿಂದ ಹೆಲಿಕಾಪ್ಟರ್ ಮೂಲಕ ಏರ್ ಲಿಫ್ಟ್ ಮಾಡಿ ಸುರಕ್ಷಿತ ಸ್ಥಳಕ್ಕೆ ಕರೆ ತರಲಾಗಿದೆ. [ಆಪರೇಷನ್ ಮೈತ್ರಿ ಕಾರ್ಯಾಚರಣೆ ಚಿತ್ರಗಳು]

ನಾನು ಸುರಕ್ಷಿತವಾಗಿದ್ದೇನೆ ಎಂದ ಪ್ರವೀಣ್ ಸಿಎಂ
ಭಾನುವಾರದಿಂದ ಪ್ರವೀಣ್ ಹೇಗಿದ್ದಾರೆ ಎಂಬ ಸುದ್ದಿ ಸಿಕ್ಕಿರಲಿಲ್ಲ. ಜೆಪಿ ನಗರದ ನಿವಾಸಿ 29 ವರ್ಷದ ಟ್ರೆಕ್ಕರ್ ಎವರೆಸ್ಟ್ ನ ಕ್ಯಾಂಪ್ 2(ಸಮುದ್ರಮಟ್ಟದಿಂದ 6,000 ಮೀಟರ್ ಎತ್ತರ) ರಲ್ಲಿ ಸಿಲುಕಿದ್ದರು. ಎರಡು ದಿನಗಳ ಬಳಿಕ ನಾಲ್ಕು ತಾಸುಗಳ ನಡಿಗೆ ನಂತರ 50ಜನರ ತಂಡದ ಜೊತೆಗೆ ಕ್ಯಾಂಪ್ 1 ಸೇರಿದ್ದಾರೆ. ಅಲ್ಲಿಂದ 5 ಗಂಟೆ ಟ್ರೆಕ್ ಮಾಡಿ ಬೇಸ್ ಕ್ಯಾಂಪ್ ತಲುಪಿದ್ದಾರೆ. ಇಲ್ಲಿಂದ ಏರ್ ಲಿಫ್ಟ್ ಮಾಡಿ ಲೂಕ್ಲಾ ವಿಮಾನ ನಿಲ್ದಾಣ ತಲುಪಬೇಕಿದೆ. ಅಲ್ಲಿಂದ ಕಠ್ಮಂಡುವಿಗೆ ಮತ್ತೆ ವಿಮಾನಯಾನ ಮಾಡಬೇಕಿದೆ.

ಪ್ರತಿಕೂಲ ಹವಾಮಾನದಿಂದ ರಕ್ಷಣಾ ಕಾರ್ಯ ಕಷ್ಟ
ಸತತ ಕಂಪನ, ಹಿಮಪಾತದಿಂದ ಎವರೆಸ್ಟ್ ಕ್ಯಾಂಪ್ 1, ಕ್ಯಾಂಪ್ 2 ರ ನಡುವೆ ಸಂಪರ್ಕ ತಪ್ಪಿ ಹೋಗಿತ್ತು. ಬೇಸ್ ಕ್ಯಾಂಪಿನಲ್ಲೇ 22 ಜನ ಸಾವನ್ನಪ್ಪಿರುವ ಸುದ್ದಿ ಸಿಕ್ಕಿತ್ತು. ಹೀಗಾಗಿ ಪರ್ವತಾರೋಹಿಗಳಿಗೆ ದಿಕ್ಕು ತೋಚದಂಥ ಪರಿಸ್ಥಿತಿ ಇತ್ತು. ಅದರೆ, ಧೈರ್ಯ ಮಾಡಿ ಬೇಸ್ ಕ್ಯಾಂಪ್ ತಲುಪಿದ್ದಾರೆ.ಹವಾಮಾನ ವೈಪರೀತ್ಯ ಹೆಲಿಕಾಪ್ಟರ್ ಹಾರಾಟ ಕಷ್ಟವಾಗುತ್ತಿದೆ.

