ಮಾ.21ಕ್ಕೆ ಬೆಂಗಳೂರು ಏರ್ಪೋರ್ಟ್ಗೆ ನವೀನ್ ಮೃತದೇಹ; ಸಿಎಂ ಬೊಮ್ಮಾಯಿ
ಬೆಂಗಳೂರು, ಮಾರ್ಚ್ 18: ಉಕ್ರೇನ್ನಲ್ಲಿ ರಷ್ಯಾ ಶೆಲ್ ದಾಳಿಗೆ ಮೃತಪಟ್ಟಿದ್ದ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮದ ವೈದ್ಯಕೀಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಪಾರ್ಥಿವ ಶರೀರ ಸೋಮವಾರ (ಮಾ.21) ಬೆಳಗ್ಗೆ 3 ಗಂಟೆಗೆ ಬೆಂಗಳೂರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
21-3-2022ರ ಸೋಮವಾರದಂದು ನಸುಕಿನ 3.0 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಎಮಿರೇಟ್ಸ್ ಏರ್ಲೈನ್ಸ್ ವಿಮಾನ ಸಂಖ್ಯೆ EK568ರಲ್ಲಿ ನವೀನ್ ಮೃತದೇಹ ಆಗಮಿಸಲಿದೆ.
ಶುಕ್ರವಾರ ಅಂತರರಾಜ್ಯ ಜಲ ವಿವಾದ ಕುರಿತು ಸರ್ವ ಪಕ್ಷ ಸಭೆ ನಡೆಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ಈ ವಿಷಯವನ್ನು ಅವರು ತಿಳಿಸಿದರು. ನವೀನ್ ಮೃತದೇಹ ಈಗಾಗಲೇ ಪತ್ತೆಯಾಗಿದ್ದು, ಪಾರ್ಥಿವ ಶರೀರ ತರಲು ಎಲ್ಲ ರೀತಿಯ ಸಿದ್ಧತೆ ನಡೆಯುತ್ತಿದೆ. ಸೋಮವಾರ ಪಾರ್ಥಿವ ಶರೀರ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಗುವುದು ಎಂದು ಮಾಹಿತಿ ನೀಡಿದರು.
ಮಾರ್ಚ್ 1ರಂದು ಉಕ್ರೇನ್ನ ಖಾರ್ಕೀವ್ನಲ್ಲಿ ರಷ್ಯಾ ನಡೆಸಿದ ದಾಳಿಯಲ್ಲಿ ನವೀನ್ ಶೇಕರಪ್ಪ ಮೃತಪಟ್ಟಿದ್ದರು. ಯುದ್ಧದಿಂದಾಗಿ ಮೃತದೇಹ ತರಲು ಸಾಧ್ಯವಾಗಿರಿಲ್ಲ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಸತತ ಶ್ರಮಪಟ್ಟಿತ್ತು.

ಘಟನೆ ನಡೆದ ಖಾರ್ಕೀವ್ನಲ್ಲಿ ಈಗಿನ ಪರಿಸ್ಥಿತಿಯ ಕಾರಣ ಅಲ್ಲಿಗೆ ಯಾವುದೇ ವಿಮಾನಗಳು ತೆರಳುತ್ತಿಲ್ಲ. ಜೊತೆಗೆ ಸಮೀಪದಲ್ಲೂ ಎಲ್ಲೂ ಏರ್ಸ್ಟ್ರಿಪ್ ಕೂಡಾ ಇಲ್ಲ. ಹೀಗಾಗಿ ನವೀನ್ ಮೃತದೇಹವನ್ನು ಭಾರತಕ್ಕೆ ತರುವಲ್ಲಿ ವಿಳಂಬವಾಗಿತ್ತು. ಭಾರತದ ಸತತ ಪ್ರಯತ್ನದಿಂದ ಸೋಮವಾರ ಬೆಳಗ್ಗೆ ನವೀನ್ ಮೃತದೇಹ ಭಾರತಕ್ಕೆ ಆಗಮಿಸುತ್ತಿದೆ.
