ಬಜೆಟ್ಟಿಗೂ ಮುನ್ನ ಮೋದಿ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ
ಬೆಂಗಳೂರು, ಫೆಬ್ರವರಿ 8 : "ನರೇಂದ್ರ ಮೋದಿಯವರು ಅತ್ಯಂತ ವ್ಯವಸ್ಥಿತವಾಗಿ ರಾಷ್ಟ್ರದ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದ್ದಾರೆ. ಅವರು ಜನರ ದಾರಿ ತಪ್ಪಿಸುತ್ತಿದ್ದಾರೆ" ಎಂದು ಬಜೆಟ್ ಮಂಡನೆಗೂ ಮುನ್ನ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿಯ ವಿರುದ್ಧ ಎಚ್ ಡಿ ಕುಮಾರಸ್ವಾಮಿ ಅವರು ಹರಿಹಾಯ್ದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ವಿರುದ್ಧ ಎಲ್ಲ ವಿರೋಧ ಪಕ್ಷಗಳು ಎದ್ದೇಳಬೇಕು. ಸಂಸತ್ತಿನಲ್ಲಿ ಎಲ್ಲ ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರ ಎಲ್ಲ 'ಸತ್ಯ'ಗಳನ್ನು ಬಯಲಿಗೆಳೆಯಬೇಕು ಎಂದು ಕುಮಾರಸ್ವಾಮಿ ಅವರು ಶುಕ್ರವಾರ ವಾಗ್ದಾಳಿ ನಡೆಸಿದರು.
ಒಂದು ಕಡೆ ರಾಜಕಾರಣಿಗಳು ಹೇಗೆ ವ್ಯವಹರಿಸಬೇಕೆಂದು ನರೇಂದ್ರ ಮೋದಿಯವರು ಇಡೀ ದೇಶಕ್ಕೆ ಉಪದೇಶ ನೀಡುತ್ತಾರೆ. ಮತ್ತೊಂದೆಡೆ ಕಪ್ಪು ಹಣದ ಮೂಲಕ ದೇಶದ ಪ್ರಭಾಪ್ರಭುತ್ವವನ್ನು ಹೇಗೆ ನಾಶ ಮಾಡಬೇಕು ಎಂದು ತಮ್ಮ ಸ್ನೇಹಿತರನ್ನು ಉತ್ತೇಜಿಸುತ್ತಾರೆ ಎಂದು ಅವರು ಟೀಕಿಸಿದರು.

ಪ್ರಧಾನಿ ಅವರ ಎಲ್ಲ ವ್ಯವಹಾರಗಳ ಬಗ್ಗೆ ನನ್ನ ಬಳಿ ಪುರಾವೆಗಳಿವೆ. ಎಲ್ಲವನ್ನೂ ಬಹಿರಂಗಗೊಳಿಸುತ್ತೇನೆ ಎಂದು ಎಚ್ಚರಿಕೆ ನೀಡಿದ ಅವರು, ನರೇಂದ್ರ ಮೋದಿಯವರಿಗೆ ಏನಾದರೂ ನೈತಿಕತೆ ಎಂಬುದಿದ್ದರೆ ಮೋದಿಯವರು ಕ್ರಮ ತೆಗೆದುಕೊಳ್ಳಲಿ, ಈ ಎಲ್ಲ ಅವ್ಯವಹಾರಗಳನ್ನು ನಿಲ್ಲಿಸಲಿ ಎಂದು ಬಹಿರಂಗ ಸವಾಲು ಒಡ್ಡಿದರು.
ಈಗ ನಡೆಯುತ್ತಿರುವ, ಸನ್ಮಾನ್ಯ ಯಡಿಯೂರಪ್ಪನವರು ನಡೆಸುತ್ತಿರುವ ಆಪರೇಷನ್ ಕಮಲದ ಬಗ್ಗೆ ನರೇಂದ್ರ ಮೋದಿಯವರಿಗೆ ಗೊತ್ತಿಲ್ಲ ಎಂದು ತಿಳಿದಿದ್ದೀರಾ? ಅವರು ಮೋದಿ ಮತ್ತು ಅಮಿತ್ ಶಾ ಅವರ ಪರ್ಮಿಶನ್ ತೆಗೆದುಕೊಂಡೇ ಇದನ್ನೆಲ್ಲ ನಡೆಸುತ್ತಿದ್ದಾರೆ ಎಂದು ಪರೋಕ್ಷವಾಗಿ ಮೋದಿ ವಿರುದ್ಧ ಕಿಡಿಕಾರಿದರು.












Click it and Unblock the Notifications