ಗೂಗಲ್ ಸಿಬ್ಬಂದಿ ದುರ್ಮರಣ
ಎವರೆಸ್ಟ್ ಪರ್ವತ ಶ್ರೇಣಿಯಲ್ಲಿ ಸಂಭವಿಸಿದ ಹಿಮಪಾತದಲ್ಲಿ ಗೂಗಲ್ ಸಂಸ್ಥೆಯ ಸಿಬ್ಬಂದಿ ಡಾನ್ ಫ್ರೆಡಿಂಗ್ ಬರ್ಗ್ ಎಂಬುವರು ಸಾವನ್ನಪ್ಪಿದ್ದಾರೆ. ಕ್ಯಾಲಿಫೋರ್ನಿಯಾ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಡಾನ್ ಅವರ ಜೊತೆ ಇನ್ನೂ ಮೂರು ಜನ ಸಿಬ್ಬಂದಿ ಎಬಿಸಿ ಕಡೆಗೆ ತೆರಳಿದ್ದರು. ಈ ಪೈಕಿ ಡಾನ್ ಮೃತಪಟ್ಟಿದ್ದರೆ ಉಳಿದ ಮೂವರು ಸುರಕ್ಷಿತರಾಗಿದ್ದಾರೆ ಎಂದು ಗೂಗಲ್ ತಿಳಿಸಿದೆ.
|
ಕ್ಯಾಂಪ್ 1ರಲ್ಲಿ ಇನ್ನೂ ಕಾದಿರುವ ಸಾಹಸಿಗಳು
ಪ್ರತಿಕೂಲ ಹವಾಮಾನ ಇದ್ದರೂ ತಾಳ್ಮೆಯಿಂದ ಎವರೆಸ್ಟ್ ಎರಲು ಕಾದು ಕುಳಿತಿರುವ ಸಾಹಸಿಗಳು ಕ್ಯಾಂಪ್ 1ರಲ್ಲೇ ಇದ್ದಾರೆ. 9 ಶೇರ್ಪಾಗಳು, 8 ಜನ ಪರ್ವತಾರೋಹಿಗಳು ಸಮುದ್ರಮಟ್ಟದಿಂದ 20,000 ಅಡಿ ಎತ್ತರಲ್ಲಿ ಸಾವನ್ನಪ್ಪಿದದರೆ.
|
ಬೇಸ್ ಕ್ಯಾಂಪ್ ನಿಂದ ಲೂಕ್ಲಾಗೆ ಹಾರಾಟವೇ ಕಷ್ಟ
ಬೇಸ್ ಕ್ಯಾಂಪ್ ನಿಂದ ಲೂಕ್ಲಾಗೆ ಹಾರಾಟವೇ ಕಷ್ಟವಾಗಿದೆ. ಬೇಸ್ ಕ್ಯಾಂಪಿನಿಂದ ಐದಾರು ದಿನಗಳ ಕಾಲ ನಡಿಗೆ ಮೂಲಕ ನಮ್ಚೆ ಬಜಾರ್ ಮಾರ್ಗವಾಗಿ ಲೂಕ್ಲಾ ವಿಮಾನ ನಿಲ್ದಾಣ ತಲುಪಬಹುದು. ಅದರೆ, ಪ್ರತಿಕೂಲ ಹವಾಮಾನದಿಂದ ಹೆಲಿಕಾಪ್ಟರ್ ಹಾರಾಟಕ್ಕೂ ತೊಂದರೆಯಾಗಿದೆ. ರಷ್ಯನ್ ನಿರ್ಮಿತ ಭಾರತೀಯ ಸೇನೆಯ ಹೆಲಿಕಾಪ್ಟರ್ ಮೇಲೆ ಎಲ್ಲರ ನಿರೀಕ್ಷೆ ನೆಟ್ಟಿದೆ.












Click it and Unblock the Notifications