ನವೀನ್ ಸಾವನ್ನಪ್ಪಿ ಈಗಾಗಲೇ ಹದಿನೈದಕ್ಕೂ ಹೆಚ್ಚು ದಿನಗಳು ಕಳೆದಿವೆ. ಆದರೆ, ಅವರ ಪಾರ್ಥಿವ ಶರೀರ ಮಾತ್ರ ಇದುವರೆಗೂ ಬಂದಿಲ್ಲ. ಅವರ ಪಾರ್ಥಿವ ಶರೀರವನ್ನು ಉಕ್ರೇನ್ನಿಂದ ತರಿಸುವ ಸಂಬಂಧ ಸರ್ಕಾರ ಕೇಂದ್ರಕ್ಕೆ ಒತ್ತಾಯ ಹಾಕಲಾಗಿದೆ. ಉಕ್ರೇನ್ನಲ್ಲಿ ಯುದ್ಧ ಪರಿಸ್ಥಿತಿ ಭೀಕರವಾಗಿದ್ದು, ಅವರ ಶರೀರ ರವಾನೆಗೆ ಉಕ್ರೇನ್ ಅಧಿಕಾರಿಗಳ ಜೊತೆ ಭಾರತೀಯ ರಾಯಭಾರಿ ಕಚೇರಿ ಸಿಬ್ಬಂದಿಗಳು ಚರ್ಚೆ ನಡೆಸುತ್ತಿದ್ದಾರೆ ಎಂದು ಕಳೆದ ಎರಡು ದಿನಗಳ ಹಿಂದೆ ಸಿಎಂ ಬೊಮ್ಮಾಯಿ ಸದನಕ್ಕೆ ತಿಳಿಸಿದ್ದರು.

ಸಾವನ್ನಪ್ಪಿದ ಮೂರು ದಿನಗಳ ಬಳಿಕ ನವೀನ್ ಶವ ಪತ್ತೆ
ನವೀನ್ ಸಾವನ್ನಪ್ಪಿದ ಮೂರು ದಿನಗಳ ಬಳಿಕ ಉಕ್ರೇನ್ನಲ್ಲಿ ನವೀನ್ ಮೃತ ದೇಹದ ಗುರುತು ಪತ್ತೆಯಾಗಿರುವ ಕುರಿತು ಕೂಡ ಮುಖ್ಯಮಂತ್ರಿಗಳು ತಿಳಿಸಿದ್ದರು. ನವೀನ್ ಮೃತದೇಹ ಪತ್ತೆಯಾಗಿದ್ದು, ಶೆಲ್ ದಾಳಿಯಿಂದ ಸಾವನ್ನಪ್ಪಿರುವುದು ದೃಢವಾಗಿದೆ. ಉಕ್ರೇನ್ ಶವಾಗಾರದಲ್ಲಿ ಅವರ ಶವವನ್ನು ಇರಿಸಲಾಗಿದ್ದು, ಆದಷ್ಟು ಬೇಗ ವಿದೇಶಾಂಗ ಇಲಾಖೆ ಪಾರ್ಥಿವ ಶರೀರ ತರಿಸುವ ಸಂಬಂಧ ಕ್ರಮ ಕೈಗೊಳ್ಳಲಿದೆ ಎಂದಿದ್ದರು.
ನವೀನ್ ಮೃತದೇಹ ತರಲು ಸೂಚಿಸಿದ್ದ ಪ್ರಧಾನಿ ಮೋದಿ
ಉಕ್ರೇನ್ ಪರಿಸ್ಥಿತಿ ಹಾಗೂ ಭಾರತೀಯರ ರಕ್ಷಣೆ ಕುರಿತು ನಡೆಸಿದ ವಿಶೇಷ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವೈದ್ಯಕೀಯ ವಿದ್ಯಾರ್ಥಿ ನವೀನ್ ಶೇಖರಪ್ಪ ಗ್ಯಾನಗೌಡರ್ ಮೃತದೇಹವನ್ನು ಭಾರತಕ್ಕೆ ತರಿಸಲು ಅಗತ್ಯವಿರುವ ಎಲ್ಲ ಪ್ರಯತ್ನಗಳನ್ನೂ ನಡೆಸುವಂತೆ ಸೂಚನೆ ನೀಡಿದ್ದರು. ಸಂಪುಟ ಸಭೆಯಲ್ಲಿ ಮೋದಿ ಅವರು ಅಧಿಕಾರಿಗಳಿಗೆ ಈ ಸಂಬಂಧ ಸ್ಪಷ್ಟ ನಿರ್ದೇಶನ ನೀಡಿದ್ದರು.

ರಾಜ್ಯ ಸರ್ಕಾರದಿಂದ 25 ಲಕ್ಷ ರೂ. ಪರಿಹಾರ
ಶೆಲ್ ದಾಳಿಗೆ ಸಾವನ್ನಪ್ಪಿದ ನವೀನ್ ಕುಟುಂಬಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಅನೇಕ ಶಾಸಕರು, ಸಚಿವರು ಸಾಂತ್ವನ ಹೇಳಿದ್ದರು. ಮೃತಪಟ್ಟ ನವೀನ್ ಕುಟುಂಬಕ್ಕೆ ಸಿಎಂ ಬೊಮ್ಮಾಯಿ ರಾಜ್ಯ ಸರ್ಕಾರದಿಂದ 25 ಲಕ್ಷ ರೂ. ಪರಿಹಾರದ ಚೆಕ್ ಅನ್ನು ಕೂಡ ವಿತರಿಸಿದ್ದರು. ಇನ್ನು ಪಾರ್ಥಿವ ಶರೀರ ತರಿಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವುದಾಗಿ ಸಿದ್ದರಾಮಯ್ಯ ಕೂಡ ತಿಳಿಸಿದ್ದರು.
ಭಾರತದ 'ಆಪರೇಷನ್ ಗಂಗಾ' ಅಡಿಯಲ್ಲಿ ಈಗಾಗಲೇ ಉಕ್ರೇನ್ನಲ್ಲಿ ಸಿಲುಕಿದ್ದ ದೇಶದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರಲಾಗಿದೆ. ನವೀನ್ ಜೊತೆ ಇದ್ದ ಸ್ನೇಹಿತರು ಕೂಡ ಈಗಾಗಲೇ ಸುರಕ್ಷಿತವಾಗಿ ಬಂದು ಇಳಿದಿದ್ದು, ನವೀನ್ ಮನೆಗೆ ಭೇಟಿ ನೀಡಿ ಅವರ ಉಕ್ರೇನ್ನಲ್ಲಿ ತಮಗೆ ಮಾಡಿದ ಸಹಾಯ ನೆನೆದು ಕಣ್ಣೀರು ಹಾಕಿದ್ದರು.
ಅಂತಿಮ ವಿಧಿ- ವಿಧಾನ ನಡೆಸದ ಕುಟುಂಬ
ಮಗ ಸಾವನ್ನಪ್ಪಿದ್ದು ಆತನ ಪಾರ್ಥಿವ ಶರೀರ ಬಾರದ ನೋವಿನಲ್ಲಿ ಚಳಗೇರಿಯ ಗ್ಯಾನಗೌಡರ್ ಕುಟುಂಬಸ್ಥರು ಇದ್ದಾರೆ. ಈಗಾಗಲೇ ಮೂರು ದಿನದ ಕಾರ್ಯ ಮಾಡಿರುವ ಕುಟುಂಬಸ್ಥರು ಅಂತಿಮ ವಿಧಿ ವಿಧಾನ ನಡೆಸಲು ನವೀನ್ ಪಾರ್ಥಿವ ಶರೀರಕ್ಕೆ ಎದುರು ನೋಡುತ್ತಿದ್ದಾರೆ. ನವೀನ್ ಪೋಷಕರಿಗೆ ಸಮಾಧಾನ ಮಾಡಿದ ಸಿಎಂ ಸೇರಿದಂತೆ ಎಲ್ಲಾ ರಾಜಕೀಯ ಮುಖಂಡರಿಗೂ ತಮ್ಮ ಮಗನ ಪಾರ್ಥಿವ ಶರೀರವನ್ನು ತರಿಸುವ ವ್ಯವಸ್ಥೆ ಮಾಡುವಂತೆ ಅವರು ಮನವಿ ಮಾಡಿದ್ದರು.












Click it and Unblock the Notifications